ಚೀನಾ ರೇಷ್ಮೆ ಆಮದು ಮಾಡಿಕೊಳ್ಳದಂತೆ ಕೇಂದ್ರ ಸರ್ಕಾರಕ್ಕೆ ಪತ್ರ: ನಾರಾಯಣಗೌಡ

ಬೆಂಗಳೂರು -12 :ಚೀನಾ ರೇಷ್ಮೆ ಆಮದು ಮಾಡಿಕೊಳ್ಳದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ರೇಷ್ಮೆ ಬೆಳೆಗಾರರ ಬೇಡಿಕೆ ಈಡೇರಿಸುವ ಸಂಬಂಧ ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ಸಚಿವ ಡಾ| ನಾರಾಯಣಗೌಡ ಅವರು ತಿಳಿಸಿದ್ದಾರೆ.

ರೇಷ್ಮೆ ಬೆಳೆಗಾರರ ಸಮಸ್ಯೆ ಪರಿಹರಿಸುವ ಸಂಬಂಧ ನಡೆಸಿದ ಸಭೆಯಲ್ಲಿ ಈ ವಿಚಾರವನ್ನು ಅವರು ತಿಳಿಸಿದ್ದಾರೆ. ಚೀನಾ ರೇಷ್ಮೆ ಬರುವುದರಿಂದ ರಾಜ್ಯದ ರೇಷ್ಮೆಗೆ ಬೆಲೆ ಕಡಿಮೆ ಆಗಬಹುದು, ಹಾಗಾಗಿ ಆ್ಯಂಟಿ ಡಂಪಿಂಗ್ ಟ್ಯಾಕ್ಸನ್ನೂ ಹೆಚ್ಚಿಸಿ, ಚೀನಾ ರೇಷ್ಮೆ ಆಮದನ್ನು ನಿಲ್ಲಿಸಿ ಎಂದು ರೈತರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚೀನಾ ರೇಷ್ಮೆ ಆಮದು ನಿಲ್ಲಿಸುವ ಸಂಬಂಧ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಈ ಸಂಬಂಧ ಕೇಂದ್ರ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ಇದೆ. ರಾಜ್ಯ ಸರ್ಕಾರ ಹೂ, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಕೊರೊನಾ ಸಂದರ್ಭದಲ್ಲಿ ಆಗಿರುವ ನಷ್ಟದ ಕಾರಣ ಪರಿಹಾರ ನೀಡಲಾಗಿದೆ. ಲಾಕ್ಡೌನ್ ವೇಳೆಯೂ ರೇಷ್ಮೆ ಬೆಳೆಗಾರರಿಗೆ ಮಾರುಕಟ್ಟೆ ಇದ್ದ ಕಾರಣ ಒಂದಷ್ಟು ಅನುಕೂಲ ಆಗಿತ್ತು. ಆದಾಗ್ಯೂ ಬೆಳೆಗಾರರಿಗೆ ಪ್ರೋತ್ಸಾಹಧನ ಕೊಡಿಸುವ ನಿಟ್ಟಿನಲ್ಲಿ ಸಿಎಂ ಜೊತೆ ಚರ್ಚಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.

ಬಹುಮಹಡಿ ಕಟ್ಟಡದಲ್ಲಿ ನಡೆದ ಸಭೆಯಲ್ಲಿ ಶಾಸಕ ಎ. ಮಂಜು, ರೇಷ್ಮೆ ಬೆಳೆಗಾರರು, ರೈತ ಸಂಘದ ಪ್ರತಿನಿಧಿಗಳು, ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ, ರೇಷ್ಮೆ ಇಲಾಖೆ ಆಯುಕ್ತೆ ಶೈಲಜಾ ಮತ್ತಿತರ ಅಧಿಕಾರಿಗಳು ಉಪಸ್ಥಿರಿದ್ದರು.

Related Articles

Comments (0)

Leave a Comment