ಒಂದು ದೇಶ ಹಲವು ಚುನಾವಣೆಯಿಂದ ದೇಶಕ್ಕೆ ಅಪಾರ ನಷ್ಟ: ಶಿವರಾಜ್ ಸಿಂಗ್ ಚೌಹಾಣ್
- by Suddi Team
- June 8, 2025
- 8 Views

ಬೆಂಗಳೂರು: ದೇಶ, ರಾಜಕೀಯ ಪಕ್ಷಗಳು ಆರು ತಿಂಗಳಿಗೆ ಒಮ್ಮೆ ಒಂದಲ್ಲ ಒಂದು ಚುನಾವಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಕಾರಣ ದೇಶಕ್ಕೆ ಅಪಾರ ನಷ್ಟವಾಗುತ್ತಿದೆ, ಮಾದರಿ ನೀತಿ ಸಂಹಿತೆಯಿಂದ ಎಲ್ಲ ಅಭಿವೃದ್ಧಿ ಕೆಲಸಗಳು ಸ್ಥಗಿತ ಆಗುತ್ತಿವೆ. ದೂರಕಾಲೀನ, ದೂರದೃಷ್ಟಿಯುಳ್ಳ ನಿರ್ಧಾರ ಮಾಡಲೂ ಸಾಧ್ಯ ಆಗುವುದಿಲ್ಲ ಹಾಗಾಗಿ ಒಂದು ದೆಶ ಒಂದು ಚುನಾವಣೆ ಅಗತ್ಯತೆ ಪ್ರಸ್ತುತವಾಗಿದೆ ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ.
ನಗರದ ಕ್ಯಾಪಿಟಲ್ ಹೋಟೆಲ್ ನಲ್ಲಿ ಇಂದು ‘ಒಂದು ದೇಶ ಒಂದು ಚುನಾವಣೆ’ ವಿಷಯದ ಕುರಿತು ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು. ಸಚಿವರು, ಶಾಸಕರು, ಸಂಸದರು ಒಂದಲ್ಲ ಒಂದು ಚುನಾವಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅನಿವಾರ್ಯವಾಗುತ್ತಿದೆ. ಪ್ರಧಾನ ಮಂತ್ರಿಯವರೂ ಚುನಾವಣಾ ಕಣಕ್ಕೆ ಪ್ರಚಾರಕ್ಕೆ ಹೋಗಬೇಕಾಗುತ್ತದೆ. ಚುನಾವಣೆಯಲ್ಲಿ ಬಳಸುವ ಹಣ, ಮಾನವ ಸಂಪನ್ಮೂಲವನ್ನು ಜನಕಲ್ಯಾಣ- ಅಭಿವೃದ್ಧಿಯಲ್ಲಿ ತೊಡಗಿಸಿದರೆ ಎಷ್ಟು ಪ್ರಯೋಜನ ಆದೀತು ಎಂದು ಯೋಚಿಸಿ ನೋಡಿ ಎಂದು ಮನವಿ ಮಾಡಿದರು.
ದೇಶದಲ್ಲಿ ಈಗ ಪ್ರತಿಯೊಂದು ಪಕ್ಷವು 5 ವರ್ಷ, 12 ತಿಂಗಳು, 30 ದಿನ, 24 ಗಂಟೆ ಅಂದರೆ ನಿರಂತರವಾಗಿ ತನ್ನನ್ನು ಚುನಾವಣೆಯಲ್ಲಿ ತೊಡಗಿಸಿಕೊಳ್ಳುವ ಸ್ಥಿತಿ ಇದೆ ಎಂದು ವಿವರಿಸಿದರು. ಮಾದರಿ ನೀತಿ ಸಂಹಿತೆಯಿಂದ ಎಲ್ಲ ಅಭಿವೃದ್ಧಿ ಕೆಲಸಗಳು ಸ್ಥಗಿತ ಆಗುತ್ತಿವೆ. ದೂರಕಾಲೀನ, ದೂರದೃಷ್ಟಿಯುಳ್ಳ ನಿರ್ಧಾರ ಮಾಡಲೂ ಸಾಧ್ಯ ಆಗುವುದಿಲ್ಲ ಎಂದು ತಿಳಿಸಿದರು.
ಮತದಾನ ಆಗಬೇಕೆಂದರೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳು, ಶಿಕ್ಷಕರು, ಆಶಾ ಕಾರ್ಯಕರ್ತೆಯರನ್ನು ಬಳಸಬೇಕಾಗುತ್ತದೆ. ಶಾಲೆ ಆಮೇಲೆ, ಮೊದಲು ಮತದಾರರ ಪಟ್ಟಿ ಎಂಬ ಸ್ಥಿತಿ ಬರುತ್ತದೆ. ನಗರಸಭೆ, ಸ್ಥಳೀಯ ಸಂಸ್ಥೆ ಚುನಾವಣೆ, ವಿಧಾನಸಭೆ, ಲೋಕಸಭೆ ಚುನಾವಣೆಗೆ ತಮ್ಮ ಕೆಲಸ ಬಿಟ್ಟು ಮತದಾರರ ಪಟ್ಟಿ ಮಾಡುವ ಪರಿಸ್ಥಿತಿ ಬರುತ್ತದೆ ಎಂದು ಹೇಳಿದರು.
ಅಪರಾಧಿಯನ್ನು ಬಿಡು; ಮತದಾನದತ್ತ ನೋಡು:
ಮಧ್ಯಪ್ರದೇಶದ ಮುಖ್ಯಮಂತ್ರಿ ಆಗಿದ್ದಾಗ ವಿವಿಧ ರಾಜ್ಯಗಳ ವೀಕ್ಷಕನಾಗಿ ಹೋಗಬೇಕಾಗುತ್ತಿತ್ತು. ಪೊಲೀಸ್, ಆಡಳಿತ ವ್ಯವಸ್ಥೆ ಎಲ್ಲವೂ ಚುನಾವಣೆ ಮೇಲೆ ಗಮನ ಕೇಂದ್ರೀಕರಿಸಬೇಕಾಗುತ್ತದೆ. ಅಪರಾಧಿಯನ್ನು ಬಿಡು; ಮತದಾನದತ್ತ ನೋಡು ಎಂಬ ಪರಿಸ್ಥಿತಿ ಇರುತ್ತದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿ ಈಗಿನ ಚುನಾವಣೆಗಳ ವ್ಯವಸ್ಥೆಯನ್ನು ಮನವರಿಕೆ ಮಾಡಿದರು.
ಮಧ್ಯಪ್ರದೇಶ, ಛತ್ತೀಸ್ಗಡ, ರಾಜಸ್ತಾನ ರಾಜ್ಯಗಳ ಚುನಾವಣೆ ನಡೆದು 4 ತಿಂಗಳಾಗಿರಲಿಲ್ಲ; ನಾನಾಗ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದೆ. ನೀತಿ ಸಂಹಿತೆಯಿಂದ ನಮಗೆ ಅಭಿವೃದ್ಧಿ ಕೆಲಸ ಮಾಡುವುದೇ ಕಷ್ಟಕರವಾಗುತ್ತಿತ್ತು ಎಂದು ತಿಳಿಸಿದರು.
ನಂತರ ಸಂಸತ್ ಚುನಾವಣೆ ನಡೆಯಿತು. ಮೋದಿ ಅವರ ಮೂರನೇ ಅವಧಿಯ ಸಚಿವ ಸಂಪುಟದಲ್ಲಿ ನಾನೂ ಸಚಿವನಾದೆ. ಕೃಷಿ- ಗ್ರಾಮೀಣ ಅಭಿವೃದ್ಧಿ ಸಚಿವನಾಗಿ ಅಧಿಕಾರ ವಹಿಸಿಕೊಂಡೆ. ಸ್ವಲ್ಪ ದಿನಗಳ ಬಳಿಕ ಜಾರ್ಖಂಡ್ ಚುನಾವಣಾ ಉಸ್ತುವಾರಿಯಾಗಿ ಪಕ್ಷ ನಿಯೋಜಿಸಿತು. ವ್ಯವಸಾಯ, ರೈತ ಮತ್ತು ಕೃಷಿ ಇಲಾಖೆ ಖಾತೆ ಬಿಟ್ಟು ನಾನು ಜಾರ್ಖಂಡ್ಗೆ ಓಡಬೇಕಾಯಿತು ಎಂದು ತಿಳಿಸಿದರು. ಜಾರ್ಖಂಡ್, ಹರಿಯಾಣ, ಮಹಾರಾಷ್ಟ್ರ, ಜಮ್ಮು ಕಾಶ್ಮೀರ ರಾಜ್ಯಗಳ ಸಂಸದರು, ಸಚಿವರು, ಮುಖ್ಯಮಂತ್ರಿ, ವಿವಿಧ ಪಕ್ಷಗಳ ಮುಖಂಡರು ಬೇರೆಲ್ಲ ಕೆಲಸ ಬಿಟ್ಟು ಚುನಾವಣಾ ಕಣಕ್ಕೆ ಧುಮುಕಿದ್ದರು ಎಂದು ಹೇಳಿದರು.
ಇದರ ಬಳಿಕ ದೆಹಲಿ ಚುನಾವಣೆ ಬಂತು. ದೆಹಲಿ ಚುನಾವಣೆ ಮುಗಿಯುತ್ತಿದ್ದಂತೆ ಬಿಹಾರದ ಚುನಾವಣೆ ಬರುತ್ತಿದೆ. ಪಶ್ಚಿಮ ಬಂಗಾಲದಲ್ಲಿ ಚುನಾವಣಾ ಸಿದ್ಧತೆ ಆರಂಭಗೊಂಡಿದೆ. ರಾಷ್ಟ್ರದ ನಾಗರಿಕರ ನೆಲೆಯಲ್ಲಿ ಈ ಚುನಾವಣಾ ಪ್ರಕ್ರಿಯೆಗಳನ್ನು ಗಂಭೀರವಾಗಿ ಯೋಚಿಸಿ ನೋಡಿ ಎಂದು ಮನವಿ ಮಾಡಿದರು. 2014ರಲ್ಲಿ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಆಹಾರೋತ್ಪಾದನೆಯಲ್ಲಿ ಶೇ 40ರಷ್ಟು ಏರಿಕೆ ದಾಖಲಿಸಲಾಗಿದೆ. ವಿಕಸಿತ ಭಾರತಕ್ಕಾಗಿ ನಿರಂತರ ಪ್ರಯತ್ನ ನಡೆದಿದೆ ಎಂದು ಅವರು ತಿಳಿಸಿದರು.
ಬಿಜೆಪಿ ರಾಷ್ಟೀಯ ಕಾರ್ಯದರ್ಶಿ ಅನಿಲ್ ಅಂತೋನಿ ಅವರು ಮಾತನಾಡಿ, ಸ್ವಾತಂತ್ರ್ಯಾನಂತರದ ಸುಮಾರು 16 ವರ್ಷಗಳ ಕಾಲ ಒಂದು ದೇಶ ಒಂದು ಚುನಾವಣೆ ನಡೆದಿತ್ತು ಎಂದು ಗಮನ ಸೆಳೆದರು. 1967ರ ಬಳಿಕ ಕಾಂಗ್ರೆಸ್ಸೇತರ ಹಲವು ಸರಕಾರಗಳನ್ನು ವಜಾ ಮಾಡಲಾಗಿತ್ತು. 1970ರಲ್ಲಿ ಯುದ್ಧ ನಡೆದು, ಬಾಂಗ್ಲಾ ದೇಶದ ರಚನೆ ಆಗಿತ್ತು. 1975ರಿಂದ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಈ ಮೂಲಕ ಹಿಂದಿನ ಚುನಾವಣಾ ವ್ಯವಸ್ಥೆ ಏರುಪೇರಾಗಿತ್ತು ಎಂದು ವಿವರಿಸಿದರು.
1983ರಲ್ಲೇ ಚುನಾವಣಾ ಆಯೋಗವು ಒಂದು ದೇಶ ಒಂದು ಚುನಾವಣೆಯ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಬಿಜೆಪಿ ಸ್ಥಾಪಕರಲ್ಲಿ ಪ್ರಮುಖರಾದ ವಾಜಪೇಯಿಜೀ, ಅಡ್ವಾಣಿಜೀ ಮೊದಲಾದವರು ಈ ಪ್ರಸ್ತಾಪವನ್ನು ಒಳ್ಳೆಯ ಕ್ರಮ ಎಂದಿದ್ದರು ಎಂದು ತಿಳಿಸಿದರು. 2029, 2024ರ ಪ್ರಣಾಳಿಕೆಯಲ್ಲಿ ಬಿಜೆಪಿ, ಒಂದು ದೇಶ ಒಂದು ಚುನಾವಣೆ ಜಾರಿ ಬಗ್ಗೆ ತಿಳಿಸಿದೆ ಎಂದರು. ಈ ಪ್ರಸ್ತಾಪವನ್ನು ದೇಶದ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿಟ್ಟಿದ್ದಾರೆ ಎಂದು ವಿಶ್ಲೇಷಿಸಿದರು.
ಈ ಕಾರ್ಯಕ್ರಮದಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.
Comments (0)