ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ‌ ಬಿಗ್ ಶಾಕ್: ನಟಸಾರ್ವಭೌಮ ಚಿತ್ರೀಕರಣ ಸ್ಥಗಿತಕ್ಕೆ ಆದೇಶ?

ಬಾಗಲಕೋಟೆ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಚಿತ್ರೀಕರಣ ಸ್ಥಗಿತಗೊಳಿಸಲು ರಾಜ್ಯ ಪ್ರಾಚ್ಯವಸ್ತು ಇಲಾಖೆ ಸೂಚನೆ ನೀಡಿದೆ.

ಮಹಾಕೂಟದಲ್ಲಿ ಶೂಟಿಂಗ್‍ಗಾಗಿ ಪುಷ್ಕರಣಿಯ ಸುತ್ತಲಿನ ಹಾಕಿರುವ ಸೆಟ್ ತೆರವುಗೊಳಿಸಿ ಸಿನಿಮಾ‌ ಚಿತ್ರೀಕರಣ ನಿಲ್ಲಿಸಯವಂತೆ ಚಿತ್ರತಂಡಕ್ಕೆ ಸೂಚನೆ ನೀಡಿ ಎಂದು ಬಾಗಲಕೋಟೆ ಜಿಲ್ಲಾಧಿಕಾರಿಗೆ ಪ್ರಾಚ್ಯವಸ್ತು ಇಲಾಖೆ ಉಪನಿರ್ದೇಶಕರು ನಿರ್ದೇಶನ ನೀಡಿದ್ದಾರೆ.

ಮಹಾಕೂಟದ ಮಹಾಕೂಟೇಶ್ವರ ದೇವಾಲಯ ಸಂಕೀರ್ಣ ರಾಜ್ಯ ಸಂರಕ್ಷಿತ ಸ್ಮಾರಕವಾಗಿದೆ.ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಅವಶೇಷ ಅಧಿನಿಯಮ 1961 ಹಾಗೂ 1965ರಂತೆ ಇಲ್ಲಿ ಯಾವುದೇ ಚಟುವಟಿಕೆ ನಡೆಸುವುದು ಕಾನೂನು ಬಾಹಿರವಾಗಿದ್ದು, ಶಿಕ್ಷೆಗೆ ಗುರಿಪಡಿಸಬಹುದಾದ ಅಪರಾಧವಾಗಿದೆ. ಚಿತ್ರ ತಂಡದವರು ಯಾವುದೇ ಅನುಮತಿಯಿಲ್ಲದೇ ಸೆಟ್ ಅಳವಡಿಸಿರುವುದರಿಂದ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಕ್ಷಣ ಚಿತ್ರೀಕರಣ ನಿಲ್ಲಿಸಲು ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಉಪನಿರ್ದೇಶಕರು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಪ್ರಾಚ್ಯವಸ್ತು ಇಲಾಖೆಯ ಸೂಚನೆಯಿಂದಾಗಿ‌ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿದೆ.ಪುಷ್ಕರಣಿ ಸೇರಿದಂತೆ ದೇಗುಲ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಹಾನಿಯಾಗದಂತೆ ಚಿತ್ರೀಕರಣ ನಡೆಸುವ ಭರವಸೆ ನೀಡಿ ಚಿತ್ರೀಕರಣ ನಡೆಸಲು ಅನುಮತಿ ಕೋರಲಿದೆ ಎನ್ನಲಾಗಿದೆ.

Related Articles

Comments (0)

Leave a Comment