ಜಾಮೀನು ನೀಡುವ ಮುನ್ನ ದುನಿಯಾ ವಿಜಯ್‌ಗೆ ನ್ಯಾಯಾಧೀಶರು ಹೇಳಿದ ಕಿವಿ ಮಾತುಗಳೇನು?

ಬೆಂಗಳೂರು: ಕಳೆದ 10 ದಿನಗಳಿಂದ ಸೆರೆವಾಸದಲ್ಲಿದ್ದ ನಟ ದುನಿಯಾ ವಿಜಯ್‌ಗೆ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದ್ದು, ವಿಜಿ ಸೇರಿದಂತೆ ನಾಲ್ವರು ಆರೋಪಿಗಳು ಬಂಧ ಮುಕ್ತವಾಗಿದ್ದಾರೆ.

ಜಿಮ್ ಟ್ರೈನರ್ ಮಾರುತಿ ಗೌಡ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ದುನಿಯಾ ವಿಜಯ್ ಮತ್ತು ಸ್ನೇಹಿತರು ಪರಪ್ಪನ ಅಗ್ರಹಾರ ಜೈಲು ಸೇರಿ 10 ದಿನಗಳಾಗಿತ್ತು. ಆದ್ರೆ, ಇಂದು ವಿಜಿ ಸೆರೆವಾಸವನ್ನು ನಗರ ಸೆಷನ್ಸ್ ನ್ಯಾಯಾಲಯ ಕೊನೆಗಾಣಿಸಿದೆ. ವಿಜಿ ಆಪ್ತರಾದ ಪ್ರಸಾದ್, ವಿಜಯ್, ಮಣಿ ಹಾಗೂ ಡ್ರೈವರ್ ಪ್ರಸಾದ್ ಸೇರಿದಂತೆ ಎಲ್ಲಾ ಆರೋಪಿಗಳಿಗೆ ನ್ಯಾಯಾಧೀಶ ಪಿ.ಪಿ ರಾಮಲಿಂಗೇಗೌಡ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.

ಜಾಮೀನು ಅರ್ಜಿ ತೀರ್ಪಿಗೂ ಮುನ್ನ ನ್ಯಾಯಾಧೀಶ ಟಿ.ಪಿ ರಾಮಲಿಂಗೇಗೌಡ ನಟ ವಿಜಯ್ ‌ಗೆ ಒಂದಷ್ಟು ಕಿವಿ ಮಾತು ಹೇಳಿದ್ದಾರೆ. ರೀಲ್ ನಲ್ಲಿ ಹೀರೋ ಆಗಿರುವ ನೀವು ರಿಯಲ್ ಲೈಫಲ್ಲೂ ಹೀರೋ ಆಗಿ. ಸಮಾಜಕ್ಕೆ ಒಳ್ಳೆ ಸಂದೇಶ ನೀಡಿ. ಅಭಿಮಾನಿಗಳಿಗೆ ರೋಲ್ ಮಾಡೆಲ್ ಆಗಿ. ಇದೇ ಕೊನೆ, ಇನ್ಮುಂದೆ ನಿಮ್ಮ ಪುಂಡಾಟ ಪುನರಾವರ್ತನೆಯಾಗಬಾರದು. ಮಾಧ್ಯಮಗಳು ಎಲ್ಲವನ್ನು ಗಮನಿಸುತ್ತಿವೆ, ಸ್ವಲ್ಪ ಎಚ್ಚರಿಕೆಯಿಂದ ವರ್ತಿಸಿ. ಅಭಿಮಾನಿಗಳಿಗೆ ಮಾದರಿಯಾಗಬೇಕಾದ ನೀವೆ ಅವರಿಂದ ಕಲಿಯುವಂತಾಗಬಾರದು. ಅದನ್ನ ಬಿಟ್ಟು ಅಹಂನಿಂದ ಬೀಗಿದ್ರೆ ಅನಾಹುತ ಕಟ್ಟಿಟ್ಟ ಬುತ್ತಿ ಅಂತಾ ವಿಜಯ್‌ಗೆ ನ್ಯಾಯಾಧೀಶರು ವಿಧ ವಿಧವಾಗಿ ಎಚ್ಚರಿಕೆ ನೀಡಿ ಜಾಮೀನು ನೀಡಿದ್ದಾರೆ.

ಸಾಕ್ಷ್ಯ ನಾಶಪಡಿಸಬಾರದು, ಪೊಲೀಸರ ತನಿಖೆಗೆ ಸಹಕರಿಸಬೇಕು. ತಲಾ ಒಂದು ಲಕ್ಷದ ಬಾಂಡ್ ಹಾಗೂ ನಾಲ್ವರು ಆರೋಪಿಗಳಿಗೂ ಸೇರಿ ಇಬ್ಬರ ವೈಯಕ್ತಿಕ ಭದ್ರತಾ ಶ್ಯೂರಿಟಿಯನ್ನು ಒದಗಿಸುವಂತೆ ನ್ಯಾಯಾಲಯ ಷರತ್ತು ವಿಧಿಸಿದೆ.

Related Articles

Comments (0)

Leave a Comment