ದೆಹಲಿಯಲ್ಲಿ ಸರ್.ಎಂ.ವಿ ಮೆಟ್ರೋ ನಿಲ್ದಾಣ ಉದ್ಘಾಟನೆ: ಕನ್ನಡದಲ್ಲಿ ಅಭಿನಂದನೆ ಸಲ್ಲಿಸಿದ ಸಚಿವ ಅನಂತಕುಮಾರ್

ನವದೆಹಲಿ: ಮೋತಿಬಾಗ್‌ನ ಕರ್ನಾಟಕ ಸಂಘದ ಪಕ್ಕದಲ್ಲಿರುವ ಮೆಟ್ರೋ ನಿಲ್ದಾಣಕ್ಕೆ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರನ್ನು ಇಟ್ಟಿರುವುದಕ್ಕೆ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ನವದೆಹಲಿಯ ಬಾರಾ ಖಾಂಭಾ ಮೆಟ್ರೋ ನಿಲ್ದಾಣದಲ್ಲಿ ಇಂದು ನಡೆದ ಸರ್ ಎಂ ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಆರುವರೆ ಕೋಟಿ ಜನರ ಪರವಾಗಿ ಕನ್ನಡದಲ್ಲಿ ಅಭಿನಂದನೆ ಸಲ್ಲಿಸಿ ವಿಶೇಷತೆ ಮೆರೆದರು.

ದೇಶದಲ್ಲಿ ಮೆಟ್ರೋ ರೈಲಿನ ಯೋಜನೆ ಸಾಕಾರಗೊಳ್ಳಲು ಮೊದಲನೇ ದಿನದಿಂದಲೂ ಜಪಾನ್ ನೀಡುತ್ತಿರುವ ಸಹಾಯಕ್ಕೆ ಜಪಾನ್ ದೇಶದ ರಾಯಭಾರಿಗೆ ತಮ್ಮ ಅಭಿನಂದನೆ ಸಲ್ಲಿಸಿದರು. ಸರ್ ಎಂ ವಿಶ್ವೇಶ್ವರಯ್ಯ ಅವರು ಕರ್ನಾಟಕ ರಾಜ್ಯದವರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಾಗುತ್ತದೆ. ಅವರು ಮೈಸೂರಿನ ದಿವಾನರಾಗಿ ಹಾಗೂ ಜನಪ್ರಸಿದ್ದ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ವಿಶ್ವದಾದ್ಯಂತ ಸುಮಾರು 70 ಕ್ಕೂ ಹೆಚ್ಚು ನೀರಾವರಿ ಯೋಜನೆಗಳ ಹರಿಕಾರ ಅವರು ಎಂದು ಶ್ಲಾಘಿಸಿದರು.

ಕರ್ನಾಟದ ರಾಜ್ಯದ ಅಳಿಯ ಕೇಂದ್ರದ ನಗರಾಭಿವೃದ್ದಿ ಮಂತ್ರಿ ಹರದೀಪ್ ಸಿಂಗ್ ಪೂರಿ ಇಂದು ಈ ಮೆಟ್ರೋ ನಿಲ್ದಾಣಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರನ್ನಿಡುವ ಮೂಲಕ ಆರೂವರೆ ಕೋಟಿ ಜನರಿಗೆ ಬಹಳ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. 2001 ನೇ ಸಾಲಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರಕಾರದಲ್ಲಿ ತಾವು ಕೇಂದ್ರ ನಗರಾಭಿವೃದ್ದಿ ಇಲಾಖೆಯ ಚುಕ್ಕಾಣಿ ಹಿಡಿದಿದ್ದನ್ನು ನೆನೆಪಿಸಿಕೊಂಡ ಅವರು, ರಾಷ್ಟ್ರೀಯ ನಗರ ಸಾರಿಗೆ ನೀತಿ ರೂಪಿಸಲು ಜವಾಬ್ದಾರಿಯನ್ನು ನೀಡಲಾಗಿತ್ತು. ಆ ನೀತಿಯಲ್ಲಿ ದೆಹಲಿ, ಬೆಂಗಳೂರು, ಕೋಚಿನ್, ಹೈದರಾಬಾದ್, ಅಹ್ಮದಾಬಾದ್, ಲಕ್ನೋ ಮತ್ತು ಮುಂಬಯಿ ನಗರಗಳಲ್ಲಿ ಮೆಟ್ರೋ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿತ್ತು ಎಂದರು. ದೆಹಲಿ ಮೆಟ್ರೋ ಯೋಜನೆ ಅಟಲ್ ಬಿಹಾರಿ ವಾಜಪೇಯಿ ಅವರಿಂದಲೇ ಉದ್ಘಾಟನೆಗೊಂಡಿದ್ದನ್ನು ಸ್ಮರಿಸಿಕೊಂಡರು.

ರಾಷ್ಟ್ರೀಯ ನಗರ ಸಾರಿಗೆ ನೀತಿಯ ರಚನೆಯನ್ನು ಪ್ರಾರಂಭಿಸಿದ ವ್ಯಕ್ತಿಯಾಗಿ, ಇಂದು ದೇಶದಲ್ಲಿ 1 ರಿಂದ 500 ಕಿಲೋಮೀಟರ್ ಗಳಿಗೂ ಹೆಚ್ಚು ಮೆಟ್ರೋ ಮಾರ್ಗ ರಚನೆಯಾಗಿರುವುದನ್ನು ನೋಡಲು ಸಂತಸವಾಗುತ್ತದೆ ಎಂದರು. ಈ 500 ಕಿಲೋಮೀಟರ್ 1000 ಕಿಲೋಮೀಟರ್ ಗಳನ್ನು ತಲುಪಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್, ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರು ಭಾಗವಹಿಸಿದ್ದರು.

Related Articles

Comments (0)

Leave a Comment