2022 ಕ್ಕೆ ಮಾನವಸಹಿತ ಗಗನಯಾನ: ಮೋದಿ‌ ಘೋಷಣೆ

ನವದೆಹಲಿ:2022ಕ್ಕೆ ಮಾನವಸಹಿತ ಗಗನಯಾನ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸುವ ಮೂಲಕ ಕಡಿಮೆ‌ ವೆಚ್ಚದಲ್ಲಿ ಮಂಗಳಗ್ರಹಕ್ಕೆ ಆರ್ಬಿಟರ್ ಕಳಿಸಿದ ಬಳಿಕ ಜಗತ್ತು ಮತ್ತಿಮ್ಮೆ ಭಾರತದೆಡೆಗೆ ನೋಡುವಂತೆ ಮಾಡಿದ್ದಾರೆ.

ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತ್ರಿವರ್ಣ ಧ್ವಜ ಆರೋಹಣ ಮಾಡಿದರು.ನಂತರ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಮೋದಿ,ಮಾನವಸಹಿತ ಗಗನಯಾನ ಯೋಜನೆ ಘೋಷಣೆ ಮಾಡಿದ್ರು.2022ಕ್ಕೆ ನಾವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತೇವೆ. ಈ ಸಂದರ್ಭದಲ್ಲಿ ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳುಹಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಅದಕ್ಕಾಗಿ ಗಗನಯಾನ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ನಾವು ಯಶಸ್ವಿಯಾದರೆ ಮಾನವಸಹಿತ ಬಾಹ್ಯಾಕಾಶ ಯಾನ ಮಾಡಿದ ನಾಲ್ಕನೆ ದೇಶ ಭಾರತವಾಗಲಿದೆ ಎಂದು ಮೋದಿ ಹೇಳಿದರು.

ಇದೇ ವೇಳೆ ಒಂದೇ ರಾಕೆಟ್​ನಲ್ಲಿ ನೂರು ಸ್ಯಾಟಲೆಟ್​ಗಳನ್ನು ಉಡಾವಣೆ ಮಾಡಿ, ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಮೋದಿ ಮುಕ್ತ ಕಂಠದಿಂದ ಶ್ಲಾಘಿಸಿದರು.

ನಂತರ ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಮೋದಿ, ಮುಂದಿನ ಮೂರು ದಶಕದಲ್ಲಿ ಭಾರತದ ಆರ್ಥಿಕತೆ ಜಾಗತಿಕವಾಗಿ ಪ್ರಬಲವಾಗಲಿದೆ. ಮಲಗಿರುವ ಆನೆ ಎದ್ದು ಓಡುವಂತೆ ದೇಶದ ಆರ್ಥಿಕತೆ ಪ್ರಗತಿ ಸಾಧಿಸಲಿದೆ‌ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ರು.

ದೇಶದ ಬೃಹತ್ ಆರೋಗ್ಯ ರಕ್ಷೆಯ ಯೋಜನೆಯಾದ ‘ಆಯುಷ್ಮಾನ್ ಭಾರತ’ ಯೋಜನೆಯನ್ನು ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನ ಹೆಸರಿನಲ್ಲಿ ಮರುಪರಿಚಯಿಸಿದ ಮೋದಿ ಇದೇ ವರ್ಷದ ಸೆಪ್ಟೆಂಬರ್ 25ರಂದು ಧೀನ ದಯಾಳು ಉಪಾಧ್ಯ ಅವರ ಜನ್ಮ ದಿನದಂದು ಯೋಜನೆ ಜಾರಿಯಾಗಲಿದೆ. ವರ್ಷಕ್ಕೆ 50 ಕೋಟಿ ಜನರಿಗೆ ಐದು ಲಕ್ಷ ರೂ.ವರೆಗೆ ಫಲಾನುಭವಿಗಳಿಗೆ ಈ ಯೋಜನೆ ಅನುಕೂಲ ಒದಗಿಸಿಕೊಡಲಿದೆ. ಆರೇಳು ವಾರಗಳ ಕಾಲ ಪ್ರಾಯೋಗಿಕವಾಗಿ ಜಾರಿಗೆ ತಂದು ನಂತರ ಅಧಿಕೃತವಾಗಿ ಜಾರಿಗೆ ತರಲಾಗುತ್ತದೆ ಎಂದ್ರು.

Related Articles

Comments (0)

Leave a Comment