ದೇಶದ ರಕ್ಷಣಾ ವ್ಯವಸ್ಥೆಗೆ ಎಚ್ಎಎಲ್ ಕೊಡುಗೆ’ ಸಂವಾದ ಸಭೆಯಲ್ಲಿ ನಾಳೆ ರಾಹುಲ್ ಭಾಗಿ

ಬೆಂಗಳೂರು: ‘ದೇಶದ ರಕ್ಷಣಾ ವ್ಯವಸ್ಥೆಗೆ ಎಚ್ಎಎಲ್ ಕೊಡುಗೆ’ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಸಂವಾದ ಕಾರ್ಯಕ್ರಮದಲ್ಲಿ ನಾಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಾಲ್ಗೊಂಡು ಮಾತನಾಡಲಿದ್ದಾರೆ.

ಬೆಂಗಳೂರಿನ ಕಬ್ಬನ್ ಪಾರ್ಕ್ ನ ಮಿನ್ಕ್ಸ್ ಸ್ಕ್ವೇರ್ ಬಳಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಮೊದಲ ಈ ಸಂವಾದ ಕಾರ್ಯಕ್ರಮವನ್ನು ಎಚ್ಎಎಲ್ ಆವರಣದಲ್ಲಿಯೇ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಅಲ್ಲಿ ಪರವಾನಗಿ ಸಮಸ್ಯೆ ಎದುರಾಗುವ ಸಾಧ್ಯತೆ ಹಿನ್ನೆಲೆ ಸ್ಥಳ ಬದಲಿಸಲಾಗಿದೆ.

ಏಕೆ ಸಭೆ?

ಕೇಂದ್ರ ಎನ್ಡಿಎ ನೇತೃತ್ವದ ಸರ್ಕಾರದ ರಫೇಲ್ ಯುದ್ಧ ವಿಮಾನ ಕರೀದಿ ವಿರುದ್ಧ ಯುಪಿಎ ನಿರಂತರ ಹೋರಾಟ ನಡೆಸುತ್ತಿದೆ. ಎಚ್ಎಎಲ್ಗೆ ದಕ್ಕಬೇಕಿದ್ದ ಈ ಕರೀದಿ ಟೆಂಡರ್, ಬೇರೆ ದೇಶದ ಖಾಸಗಿ ಕಂಪನಿ ಪಾಲಾಗಿದೆ. ರಿಲಯನ್ಸ್ ಸಂಸ್ಥೆ ಇದರ ಪಾಲುದಾರನಾಗಿದ್ದು, ಯುದ್ಧ ವಿಮಾನ ಸಿದ್ಧಪಡಿಸುವ ಅನುಭವ ಇಲ್ಲದ ಕಂಪನಿಗೆ ಡೀಲ್ ನೀಡಲಾಗಿದೆ. ಅಲ್ಲದೇ ಇದರ ಮೊತ್ತವನ್ನು ಕೂಡ ತಿಳಿಸುತ್ತಿಲ್ಲ. ಎಲ್ಲವನ್ನೂ ಗುಪ್ತವಾಗಿಡಲಾಗಿದೆ. ಇಲ್ಲೊಂದು ದೊಡ್ಡ ವಂಚನೆಯಾಗಿದೆ ಎಂದು ಕಾಂಘ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸುತ್ತಾ ಬಂದಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇದನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ.
ಅತ್ಯಂತ ಪ್ರಮುಖವಾಗಿ ಎಚ್ಎಎಲ್ಗೆ ಈ ಟೆಂಡರ್ ಸಿಕ್ಕಿದ್ದರೆ, ಸಾವಿರಾರು ಯುವಕರಿಗೆ ಉದ್ಯೋಗ ಸಿಗುತ್ತಿತ್ತು. ದೇಶೀಯ ತಂತ್ರಜ್ಞಾನದಲ್ಲಿ ಅತ್ಯುತ್ತಮ, ಗುಣಮಟ್ಟದ ಯುದ್ದ ವಿಮಾನ ಲಭ್ಯವಾಗುತ್ತಿತ್ತು ಎಂದು ಆರೋಪಿಸಿ ಕಾಂಗ್ರೆಸ್ ಹೋರಾಟ ನಡೆಸಿದೆ. ಇದರ ಭಾಗವಾಗಿಯೇ ನಾಳಿನ ಸಂವಾದ ಕಾರ್ಯಕ್ರಮ ಕೂಡ ನಡೆಯಲಿದೆ.

ರಾಹುಲ್ ಭಾಷಣ

ಅದಾಗಲೇ ರಾಹುಲ್ ಗಾಂಧಿ ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದು, ಎಚ್ಎಎಲ್ ಕುರಿತು ಸಮಗ್ರ ಮಾಹಿತಿ ಕಲೆ ಹಾಕಿ ತಮಗೆ ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಅವರಿಗೆ ಎಲ್ಲಾ ಮಾಹಿತಿ ಒದಗಿಸಲಾಗಿದೆ. ಅದನ್ನು ಆಧರಿಸಿ ನಾಳೆ ಅವರು ಸಭೆಯನ್ನು ಉದ್ದೇಶಿಸಿ ಭಾಷಣ ಕೂಡ ಮಾಡಲಿದ್ದಾರೆ. ಒಂದರಿಂದ ಎರಡು ಗಂಟೆ ಈ ಸಂವಾದ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.

ಸಭೆಯಲ್ಲಿ ಯಾರ್ಯಾರು ಭಾಗಿ

ಸಂಸ್ಥೆಯ ನಿವೃತ್ತರು ಹಾಗೂ ನೌಕರರು ಸೇರಿ 100 ಮಂದಿಗೆ ಆಹ್ವಾನ ನೀಡಲಾಗಿದೆ. ಆಹ್ವಾನಿತರ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷರ ಕಾರ್ಯಾಲಯವೇ ಸಿದ್ಧಪಡಿಸಿದೆ. ಅದರಂತೆ ಶನಿವಾರ ಮಧ್ಯಾಹ್ನದ ನಂತರ ಕಾರ್ಯಕ್ರಮ ನಡೆಯಲಿದೆ.

ರಾಹುಲ್ ಪ್ರವಾಸ ವಿವರ

ಮಧ್ಯಾಹ್ನ 1.55ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ರಾಹುಲ್ ಗಾಂಧಿ ನೇರವಾಗಿ ಕುಮಾರಕೃಪ ಅತಿಥಿಗೃಹಕ್ಕೆ ಅಗಮಿಸುತ್ತಾರೆ. 2.30ಕ್ಕೆ ಅಗಮಿಸುವ ಅವರು ಆಯ್ದ ಕೆಲ ನಾಯಕರ ಜತೆ ಸಭೆ ನಡೆಸುತ್ತಾರೆ. ಸಂಜೆ 3.30ಕ್ಕೆ ಕಬ್ಬನ್ ಪಾರ್ಕ್ ನ ಮಿನ್ಕ್ಸ್ ಸ್ಕ್ವೇರ್ ಬಳಿ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಸಂಜೆ 5ರವರೆಗೆ ಇಲ್ಲಿದ್ದು, 6 ಗಂಟೆಗೆ ಮರಳಿ ದಿಲ್ಲಿಗೆ ಪ್ರಯಾಣ ಬೆಳೆಸುತ್ತಾರೆ.

Related Articles

Comments (0)

Leave a Comment