ಟಿಕೆಟ್ ರಹಿತ ಪ್ರಯಾಣ: ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಲಕ್ಷಕ್ಕೂ ಅಧಿಕ ಮೊತ್ತದ ದಂಡ ವಸೂಲಿ
- by Suddi Team
- June 17, 2025
- 32 Views

ಹುಬ್ಬಳ್ಳಿ: ರೈಲುಗಳಲ್ಲಿ ಟಿಕೆಟ್ ರಹಿತ ಪ್ರಯಾಣವನ್ನು ಗಂಭೀರವಾಗಿ ಪರಿಗಣಿಸಿರುವ ನೈಋತ್ಯ ರೈಲ್ವೆ ನಿಯಮಿತ ಟಿಕೆಟ್ ತಪಾಸಣೆ ಮೂಲಕ ಆದಾಯ ಸೋರಿಕೆಗೆ ಕಡಿವಾಣ ಹಾಕಲು ಮುಂದಾಗಿದ್ದು ಹುಬ್ಬಳ್ಳಿ ನಿಲ್ದಾಣದಲ್ಲಿ ಒಂದು ಲಕ್ಷ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ದಂಡದ ರೂಪದಲ್ಲಿ ಸಂಗ್ರಹಿಸಿದೆ.
ಟಿಕೆಟ್ ಇಲ್ಲದ ಪ್ರಯಾಣವನ್ನು ಕಡಿಮೆ ಮಾಡುವುದರ ಜೊತೆಗೆ ಮಾನ್ಯ ಹಾಗೂ ನಿಗದಿತ ಪ್ರಯಾಣವನ್ನು ಉತ್ತೇಜಿಸಲು, ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇತ್ತೀಚಿಗೆ ಟಿಕೆಟ್ ತಪಾಸಣಾ ಅಭಿಯಾನ ನಡೆಸಲಾಯಿತು.
ಈ ಕಾರ್ಯಾಚರಣೆಯನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ತಪಾಸಣೆ ನಡೆದಿದ್ದು, ಒಟ್ಟು 23 ಟಿಕೆಟ್ ತಪಾಸಕರು ಮತ್ತು 10 ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿ ನಿಯೋಜಿತ ರಾಗಿದ್ದರು. ಈ ತಪಾಸಣೆಯು ಪ್ರಾರಂಭಿಸುವ ಹಾಗೂ ಹಾದು ಹೋಗುವ ರೈಲುಗಳನ್ನು ಒಳಗೊಂಡಂತೆ 25 ರೈಲುಗಳನ್ನು ವ್ಯಾಪಿಸಿ ಕವಚ ರೂಪದಲ್ಲಿ ನಡೆಯಿತು. ಅಭಿಯಾನದ ಫಲಿತಾಂಶವಾಗಿ ಒಟ್ಟು 181 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಮಾನ್ಯ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿರುವುದು, ಬುಕ್ಕಿಂಗ್ ಮಾಡದ ಸಾಮಾನು ಸಾಗಣೆ ಮತ್ತು ಅನಧಿಕೃತ ವಾಣಿಜ್ಯ ಚಟುವಟಿಕೆಗಳು ಸೇರಿವೆ. ಈ ಎಲ್ಲಾ ಉಲ್ಲಂಘನೆಗಳಿಂದ ₹1 ಲಕ್ಷಕ್ಕೂ ಹೆಚ್ಚು ದಂಡ ವಸೂಲಿಸಲಾಗಿದೆ.
ಪ್ರತಿ ಶುಕ್ರವಾರ ಸುಮಾರು 80 ರೈಲುಗಳ ಕಾರ್ಯಾಚರಣೆ ನಡೆಯುವ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಲ್ಲಿ, ಈ ತಪಾಸಣೆಯ ದಿನದಲ್ಲಿ ಟಿಕೆಟ್ ಮಾರಾಟದಲ್ಲಿ ಗಣನೀಯ ವೃದ್ಧಿಯು ಕಂಡುಬಂದಿತು. ಹೋಲಿಕಾತ್ಮಕವಾಗಿ, ಕಳೆದ ವರ್ಷದ ಇದೇ ದಿನದೊಂದಿಗೆ (14.06.2024) ಹೋಲಿಸಿದಾಗ 20% ಟಿಕೆಟ್ ಮಾರಾಟದ ಏರಿಕೆ ಮತ್ತು ಪ್ರಯಾಣಿಕರ ಸಂಖ್ಯೆಯಲ್ಲಿ 62% ಏರಿಕೆ ಕಂಡುಬಂದಿದೆ. ಹಾಗೆಯೇ, ಹಿಂದಿನ ಶುಕ್ರವಾರದ (06.06.2025) ಜೊತೆ ಹೋಲಿಸಿದಾಗ 10% ಟಿಕೆಟ್ ಮಾರಾಟ ಮತ್ತು 24% ಪ್ರಯಾಣಿಕರ ಏರಿಕೆ ದಾಖಲಾಗಿದೆ. ಇದರೊಂದಿಗೆ, 2025ನೇ ಹಣಕಾಸು ವರ್ಷದ ಏಪ್ರಿಲ್ನಿಂದ ಮೇ ತಿಂಗಳವರೆಗೆ, ಹುಬ್ಬಳ್ಳಿ ವಿಭಾಗವು ₹2.17 ಕೋಟಿ ಟಿಕೆಟ್ ತಪಾಸಣಾ ಆದಾಯವನ್ನು ದಾಖಲಿಸಿದ್ದು, ಇದು ಕಳೆದ ವರ್ಷದ ಇದೇ ಅವಧಿಯ ಹೋಲಿಕೆಯಲ್ಲಿ 24% ಹೆಚ್ಚುವಾಗಿದೆ.
ಈ ರೀತಿಯ ತಪಾಸಣೆಗಳ ಪ್ರಮುಖ ಉದ್ದೇಶವು ಮಾನ್ಯ ಪ್ರಯಾಣವನ್ನು ಉತ್ತೇಜಿಸುವುದು, ಟಿಕೆಟ್ ಇಲ್ಲದ ಮತ್ತು ನಿಯಮ ಉಲ್ಲಂಘನೆಯ ಪ್ರಯಾಣವನ್ನು ತಡೆಯುವುದು ಹಾಗೂ ಸಾರ್ವಜನಿಕರಲ್ಲಿ ನೈತಿಕ ಜವಾಬ್ದಾರಿಯ ಭಾವನೆ ಬೆಳೆಸುವುದಾಗಿದೆ. ಜನಸಾಮಾನ್ಯರ ಅನುಕೂಲಕ್ಕಾಗಿ, ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಲ್ಲಿ 24 ಗಂಟೆಗಳ ಟಿಕೆಟ್ ಸೇವೆ ಲಭ್ಯವಿದ್ದು, ಸಾಮಾನ್ಯ ಹಾಗೂ ಕಾಯ್ದಿರಿಸದ ಟಿಕೆಟ್ಗಳನ್ನು ಯಾವುದೇ ಸಮಯದಲ್ಲಿ ಖರೀದಿಸಬಹುದಾಗಿದೆ.
ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಬೇಲಾ ಮೀನಾ ಅವರು ಈ ಕುರಿತು ಮಾತನಾಡಿ “ಇಂತಹ ತೀವ್ರ ತಪಾಸಣೆಗಳು ನ್ಯಾಯಸಮ್ಮತ ಪ್ರಯಾಣ ಕ್ರಮಗಳ ಪಾಲನೆ ಮತ್ತು ಪ್ರಯಾಣಿಕರ ಭದ್ರತೆಗೆ ನಮ್ಮ ಬದ್ಧತೆಯನ್ನು ತೋರಿಸುತ್ತವೆ. ನಾವು ಎಲ್ಲಾ ಪ್ರಯಾಣಿಕರಲ್ಲಿಯೂ ಅನುಶಾಸನೆ ಮತ್ತು ಜವಾಬ್ದಾರಿತನದ ಸಂಸ್ಕೃತಿಯನ್ನು ಬೆಳೆಸಲು ಉದ್ದೇಶಿಸುತ್ತೇವೆ” ಎಂದು ಹೇಳಿದರು.
Related Articles
Thank you for your comment. It is awaiting moderation.
Comments (0)