ಬದಲಾದ ಸರ್ಕಾರದ ನಿರ್ಧಾರ; ಕಾಸುಕೊಟ್ರೆ ಮಾತ್ರ ಪಾಸ್!

 

ಬೆಂಗಳೂರು: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಘೋಷಿಸಿದ್ದ ಮಹತ್ವಾಕಾಂಕ್ಷಿ ಭಾಗ್ಯವೊಂದಕ್ಕೆ ಹೊಸ ಸಮ್ಮಿಶ್ರ ಸರ್ಕಾರ ಎಳ್ಳುನೀರು ಬಿಟ್ಟಿದೆ.
ಕಳೆದ ಬಜೆಟ್‍ನಲ್ಲಿ ಸಿಎಂ ಸಿದ್ದರಾಮಯ್ಯ ಮಕ್ಕಳಿಗೆ ಉಚಿತ ಬಸ್‍ ಪಾಸ್‍ ನೀಡುವುದಾಗಿ ಘೋಷಿಸಿದ್ದರು. ಆದರೆ ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಸಮ್ಮಿಶ್ರ ಸರ್ಕಾರದ ಸಿಎಂ ಎಚ್‍.ಡಿ. ಕುಮಾರಸ್ವಾಮಿ ಮಹತ್ವಾಕಾಂಕ್ಷಿ ಯೋಜನೆಗೆ ಕಡಿವಾಣ ಹಾಕಿದ್ದಾರೆ. ಇದರಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಉಚಿತ ಬಸ್‍ ಪಾಸ್‍ ನಿರೀಕ್ಷಿಸುತ್ತಿದ್ದ ವಿದ್ಯಾರ್ಥಿಗಳು ಬದಲಾಗಿ ಹಣ ನೀಡಿಯೇ ಪಾಸ್ ಖರೀದಿಸಬೇಕಾಗಿದೆ. ಉಚಿತ ಬಸ್ ಪಾಸ್ ನೀಡುವುದಾಗಿ 2018-19 ಬಜೆಟ್ನಲ್ಲಿ ಘೋಷಣೆ ಯಾಗಿದ್ದರೂ ನೂರಾರು ಕೋಟಿ ರೂ. ಆರ್ಥಿಕ ಹೊರೆ ಆಗುತ್ತದೆ ಎಂಬ ಕಾರಣದಿಂದ ಸಾರಿಗೆ ಇಲಾಖೆಯ ಪ್ರಸ್ತಾವನೆಗೆ ಹಣಕಾಸು ಇಲಾಖೆ ತಾತ್ಕಾಲಿಕ ತಡೆ ನೀಡಿದೆ ಎಂದು ತಿಳಿದು ಬಂದಿದೆ.

ಹೊಸ ಬಜೆಟ್‍ನಲ್ಲಿ ಪರಿಶೀಲನೆ

ಹೊಸ ಸರ್ಕಾರದ ಬಜೆಟ್‍ ಆದಷ್ಟು ಬೇಗ ಮಂಡನೆಯಾಗಲಿದ್ದು, ಇದರ ಪೂರ್ವಭಾವಿ ಸಭೆಯಲ್ಲಿ ವಿಷಯವನ್ನು ಮರು ಪ್ರಸ್ತಾಪಿಸುವಂತೆ ಸೂಚಿಸಲಾಗಿದೆ. ಹಿಂದಿನ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್‍ನಲ್ಲಿ 2018-19 ಶೈಕ್ಷಣಿಕ ವರ್ಷದಿಂದ ರಾಜ್ಯದ 19.60 ಲಕ್ಷ ವಿದ್ಯಾರ್ಥಿಗಳಿಗೆ ನೆರವಾಗುವಂತೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಿಸಿತ್ತು.
ಏಪ್ರಿಲ್ ಅಂತ್ಯದಲ್ಲಿ ಯೋಜನೆ ಅನುಷ್ಠಾನದ ಕುರಿತು ಆದೇಶ ಹೊರಡಿಸಲು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸಾರಿಗೆ ಇಲಾಖೆಗೆ ಪತ್ರ ಬರೆದಿದ್ದರು. 2018-19ನೇ ಸಾಲಿನಲ್ಲಿ ಉಚಿತ ಪಾಸ್ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ 22 ರಿಂದ 23 ಲಕ್ಷದವರೆಗೆ ಏರಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಉಚಿತ ಬಸ್ ಪಾಸ್ ವಿತರಿಸಲು 1,955.06 ಕೋಟಿ ರೂ. ವೆಚ್ಚವಾಗಲಿದೆ. 2018-19ನೇ ಸಾಲಿನ ಬಜೆಟ್ನಲ್ಲಿ ಪಾಸ್ಗೆ 836.98 ಕೋಟಿ ರೂ. ಸಹಾಯಧನ ನಿಗದಿಪಡಿಸಲಾಗಿದ್ದು, ಉಳಿದ 629.32 ಕೋಟಿ ರೂ. ಹೆಚ್ಚುವರಿಯಾಗಿ ಒದಗಿಸಲು ಕೋರಿದ್ದರು. ಆದರೆ ಸದ್ಯ ಸಾಕಷ್ಟು ಕಾರಣಕ್ಕೆ ಬೊಕ್ಕಸದಿಂದ ಹಣ ತೆಗೆಯುವ ಅಗತ್ಯ ಇರುವುದರಿಂದ ಸದ್ಯಕ್ಕೆ ಪ್ರಸ್ತಾವನೆಯನ್ನು ಕೈಬಿಡಲು ನಿರ್ಧರಿಸಲಾಗಿದೆ.

ಯೋಜನೆಯಿಂದ ಹೊರೆ

ಯೋಜನೆ ಅನುಷ್ಠಾನದಿಂದ ಸರ್ಕಾರದ ಮೇಲೆ 629 ಕೋಟಿ ರೂ.ಹೆಚ್ಚುವರಿ ಹೊರೆ ಬೀಳುವ ಹಿನ್ನೆಲೆಯಲ್ಲಿ, ಹಣಕಾಸು ಇಲಾಖೆಯ ಒಪ್ಪಿಗೆ ಕೋರಿ ಸಾರಿಗೆ ಇಲಾಖೆ ಕಡತ ರವಾನಿಸಿತ್ತು. ಈ ಕಡತಕ್ಕೆ ಇದೀಗ ಹಣಕಾಸು ಇಲಾಖೆ ಪ್ರತಿಕ್ರಿಯೆ ನೀಡಿದ್ದು, ಹೊಸ ಸರ್ಕಾರ ಮಂಡಿಸಲಿರುವ ಬಜೆಟ್ನಲ್ಲಿ ಈ ವಿಚಾರ ಮರುಪ್ರಸ್ತಾಪಿಸುವಂತೆ ಸೂಚಿಸಿದೆ. ಇದರಿಂದ ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯವ್ಯ ರಾಜ್ಯ ರಸ್ತೆ ಸಾರಿಗೆ ನಿಗಮಗಳು ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ವಿತರಿಸುತ್ತಿದೆ. 7ನೇ ತರಗತಿಯವರೆಗೆ ಈಗಾಗಲೇ ಉಚಿತ ಪಾಸ್ ಸೌಲಭ್ಯವಿದೆ. ಉಳಿದ ವಿದ್ಯಾರ್ಥಿಗಳ ಒಟ್ಟು ಪಾಸ್ ವೆಚ್ಚದಲ್ಲಿ ಶೇ.50 ಸರ್ಕಾರದಿಂದ ಸಹಾಯಧನ, ಶೇ.25 ಮೊತ್ತ ವಿದ್ಯಾರ್ಥಿಗಳಿಂದ ಮತ್ತು ಉಳಿದ ಶೇ.25 ಮೊತ್ತವನ್ನು ನಿಗಮವೇ ಭರಿಸುತ್ತಿದೆ. 2017ರಲ್ಲಿ ಎಸ್ಸಿಪಿ, ಟಿಎಸ್ಪಿ ಕ್ರಿಯಾ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲಾಗಿತ್ತು. ಈ ಯೋಜನೆ ಮುಂದುವರಿಯಲಿದ್ದು, ಉಳಿದ ಎಲ್ಲ ವರ್ಗದ ವಿದ್ಯಾರ್ಥಿಗಳು ಹಣ ನೀಡಿಯೇ ಪಾಸ್ ಪಡೆದುಕೊಳ್ಳಬೇಕು.

Related Articles

Comments (0)

Leave a Comment