ಬಿಬಿಎಂಪಿ ಹೆಲ್ತ್ಕೇರ್ಗೆ ಡಿಜಿಟಲ್ ರೂಪ, ಸ್ಮಾರ್ಟ್ ಕ್ಲಿನಿಕ್ಗೆ ಸಿದ್ಧತೆ 65 ವಾರ್ಡ್ಗಳಲ್ಲಿ ಹೊಸದಾಗಿ ಪಿಎಚ್ಸಿ ಸ್ಥಾಪನೆ
- by Suddi Team
- June 1, 2020
- 17 Views

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಡಿಜಿಟಲ್ ರೂಪ ಕೊಟ್ಟು ಅವುಗಳನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ ಇನ್ನೂ 65 ವಾರ್ಡ್ಗಳಲ್ಲಿ ಹೊಸದಾಗಿ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪಾಲಿಕೆ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದಲ್ಲಿನ ಒಟ್ಟು 198 ವಾರ್ಡ್ಗಳಲ್ಲಿ 65 ವಾರ್ಡ್ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳೇ ಇಲ್ಲ. ಹೀಗಾಗಿ ತಕ್ಷಣ ಈ ವಾರ್ಡ್ಗಳಲ್ಲಿ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕು. ಜಾಗ ಸಿಗದಿದ್ದರೆ ಬಾಡಿಗೆ ಕಟ್ಟಡಗಳಲ್ಲಿ ಆರಂಭಿಸುವುದಕ್ಕೆ ಉಪ ಮುಖ್ಯಮಂತ್ರಿ ಸೂಚಿಸಿದರು. ಇದಕ್ಕೆ ಅಧಿಕಾರಿಗಳು ಒಪ್ಪಿ, ತಕ್ಷಣ ಆ ಕೆಲಸ ಮಾಡುವ ಭರವಸೆ ನೀಡಿದರು.
ಆರೋಗ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯದ ಅನೇಕ ಯೋಜನೆಗಳು ನಗರದಲ್ಲಿ ಚಾಲನೆಯಲ್ಲಿದ್ದು, ಒಂದೊಂದು ಯೋಜನೆಯ ಮಾಹಿತಿಯನ್ನೂ ಒಂದೊಂದು ರೀತಿ ಸಂಗ್ರಹಿಸಲಾಗುತ್ತಿದೆ. ಇದರಿಂದ ರೋಗಿಗಳ ಮಾಹಿತಿ ಒಂದಕ್ಕೊಂದು ಜೋಡಣೆಯಾಗುತ್ತಿಲ್ಲ. ಹೀಗಾಗಿ ಎಲ್ಲ ಯೋಜನೆಗಳ ಮಾಹಿತಿಯನ್ನು ಒಂದೇ ಡಿಜಿಟಲ್ ವೇದಿಕೆಗೆ ತಂದು, ಆ ಪ್ರಕಾರ ಚಿಕಿತ್ಸೆ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಇದಕ್ಕೆ ತಂತ್ರಜ್ಞಾನದ ನೆರವು ನೀಡಲು ರಾಜ್ಯ ಸರ್ಕಾರದ ಸ್ಟಾರ್ಟ್ ಅಪ್ ವಿಜನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ ಪ್ರಕಾಶ್ ನೇತೃತ್ವದ ತಂಡ ಮುಂದೆ ಬಂದಿದ್ದು, ಒಂದು ತಿಂಗಳಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ರೋಗಿಯ ಮಾಹಿತಿಯನ್ನು ಸಂಗ್ರಹಿಸಿ, ಏಕರೂಪದ ಡ್ಯಾಷ್ ಬೋರ್ಡ್ ರೂಪಿಸಲಾಗುತ್ತದೆ. ಇದರಿಂದ ಯಾವ ಭಾಗದಲ್ಲಿ ಯಾವ ರೀತಿ ರೋಗಿಗಳು ಇದ್ದಾರೆ; ಅದಕ್ಕೆ ತಕ್ಷಣ ಯಾವ ರೀತಿಯ ಕೈಗೊಳ್ಳಬೇಕು ಎಂಬುದಕ್ಕೂ ಇದು ನೆರವಾಗಲಿದೆ ಎಂದು ಅವರು ಹೇಳಿದರು.
ಇದಲ್ಲದೆ, ನಗರದಲ್ಲಿನ ಎಲ್ಲ ಖಾಸಗಿ ಆಸ್ಪತ್ರೆ ಮತ್ತು ಪ್ರಯೋಗಾಲಯಗಳ ಮಾಹಿತಿ ಕೂಡ ಬಿಬಿಎಂಪಿ ಡ್ಯಾಶ್ ಬೋರ್ಡ್ಗೆ ಸಿಗುವ ಹಾಗೆ ಮಾಡುತ್ತಿದ್ದು, ಇದು ಕೂಡ ಕೋವಿಂಡ್ನಂತಹ ಸಾಂಕ್ರಾಮಿಕ ರೋಗಗಳು ಬಂದಾಗ ತಕ್ಷಣ ಕ್ರಮ ತೆಗೆದುಕೊಳ್ಳಲು ಅನುಕೂಲ ಆಗುತ್ತದೆ ಎಂದರು.
ನಗರದಲ್ಲಿನ ತ್ಯಾಜ್ಯ ನಿರ್ವಹಣೆಯ ಆರೋಗ್ಯ ಕಾರ್ಯಕರ್ತರನ್ನೂ ಆಶಾ ಕಾರ್ಯಕರ್ತರ ಹಾಗೆ ಆರೋಗ್ಯ ಸಂಬಂಧಿ ಮಾಹಿತಿ ಸಂಗ್ರಹಿಸಲು ಬಳಸಿಕೊಳ್ಳಲಾಗುವುದು. ಇದಕ್ಕೆ ಅಗತ್ಯ ಇರುವ ಟ್ಯಾಬ್ಗಳನ್ನೂ ಕೊಡಲಾಗುವುದು ಎಂದರು.
ಸ್ಮಾರ್ಟ್ ಕ್ಲಿನಿಕ್:
ತಜ್ಞ ವೈದ್ಯರ ಚಿಕಿತ್ಸೆ ಬಡವರಿಗೂ ಸಿಗಬೇಕು ಎನ್ನುವ ಕಾರಣಕ್ಕೆ ಕೇಂದ್ರೀಕೃತ ಆರೋಗ್ಯ ಕೇಂದ್ರಗಳನ್ನು ನಗರದ ಐದು ಕಡೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಕೇಂದ್ರಗಳಲ್ಲಿನ ತಜ್ಞ ವೈದ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಇ-ಕ್ಲಿನಿಕ್ಗಳ ಮೂಲಕ ರೋಗಿಗಳನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಲಿದ್ದಾರೆ ಎಂದು ವಿವರಿಸಿದರು.
ಬಿಬಿಎಂಪಿ ಹೆಲ್ತ್ಕೇರ್:
ಈ ಎಲ್ಲ ಆಧುನಿಕ ತಂತ್ರಜ್ಞಾನ ಮತ್ತು ವಿವಿಧ ರೀತಿಯ ತಜ್ಞರಿಂದ ಚಿಕಿತ್ಸೆ ಕೊಡುವ ಈ ಯೋಜನೆಗೆ ಬಿಬಿಎಂಪಿ ಹೆಲ್ತ್ಕೇರ್ ಎಂದು ಹೆಸರಿಟ್ಟು, ಅದನ್ನೇ ಬ್ರ್ಯಾಂಡ್ ಮಾಡುವಂತೆ ಉಪ ಮುಖ್ಯಮಂತ್ರಿ ಸೂಚಿಸಿದರು. ಇದಕ್ಕೆ ಸಿಎಸ್ಆರ್ ನಿಧಿಯನ್ನೂ ಪಡೆದು, ಮತ್ತಷ್ಟು ಉತ್ಕೃಷ್ಟವಾದಂತಹ ಚಿಕಿತ್ಸಾ ಸೌಲಭ್ಯಗಳನ್ನು ಬಡವರಿಗೆ ಒದಗಿಸಬಹುದು ಎಂದು ಹೇಳಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮೇಯರ್ ಗೌತಮಕುಮಾರ್, ಉಪ ಮೇಯರ್ ಮೋಹನರಾಜು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು, ಪಾಲಿಕೆ ಆಯುಕ್ತ ಅನಿಲಕುಮಾರ್ ಸೇರಿದಂತೆ ಆರೋಗ್ಯ ವಿಭಾಗದ ಎಲ್ಲ ಅಧಿಕಾರಿಗಳು ಭಾಗವಹಿಸಿದ್ದರು.
Related Articles
Thank you for your comment. It is awaiting moderation.
Comments (0)