ಧಾರವಾಡ ಪೇಡಾದಂತೆ ನಿಮ್ಮ ಬದುಕಲ್ಲಿ ಸಿಹಿ ತುಂಬಲಿ: ಮೋದಿ
- by Suddi Team
- February 10, 2019
- 29 Views

ಹುಬ್ಬಳ್ಳಿ: ಬೇನಾಮಿ ಹೆಸರಲ್ಲಿ ದುಡ್ಡು ಮಾಡಿದವರನ್ನು ಟಚ್ ಮಾಡಲು ಆಗುತ್ತಿರಲಿಲ್ಲ. ಈಗ ಅಂತಹವರು ಕಟಕಟೆಯಲ್ಲಿ ನಿಲ್ಲಬೇಕಾದ ಸ್ಥಿತಿ ಬಂದಿದೆ. ಇದೇ ನಿಜವಾದ ಬದಲಾವಣೆ ಎನ್ನುವ ಮೂಲಕ ಪ್ರಿಯಾಂಕಾ ರಾಜಕೀಯ ಪ್ರವೇಶದ ನಂತರ ಮೊದಲ ಬಾರಿಗೆ ರಾಬರ್ಟ್ ವಾದ್ರಾ ವಿರುದ್ಧ ಪ್ರಧಾನಿ ಮೋದಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಐಐಟಿ ಕಟ್ಟಡ ಶಂಕುಸ್ಥಾಪನೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ನಿಮ್ಮ ಪ್ರೀತಿ ಆಶೀರ್ವಾದಕ್ಕೆ ನಾನು ಆಭಾರಿಯಾಗಿದ್ದೇನೆ. ಇವತ್ತು ವಸಂತಪಂಚಮಿ, ವಾತಾವರಣ ಬದಲಾಗುತ್ತಿದೆ. ಇವತ್ತು ದೊಡ್ಡ ಪ್ರಮಾಣದಲ್ಲಿ ನೀವು ಆಗಮಿಸಿದ್ದೀರಿ. ಸದ್ಯದ ರಾಜ್ಯ ರಾಜಕೀಯ ಬದಲಾವಣೆಯ ಅನುಭವ ನನಗೆ ಆಗುತ್ತಿದೆ ಎಂದರು.
ಸಿದ್ಧಗಂಗಾ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ, ಸಿದ್ಧಾರೂಢರು, ಗುರುಸಿದ್ಧ ಸ್ವಾಮೀಜಿಗಳು, ತೋಂಟದ ಶ್ರೀಗಳನ್ನು ಸ್ಮರಿಸಿದರು. ಇದು ವೀರರ ನಾಡು. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿರಾಯಣ್ಣ, ಕುಮಾರವ್ಯಾಸ, ಕನಕದಾಸ, ದ.ರಾ. ಬೇಂದ್ರೆ, ಗಂಗೂಬಾಯಿ ಹಾನಗಲ್, ಕುಮಾರ್ ಗಂಧರ್ವರನ್ನು ಸ್ಮರಿಸುತ್ತೇನೆ ಎಂದು ಹೇಳಿದರು.
ನಾವು ವರ್ತಮಾನದ ಜೊತೆಗೆ ಭವಿಷ್ಯದ ಅವಶ್ಯಕತೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಹುಬ್ಬಳ್ಳಿಯಲ್ಲಿ ಮನೆಮನೆಗೆ ಗ್ಯಾಸ್ ಕನೆಕ್ಷನ್ ಕೊಡುತ್ತಿದ್ದೇವೆ. ದೇಶದ ಬಡ ಜನರಿಗೆ ಸದೃಢ ಮನೆಗಳನ್ನು ಕೊಡುತ್ತಿದ್ದೇವೆ. ನಗರ ಪ್ರದೇಶದ ಬಡವರು ಮತ್ತು ಮಧ್ಯಮ ವರ್ಗದವರ ಅಭಿವೃದ್ಧಿ ಮಾಡುತ್ತಿದ್ದೇವೆ. ಎಲ್ಲರ ಜೊತೆ ಎಲ್ಲರ ಅಭಿವೃದ್ಧಿ ನಮ್ಮ ಧ್ಯೇಯ ಎಂದು ಪುನರುಚ್ಚರಿಸಿದರು.
ಕಾಂಗ್ರೆಸ್ನವರು ನಲ್ವತ್ತೈದು ವರ್ಷಗಳಲ್ಲಿ ಮಾಡದ ಕೆಲಸವನ್ನು ನಾವು ಐವತ್ತು ತಿಂಗಳಲ್ಲಿ ಮಾಡಿದ್ದೇವೆ.
ಮನೆ ಬಾಡಿಗೆಯಿಂದ ಬರುವ ಆದಾಯಕ್ಕೆ ತೆರಿಗೆ ವಿಧಿಸದಿರಲು ತೀರ್ಮಾನಿಸಲಾಗಿದೆ. ನಿಮ್ಮ ಹಣ ತಿನ್ನುತ್ತಿರುವವರನ್ನು ನಾನು ಮನೆಗೆ ಕಳಿಸುತ್ತಿದ್ದೇನೆ.
ಪ್ರಾಮಾಣಿಕರಿಗೆ ನಾನು ಇಷ್ಟವಾಗುತ್ತೇನೆ, ಭ್ರಷ್ಟರಿಗೆ ನಾನೆಂದರೆ ಕಷ್ಟವಾಗುತ್ತಿದೆ. ದಲ್ಲಾಳಿ ತಿಂದವರ ಪಾಳೆ ಒಂದೊಂದಾಗಿ ಬರುತ್ತಿದೆ. ಭ್ರಷ್ಟರು ರೈತರನ್ನೂ ಬಿಟ್ಟಿಲ್ಲ.
ಕರ್ನಾಟಕದಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ, 60 ಸಾವಿರ ರೈತರ ಸಾಲಮನ್ನಾ ಮಾಡಿದ್ದಾರೆ. ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಕೇವಲ ಶೇಕಡಾ 30 ರಷ್ಟು ರೈತರ ಸಾಲಮನ್ನಾ ಆಗಿದೆ ಎಂದು ಮೈತ್ರಿ ಸರ್ಕಾರದ ಸಾಲ ಮನ್ನಾ ಯೋಜನೆಯನ್ನು ಟೀಕಿಸಿದರು.
ತಮ್ಮ ಖುರ್ಚಿ ಉಳಿಸಿಕೊಳ್ಳಲು ಹೊಡೆದಾಡುತ್ತಿದ್ದಾರೆ.
ಶಾಸಕರು ಹೊಟೇಲ್ಗಳಲ್ಲಿ ಹೊಡೆದಾಡಿ ತಲೆ ಒಡೆದುಕೊಳ್ಳುತ್ತಿದ್ದಾರೆ. ಇಲ್ಲಿನ ಸಿಎಂ ಪ್ರತಿದಿನ ಅಳುತ್ತಿರುತ್ತಾರೆ. ಬೆಳಗಾದರೆ ಖುರ್ಚಿ ಕಾಪಾಡಿಕೊಳ್ಳಲು ಪರದಾಡುತ್ತಿರುತ್ತಾರೆ. ಇಂತಹ ವ್ಯವಸ್ಥೆಯನ್ನು ದೇಶದ ಮೇಲೆ ಹೇರಲು ಹೊರಟಿದ್ದಾರೆ. ನಮಗೆ ಅನಿವಾರ್ಯ ವ್ಯವಸ್ಥೆ ಬೇಕಿಲ್ಲ, ಸಮರ್ಥ ವ್ಯವಸ್ಥೆ ಬೇಕಾಗಿದೆ. ವಿಕಾಸವಾದ ಬೇಕಾ ವಂಶವಾದ ಬೇಕಾ ಎಂದು ಜನ ತೀರ್ಮಾನಿಸುತ್ತಾರೆ. ಧಾರವಾಡ ಪೇಡೆಯಂತೆ ನಿಮ್ಮ ಬದುಕಲ್ಲಿ ಸಿಹಿ ತುಂಬಲಿ ಎಂದು ಭಾಷಣ ಮುಗಿಸಿದರು.
Related Articles
Thank you for your comment. It is awaiting moderation.
Comments (0)