ಯುಜಿಸಿ ರದ್ದು:ಉನ್ನತ ಶಿಕ್ಷಣ ಖಾಸಗೀಕರಣ ಮಾಡಲು ಹೊರಟಿದೆಯಾ ಮೋದಿ ಸರ್ಕಾರ?

ಫೋಟೋ ಕೃಪೆ ಟ್ವಿಟ್ಟರ್

ನವದೆಹಲಿ:ಹಲವು ಏಕಪಕ್ಷೀಯ ನಿರ್ಧಾರಗಳ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ರದ್ದುಗೊಳಿಸಿ ಅದರ ಹೊಣೆಗಾರಿಕೆಯನ್ನು ಉನ್ನತ ಶಿಕ್ಷಣ ಆಯೋಗಕ್ಕೆ ವಹಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ಈ ಸಂಬಂಧ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಕರಡು ಪ್ರತಿ ಸಿದ್ಧ ಪಡಿಸಿದ್ದು, ದೇಶದಲ್ಲಿ ಅಸ್ಥಿತ್ವದಲ್ಲಿದ್ದ ಯುಜಿಸಿಯನ್ನು ವಿಸರ್ಜಿಸಲು ಮುಂದಾಗಿದೆ. ಜುಲೈ 7ರಂದು ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕೆ ಕರಡು ಪ್ರತಿಯನ್ನು ಪ್ರಕಟಿಸುವುದಾಗಿ ತಿಳಿಸಿದೆ.

ಭಾರತದಲ್ಲಿ ಹೊಸ ಸಂಸ್ಥೆ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಕೊಡುಗೆ ಕೊಡಬಲ್ಲದು ಎಂದು ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.ಶಿಕ್ಷಣದಲ್ಲಿ ವಿದೇಶೀ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂಬ ವರದಿಗಳ ಬೆನ್ನಲ್ಲೇ ಈ ನಿರ್ಧಾರವನ್ನು ಪ್ರಕಟಿಸಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿದೆ. ಈಗಾಗಲೇ ಸಾರ್ವಜನಿಕ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ವಿನಿಯೋಗಿಸುತ್ತಿರುವ ಹಣದ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದು, ಕೇಂದ್ರದ ಈ ನಿರ್ಧಾರದ ವಿರುದ್ಧವೂ ವಿಪಕ್ಷಗಳು ಮತ್ತು ವಿಶ್ವವಿದ್ಯಾಲಯಗಳ ಸಿಬ್ಬಂದಿ ಪ್ರತಿಭಟನೆ ಹಾದಿ ತುಳಿಯುವ ಸುಳಿವು ನೀಡಿವೆ.

Related Articles

Comments (0)

Leave a Comment