“ನೋಂದಣಿಯೇ ಆಗದ ಸಂಘಟನೆಯನ್ನು ನಿಷೇಧಿಸುವ ಪ್ರಶ್ನೆ ಎಲ್ಲಿದೆ?”:  ಪ್ರಿಯಾಂಕ್ ಖರ್ಗೆ 

ಕಲಬುರಗಿ:”ರಾಜ್ಯ ಸರ್ಕಾರ ತರುತ್ತಿರುವ ಹೊಸ ಕರಡು ಮಸೂದೆಯಲ್ಲಿ ಆರ್‌ಎಸ್‌ಎಸ್ ನಿಷೇಧಿಸುವ ಯಾವುದೇ ಪ್ರಸ್ತಾಪವಿಲ್ಲ. ಅಧಿಕೃತವಾಗಿ ನೋಂದಣಿಯೇ ಆಗದ ಸಂಘಟನೆಯನ್ನು ನಿಷೇಧಿಸುವ ಪ್ರಶ್ನೆ ಎಲ್ಲಿಂದ ಬರುತ್ತದೆ?” ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ‘ಸಾರ್ವಜನಿಕ ಆಸ್ತಿ ನಿಯಂತ್ರಣ ಮಸೂದೆ-2026’ ಆರ್‌ಎಸ್‌ಎಸ್ ಸಂಘಟನೆಯನ್ನು ಪರೋಕ್ಷವಾಗಿ ಗುರಿ ಮಾಡುತ್ತಿದೆ ಎಂಬ ಬಿಜೆಪಿಯ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದರು.

ನೋಂದಣಿ ನಿಯಮ ಎಲ್ಲರಿಗೂ ಒಂದೇ

ಬಿಜೆಪಿ ನಾಯಕರ ತೀವ್ರ ಆಕ್ರೋಶಕ್ಕೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, “ದೇಶದಲ್ಲಿ ಲಕ್ಷಾಂತರ ಸ್ವಯಂಸೇವಾ ಸಂಸ್ಥೆಗಳು (NGOs) ಮತ್ತು ಸಂಘಟನೆಗಳು ಕಾನೂನುಬದ್ಧವಾಗಿ ನೋಂದಾಯಿಸಿಕೊಂಡು ಪಾರದರ್ಶಕವಾಗಿ ಕೆಲಸ ಮಾಡುತ್ತವೆ. ನಿಯಮಗಳು ಎಲ್ಲರಿಗೂ ಒಂದೇ ಆಗಿರುತ್ತವೆ. ಹೀಗಿರುವಾಗ ಹೊಸ ಮಸೂದೆಯ ಬಗ್ಗೆ ಇಷ್ಟೊಂದು ಕೋಲಾಹಲ ಎಬ್ಬಿಸುವ ಅಗತ್ಯವೇನಿದೆ? ನನಗೆ ಆರ್‌ಎಸ್‌ಎಸ್ ಬಗ್ಗೆ ಯಾವುದೇ ಭಯವಿಲ್ಲ (ಫೋಬಿಯಾ). ಬದಲಿಗೆ ಬಿಜೆಪಿಯವರಿಗೆ ‘ಪ್ರಿಯಾಂಕ್ ಫೋಬಿಯಾ’ ಶುರುವಾಗಿದೆ. ಆದರೂ, ಆರ್‌ಎಸ್‌ಎಸ್‌ನ ಆಂತರಿಕ ಕಾರ್ಯವೈಖರಿ, ಅವರಿಗೆ ಬರುವ ವಿದೇಶಿ ದೇಣಿಗೆಗಳು ಮತ್ತು ಆದಾಯದ ಮೂಲಗಳ ಬಗ್ಗೆ ನಾನೂ ಇನ್ನು ಹೆಚ್ಚು ತಿಳಿದುಕೊಳ್ಳಲು ಬಯಸುತ್ತೇನೆ” ಎಂದು ಮಾರ್ಮಿಕವಾಗಿ ನುಡಿದರು.

“ಅಂದು ನಮ್ಮನ್ನು ರಕ್ಷಿಸಿದ್ದು ಭಾರತೀಯ ಸೇನೆ, ಆರ್‌ಎಸ್‌ಎಸ್ ಅಲ್ಲ”

ಇದೇ ವೇಳೆ ಬಿಜೆಪಿ ನಾಯಕ ಬಿ.ಎ. ಸಂತೋಷ್ ಅವರು ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮದಲ್ಲಿ “ಹೈದರಾಬಾದ್ ಪ್ರಾಂತ್ಯದ ವಿಮೋಚನೆಯ ಸಂದರ್ಭದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ರಜಾಕರ್‌ಗಳನ್ನು ಎದುರಿಸಿ ಹಿಂದೂ ಕುಟುಂಬಗಳನ್ನು ರಕ್ಷಿಸಿದ್ದರು” ಎಂದು ನೀಡಿದ್ದ ಹೇಳಿಕೆಗೆ ಸಚಿವರು ತೀವ್ರ ವಾಗ್ದಾಳಿ ನಡೆಸಿದರು.

“ರಜಾಕರ್‌ಗಳ ದೌರ್ಜನ್ಯದಿಂದ ಈ ಭಾಗದ ಜನರನ್ನು ರಕ್ಷಿಸಲು ಆರ್‌ಎಸ್‌ಎಸ್ ಬರಲಿಲ್ಲ. ಅಂದು ನಮ್ಮನ್ನು ರಕ್ಷಿಸಿದ್ದು ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ, ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಭಾರತೀಯ ಸೇನೆ. ಸೇನೆಯು ಇಲ್ಲಿಗೆ ಬಂದು ಮಿಲಿಟರಿ ಕಾರ್ಯಾಚರಣೆ ನಡೆಸಿದ್ದರಿಂದಲೇ ಜನರಿಗೆ ಮುಕ್ತಿ ಸಿಕ್ಕಿತು. ಇತಿಹಾಸವನ್ನು ತಿರುಚುವ ಇಂತಹ ಪ್ರಯತ್ನಗಳು ಎಂದಿಗೂ ಯಶಸ್ವಿಯಾಗುವುದಿಲ್ಲ” ಎಂದು ಖರ್ಗೆ ಕಟುವಾಗಿ ಟೀಕಿಸಿದರು.

 

 

Related Articles

Comments (0)

Leave a Comment