ಮಹಿಳೆಯರಿಂದಲೇ ಆಸ್ತಿ ಆಳತೆ, ರಾಮನಗರದಲ್ಲಿ ಯಶಸ್ವಿ ಪ್ರಯೋಗ; ರಾಜ್ಯಾದ್ಯಂತ ವಿಸ್ತರಣೆ ಗುರಿ ಎಂದ ಡಿಸಿಎಂ

ರಾಮನಗರ: ರಾಜ್ಯದ ಗ್ರಾಮೀಣ ಜೀವನೋಪಾಯ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯೆಯರು ಇದೀಗ ಮತ್ತೊಂದು ದಿಟ್ಟ ಹೆಜ್ಜೆಯನ್ನು ಇರಿಸಿದ್ದು, ಮನೆ/ ಆಸ್ತಿ ಅಳತೆ, ತೆರಿಗೆ ಅಂದಾಜು ಮಾಡುವ ಮೂಲಕ ಕೋವಿಡ್- 19 ಸಂಕಷ್ಟದ ಕಾಲದಲ್ಲೂ ಹೊಸ ಜೀವನೋಪಾಯ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದನ್ನು ಕಣ್ಣಾರೆ ಕಂಡು ಪರಿಶೀಲಿಸಿದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಅತೀವ ಸಂತಸ ವ್ಯತ್ಕಪಡಿಸಿದ್ದಾರೆ.

ಜಿಲ್ಲೆಯ ಮೂರು ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರು ಸರ್ವೇ ಕಾರ್ಯಕ್ಕೆ ನಡೆಸುತ್ತಿದ್ದು, ಗ್ರಾಮೀಣ ಜೀವನೋಪಾಯ ಇಲಾಖೆ ಉಸ್ತುವಾರಿ ಹೊಂದಿರುವ ಉಪ ಮುಖ್ಯಮಂತ್ರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ ಆ ಮಹಿಳೆಯರ ಜತೆ ಸಂವಾದವನ್ನೂ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು, ಪ್ರಾಯೋಗಿಕವಾಗಿ ರಾಮನಗರ ಜಿಲ್ಲೆಯಲ್ಲಿ ಮಾಡಲಾಗಿರುವ ಈ ಪ್ರಯತ್ನವೂ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್ ಸಚಿವಾಲಯದ ಜತೆ ಚರ್ಚಿಸಿ ಈ ಅಭಿಯಾನವನ್ನು ರಾಜ್ಯವ್ಯಾಪಿ ವಿಸ್ತರಿಸಲಾಗುವುದು. ಈ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸಬಾಷ್ಯ ಬರೆಯಲಾಗುವುದು ಎಂದು ಪ್ರಕಟಸಿದರು.

ಗ್ರಾಮೀಣ ಮಹಿಳೆಯರ ದಿಟ್ಟತನ, ಸ್ವಾವಲಂಭನೆಯ ಹೆಗ್ಗುರಿಗೆ ಇದೊಂದು ಉತ್ತಮ ಉದಾಹರಣೆ. ಇನ್ನು ಮುಂದೆ ರಾಜ್ಯಾದ್ಯಂತ ಆಸ್ತಿಗಳ ಸರ್ವೇ, ತೆರಿಗೆ ಅಂದಾಜನ್ನು ಮಹಿಳೆಯರೇ ಮಾಡಲಿದ್ದಾರೆ. ಜತೆಗೆ ಮುಂದೆ ಆಸ್ತಿ ತೆರಿಗೆಯನ್ನೂ ಮಹಿಳೆಯರೇ ಸಂಗ್ರಹಿಸಲಿದ್ದಾರೆ ಎಂದು ಅವರು ಘೋಷಿಸಿದರು. ಕೋವಿಡ್ ಬಿಕ್ಕಟ್ಟನ್ನು ಸದುಪಯೋಗ ಮಾಡಿಕೊಂಡಿರುವ ಈ ಮಹಿಳೆಯರು ಜಿಲ್ಲಾಡಳಿತದ ನೆರವಿನಿಂದ ಕೈಕೊಂಡಿರುವ ಈ ಜೀವನೋಪಾಯ ಚಟುವಟಿಕೆ ಆರ್ಥಿಕವಾಗಿಯೂ ಅವರಿಗೆ ಅನುಕೂಲ ಮಾಡಿಕೊಟ್ಟಿದೆ. ಇವರೆಲ್ಲರೂ ಮಾಸಿಕ ತಲಾ 15ರಿಂದ 20 ಸಾವಿರ ರೂಪಾಯಿ ಆದಾಯ ಗಳಿಸಿದ್ದಾರೆಂದು ಉಪ ಮುಖ್ಯಮಂತ್ರಿಗಳು ಸಂತಸ ವ್ಯಕ್ತಪಡಿಸಿದರು.

ಇದೇ ವೇಳೆ ಮಹಿಳೆಯರ ಜತೆ ಸಂವಾದ ನಡೆಸಿದ ಅವರು, ನಿಮ್ಮ ಪ್ರಯತ್ನದಿಂದ ನನ್ನ ಮನಸ್ಸು ತುಂಬಿಬಂದಿದೆ. ಆರ್ಥಿಕವಾಗಿ ಸಬಲರಾಗಬೇಕು ಎಂಬ ನಿಮ್ಮ ಉದ್ದೇಶ ಅತ್ಯಂತ ಉತ್ತಮವಾದ್ದು. ನಿಮಗೆ ಬೇಕಿರುವ ಎಲ್ಲ ಸವಲತ್ತುಗಳನ್ನು ನೀಡಲು ಸರಕಾರ ಸಿದ್ಧವಿದೆ. ನಿಮ್ಮ ಉನ್ನತಿಯಲ್ಲೇ ರಾಜ್ಯ, ದೇಶದ ಉನ್ನತಿ ಅಡಗಿದೆ ಎಂದು ನುಡಿದರು.

ಏನಿದು ಯೋಜನೆ?:
ಸ್ವಸಹಾಯ ಗುಂಪುಗಳಲ್ಲಿ ಜೀವನೋಪಯ ಚಟುವಟಿಕೆಗಳಲ್ಲಿ ನಿರತರಾಗಿದ್ದ ಮಹಿಳೆಯರು, ಜಿಲ್ಲೆಯ ಕಂಚುಗಾರನಹಳ್ಳಿ, ಲಕ್ಷ್ಮೀಪುರ ಮತ್ತು ಬನ್ನಿಕುಪ್ಪೆ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಆಸ್ತಿ ಸರ್ವೇ ಕೆಲಸವನ್ನು ಕೈಗೊಂಡಿದ್ದರು. ಜಿಲ್ಲೆಯ ಕಂದಾಯ ಇಲಾಖೆ ಇವರಿಗೆ ತಾಂತ್ರಿಕ ನೆರವು ನೀಡಿತ್ತು. ಇವರು ಸುಮಾರು 3116 ಮನೆಗಳನ್ನು ಆಳತೆ ಮಾಡಿದ್ದು, ಪ್ರತಿ ಮನೆಯ ಅಳತೆಗೆ 50 ರೂ. ನಿಗದಿ ಮಾಡಲಾಗಿದೆ ಎಂದು ಅಭಿಯಾನದ ನಿರ್ದೇಶಕಿ ಡಾ. ಬಿ.ಆರ್. ಮಮತಾ ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಇಡೀ ರಾಜ್ಯದಲ್ಲಿಯೇ ಇದು ವಿಭಿನ್ನ ಅಭಿಯಾನವಾಗಿದ್ದು, ಸಂಜೀವಿನಿ ಸ್ವಸಹಾಯ ಗುಂಪುಗಳ ಸದಸ್ಯರಾಗಿರುವ, 10ನೇ ತರಗತಿ ಪಾಸಾಗಿರುವ ಕ್ರಿಯಾಶೀಲ ಮಹಿಳೆಯರನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಿದ ನಂತರ ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇವರಿಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಂತ್ರಿಕ ತಂಡ ಅಗತ್ಯ ಮಾರ್ಗದರ್ಶನ ನೀಡುತ್ತದೆ. ಈ ಪ್ರಯತ್ನದಿಂದ ಆಸ್ತಿ ತೆರಿಗೆ ಪ್ರಮಾಣ ಮುಂದಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಸಂವಾದದಲ್ಲಿ ಪಾಲ್ಗೊಂಡಿದ್ದ ಮಹಿಯರು ಸರಕಾರಕ್ಕೆ ಕೃತಜ್ಙತೆ ಸಲ್ಲಿಸಿದರು. ಅಡುಗೆ ಮನೆ ಸೀಮಿತವಾಗಬೇಕಿದ್ದ ನಮ್ಮ ಕ್ರಿಯಾಶೀಲತೆಯನ್ನು ಗುರುತಿಸಿ ಆಸ್ತಿ ಆಳತೆ ಕಾರ್ಯಕ್ಕೆ ನೀಯೋಜಿಸಿದ್ದು ನಮಗೆ ಹೆಚ್ಚು ಅನುಕೂಲವನ್ನು ಉಂಟು ಮಾಡಿದೆ. ಆದಾಯ ಗಳಿಸುವುದರ ಜತೆಗೆ ಹೊಸ ಉದ್ಯೋಗದ ಸಾಧ್ಯತೆಯೂ ನಮಗೆ ಸಿಕ್ಕಿದೆ ಎಂದು ತಿಳಿಸಿದರು.

Related Articles

Comments (0)

Leave a Comment