ಬಿಡದಿ ಟೌನ್ ಶಿಪ್ ವಿವಾದ: ಜಸ್ಟಿಸ್ ಜಿ. ನರೇಂದರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ!

ಬೆಂಗಳೂರು: ನನೆಗುದಿಗೆ ಬಿದ್ದಿರುವ ಮಹತ್ವಾಕಾಂಕ್ಷೆಯ ಬಿಡದಿ ಟೌನ್ ಶಿಪ್ (ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ) ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಭಿನ್ನ ಅಭಿಪ್ರಾಯಗಳ ಸಮಗ್ರ ಪರಿಶೀಲನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿ ಆದೇಶ ಹೊರಡಿಸಿದ್ದಾರೆ.

ಈ ಸಮಿತಿಯು ಯೋಜನೆಯ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಮುಂದಿನ 30 ದಿನಗಳ ಒಳಗಾಗಿ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಿದೆ.

ಸಮಿತಿಯಲ್ಲಿ ಯಾರಿದ್ದಾರೆ?

ಸರ್ಕಾರ ರಚಿಸಿರುವ ಈ ಹೈ-ಪ್ರೊಫೈಲ್ ಸಮಿತಿಯಲ್ಲಿ ಆಡಳಿತಾತ್ಮಕ ಅನುಭವ ಹೊಂದಿರುವ ಪ್ರಮುಖ ಗಣ್ಯರನ್ನು ಒಳಗೊಳ್ಳಲಾಗಿದೆ:

ಅಧ್ಯಕ್ಷರು: ನ್ಯಾಯಮೂರ್ತಿ ಗುಹನಾಥನ್ ನರೇಂದರ್ (ನಿವೃತ್ತ ನ್ಯಾಯಮೂರ್ತಿಗಳು)

ಸದಸ್ಯರು: ಎಸ್.ವಿ. ರಂಗನಾಥ್ (ನಿವೃತ್ತ ಮುಖ್ಯ ಕಾರ್ಯದರ್ಶಿ)

ಸದಸ್ಯರು: ಎಸ್.ಆರ್. ಉಮಾಶಂಕರ್ (ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ)

ಸದಸ್ಯರು: ಪ್ರಸನ್ನಕುಮಾರ್ (ನಿವೃತ್ತ ಐಎಎಸ್ ಅಧಿಕಾರಿ)

ಬಲವಂತದ ಭೂಸ್ವಾಧೀನ ಇಲ್ಲ: ಡಿಕೆಶಿ ಸ್ಪಷ್ಟನೆ

ಯೋಜನೆಗಾಗಿ ರೈತರಿಂದ ಅಥವಾ ಸಾರ್ವಜನಿಕರಿಂದ ಯಾವುದೇ ಕಾರಣಕ್ಕೂ ಬಲವಂತವಾಗಿ ಭೂಮಿಯನ್ನು ಕಿತ್ತುಕೊಳ್ಳುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಕಾನೂನಾತ್ಮಕ ಚೌಕಟ್ಟು, ಮಾನವೀಯ ನೆಲೆಗಟ್ಟು ಹಾಗೂ ಪ್ರದೇಶದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಿತಿಯು ತನ್ನ ಶಿಫಾರಸುಗಳನ್ನು ಸಿದ್ಧಪಡಿಸಲಿದೆ. ಸಾರ್ವಜನಿಕರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

2006ರ ಯೋಜನೆಗೆ ಮರುಜೀವ

ಕಳೆದ 2006ರಲ್ಲೇ ಬಿಡದಿ ಬಳಿ ಸಮಗ್ರ ಉಪನಗರ ನಿರ್ಮಿಸಲು ಬ್ಲೂಪ್ರಿಂಟ್ ಸಿದ್ಧವಾಗಿತ್ತು. ಆದರೆ ವಿವಿಧ ಕಾರಣಗಳಿಂದ ಇದು ಜಾರಿಯಾಗಿರಲಿಲ್ಲ. ಪ್ರಸ್ತುತ ಬೆಂಗಳೂರಿನ ಸುತ್ತಮುತ್ತ ಜಾಗತಿಕ ಬಂಡವಾಳ ಹೂಡಿಕೆಗೆ ಭಾರೀ ಬೇಡಿಕೆ ಸೃಷ್ಟಿಯಾಗಿರುವುದರಿಂದ, ಈ ಯೋಜನೆಯನ್ನು ‘ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ’ ಹೆಸರಿನಲ್ಲಿ ಮರುಜೀವ ನೀಡಲು ಸರ್ಕಾರ ನಿರ್ಧರಿಸಿದೆ.

ಜನವಸತಿ ಪ್ರದೇಶಗಳ ಸ್ಥಳಾಂತರವನ್ನು ಕನಿಷ್ಠ ಮಟ್ಟಕ್ಕೆ ಇಳಿಸುವುದು ಮತ್ತು ಭೂಮಿ ನೀಡುವ ಮಾಲೀಕರಿಗೆ ಮಾರುಕಟ್ಟೆಯಲ್ಲಿ ಗರಿಷ್ಠ ಮೌಲ್ಯ ಸಿಗುವಂತೆ ಮಾಡುವುದು ಸರ್ಕಾರದ ಪ್ರಮುಖ ಆಶಯವಾಗಿದೆ. ಸಾರ್ವಜನಿಕರ ಸಲಹೆ ಹಾಗೂ ಆಕ್ಷೇಪಣೆಗಳಿಗೆ ಮನ್ನಣೆ ನೀಡಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಜನಸ್ನೇಹಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಸರ್ಕಾರ ಹೇಳಿದೆ.

 

Related Articles

Comments (0)

Leave a Comment