ನನ್ನನ್ನು ಜೈಲಿಗೆ ಕಳುಹಿಸಿದರೆ ಸರ್ಕಾರ ರಚನೆ ಮಾಡಬಹುದು ಎಂದು ಬಿಎಸ್ವೈ ಹಗಲುಗನಸು ಕಾಣುತ್ತಿದ್ದಾರೆ: ಡಿಕೆಶಿ

ಬೆಂಗಳೂರು: ನನ್ನನ್ನ ಜೈಲಿಗೆ ಕಳುಹಿಸಿದ್ರೆ ಸರ್ಕಾರ ರಚನೆ ಮಾಡಬಹುದು ಎಂದು ಯಡಿಯೂರಪ್ಪ ಹಗಲುಕನಸು ಕಾಣುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರ ರಚನೆ ಮಾಡಲು ಸಾಧ್ಯ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಚಿವ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಫುಡ್ ಪಾಯಿಸನ್‌ನಿಂದ ಆಸ್ಪತ್ರೆಗೆ ದಾಖಲಾಗಿರುವ
ಸಚಿವ ಡಿ ಕೆ ಶಿವಕುಮಾರ್ ಆಸ್ಪತ್ರೆಯಿಂದ ನೇರವಾಗಿ ಬಂದು ಸುದ್ಧಿಗೋಷ್ಠಿ ನಡೆಸಿದರು. ಸುದ್ದಿಗೋಷ್ಟಿ ಬಳಿಕ ಮತ್ತೆ ಆಸ್ಪತ್ರೆಗೆ ತೆರಳಿ ವಿಶ್ರಾಂತಿ ಪಡೆದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿಯ ಸಂಬಿತ್ ಪಾತ್ರ ನನ್ನ ಮೇಲೆ ಆರೋಪ ಮಾಡಿದ್ದಾರೆ. ಇದಕ್ಕೆ ಉತ್ತರ ಕೊಡಲು ನಾನು ಬಂದಿದ್ದೇನೆ, ರಾಜಕೀಯ ಕಾರಣದಿಂದ ನನ್ನ ಮೇಲೆ ಐಟಿ ದಾಳಿ ನಡೀತು, ೮೨ ಕಡೆ ಏಕಕಾಲದಲ್ಲಿ ಐಟಿ ದಾಳಿ ಆಗಿತ್ತು. ಕಳೆದ ವರ್ಷ ಐಟಿ ದಾಳಿ ಆಗಿತ್ತು, ಈಗ ಇಡಿಯಲ್ಲಿ ಎಫ್ ಐ ಆರ್ ಆಗಿದೆ, ಐಟಿ ದಾಳಿಯಾಗಿ ಒಂದು ವರ್ಷ, ಒಂದು ತಿಂಗಳು ಆಗಿದೆ ಈಗ ಎಫ್ ಐ ಆರ್ ಆಗಿದೆ. ನಾನು ಯಾವುದೇ ಕಾರಣಕ್ಕೂ ಹೆದರಲ್ಲ. ತನಿಖೆಗೆ ಎಲ್ಲ ಹಂತದಲ್ಲೂ ನಾನು ಸಹಕಾರ ನೀಡಿದ್ದೇನೆ. ಈ ಆರೋಪದಿಂದ ನಾನು ಹೊರ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೇಕಾದ್ರೆ ದೆಹಲಿಯಲ್ಲಿ ಬಂದು ಸುದ್ದಿಗೋಷ್ಟಿ ನಡೆಸಿ ಉತ್ತರ ಕೊಡುತ್ತೇನೆ. ನನ್ನ ಫ್ಯಾಮಿಲಿ, ನನ್ನ ಸ್ನೇಹಿತರು ಸೇರಿದಂತೆ ಎಲ್ಲರಿಗೂ ಟಾರ್ಚರ್ ಕೊಟ್ರು. ಈ ರೀತಿ ಮಾಡಿ ಡಿ.ಕೆ.ಶಿವಕುಮಾರ್‌ನನ್ನು ಹೆದರಿಸೋಣ ಅಂದುಕೊಂಡ್ರೆ ಅದು ಸಾಧ್ಯವಿಲ್ಲ. ಡೈರಿ ಬಗ್ಗೆ ಸಂಬಿತಾ ಪಾತ್ರ ಆರೋಪ ಮಾಡುತ್ತಾರೆ. ಯಡಿಯೂರಪ್ಪ ಚೆಕ್ ನಲ್ಲಿ ಲಂಚ ತೆಗದುಕೊಂಡಿದ್ರು, ಅಡ್ವಾಣಿ, ಮೋದಿ ಡೈರಿ ಏನಾಗಿದೆ? ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

ಐಟಿ ವಿಚಾರಣೆ ವೇಳೆ ಡಿ ಕೆ ಶಿವಕುಮಾರ್ ಹೆಸರು ಹೇಳಬೇಕು ಎಂದು ನಮ್ಮವರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ನನಗೆ ಎಲ್ಲ ಮಾಹಿತಿ ಇದೆ. ನಮ್ಮ ಶಾಸಕರಿಗೆ ಕೋಟಿ ಕೋಟಿ ಆಮಿಷ ನೀಡುತ್ತಿದ್ದಾರೆ. ಈ ಬಗ್ಗೆ ಎಲ್ಲ ದಾಖಲೆ ನಮ್ಮ ಬಳಿ ಇದೆ, ಆದಷ್ಟು ಬೇಗ ಈ ಬಗ್ಗೆ ಎಲ್ಲ ಮಾಹಿತಿ ಬಹಿರಂಗ ಪಡಿಸುತ್ತೇವೆ. ಶಾಸಕರೇ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಲಿದ್ದಾರೆ ಎಂದರು.

ಐಟಿ ತನಿಖೆ ಹೆಸರಲ್ಲಿ ನನಗೆ ಕಿರುಕುಳ ನೀಡುತ್ತಿದ್ದಾರೆ. ಈ ರೀತಿಯ ಕಿರುಕಿಳಗಳಿಗೆ ನಾನು ಹೆದರುವ ವ್ಯಕ್ತಿಯಲ್ಲ, ಗೋವಿಂದರಾಜು ಡೈರಿ ಸೃಷ್ಟಿ ಮಾಡಿ ಮಾಹಿತಿ ಅವರೇ ಸೋರಿಕೆ ಮಾಡಿದ್ರು. ಆರ್ ಜಿ , ಎಸ್ ಜಿ ಅಂತ ಅವ್ರೇ ಸೃಷ್ಟಿ ಮಾಡಿ ಬಿಡುಗಡೆ ಮಾಡಿದ್ದರು. ನನ್ನ ಜೊತೆ ನನ್ನ ಪಕ್ಷ ಇದೆ. ೨೦೧೯ರಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ. ನನಗೆ ಯಾವ್ ರೀತಿ ಟಾರ್ಚರ್ ಕೊಡುತ್ತಿದ್ದಾರೆ ಎಂದು ಗೊತ್ತಿದೆ. ತನಿಖೆಗೆ ನಾನು ಎಲ್ಲ ರೀತಿ ಸಹಕಾರ ಕೊಡುತ್ತೇನೆ. ನನ್ನ ಮನೆಯಲ್ಲಿ ಸಿಕ್ಕ ಎಲ್ಲ ಮಾಹಿತಿ ಬಹಿರಂಗಪಡಿಸಲಿ. ಗುಜರಾತ್ ರಾಜ್ಯಸಭಾ ಚುನಾವಣೆಯಾದ ಮೇಲೆ ಐಟಿ ದಾಳಿಯಾಗಿತ್ತು. ಡಿ ಕೆ ಶಿವಕುಮಾರ್ ಯಾವತ್ತೂ ಓಡಿಹೋಗಲ್ಲ. ಯಡಿಯೂರಪ್ಪ , ಬಿಜೆಪಿ ಎಲ್ಲ ನಾಯಕರು ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ನನ್ನನ್ನ ಜೈಲಿಗೆ ಕಳುಹಿಸಿದ್ರೆ ಸರ್ಕಾರ ರಚನೆ ಮಾಡಬಹುದು ಎಂದು ಯಡಿಯೂರಪ್ಪ ಹಗಲುಕನಸು ಕಾಣುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ವಿರುದ್ಧ ಕೆಂಡಾಮಂಡಲರಾದರು.

ನಾನು ಕೊಲೆ ಏನು ಮಾಡಿಲ್ಲ, ನಾನು ಯಾವುದೇ ಹವಲಾ ದಂಧೆ ನಡೆಸಿಲ್ಲ. ನನ್ನನ್ನ ಯಾಕೆ ಅರೆಸ್ಟ್ ಮಾಡುತ್ತಾರೆ? ನಾನೇಕೆ ನಿರೀಕ್ಷಣಾ ಜಾಮೀನು ತೆಗದುಕೊಳ್ಳಲಿ. ನಾನು ಯಾವುದೇ ತಪ್ಪು ಮಾಡಿಲ್ಲ, ತಪ್ಪು ಮಾಡಿದ್ರೆ ಅರೆಸ್ಟ್ ಮಾಡಲಿ, ನಾನು ಹೆದುರುವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದ್ರೆ ಭಯಪಡಬೇಕು ನನ್ನ ಮನೆಯಲ್ಲಿ ಸಿಕ್ಕ ೪೧ ಲಕ್ಷದ ಬಗ್ಗೆ ಮಾಹಿತಿ ನೀಡಿದ್ದೇವೆ.
ದೆಹಲಿಯಲ್ಲಿ ೭ ಕೋಟಿ ಹಣ ಸಿಕ್ಕಿದೆ ಅನ್ನೋದು ಸುಳ್ಳು, ಸೂಕ್ತ ಸಮಯದಲ್ಲಿ ಮತ್ತಷ್ಟು ಮಾತನಾಡುತ್ತೇನೆ. ಇಡಿಯಿಂದ ಯಾವುದೇ ನೋಟಿಸ್ ಬಂದಿಲ್ಲ, ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಜೈಲಿಗೆ ಹೋಗಿ ಬಂದವರು ಸಿಎಂ ಅಭ್ಯರ್ಥಿಯಾಗಿದ್ದಾರೆ, ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿದ್ದಾರೆ. ಮೊದಲು ತನಿಖೆ ನಡೆಯಲಿ ಎಂದು ಬಿಜೆಪಿ ನಾಯಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

Related Articles

Comments (0)

Leave a Comment