ಬಂಗಾಳದ ರಣಬಿಸಿಲಲ್ಲಿ ಮೋದಿಗೆ ‘ಚುರುಮುರಿ’ ತಂಪು: “ನಾನು ಈರುಳ್ಳಿ ತಿಂತೀನಿ, ಜನರ ತಲೆ ತಿನ್ನಲ್ಲ!”
- by Suddi Team
- April 20, 2026
- 36 Views
ಜಾರ್ಗ್ರಾಮ್:ಪಶ್ಚಿಮ ಬಂಗಾಳದ ಚುನಾವಣಾ ಕಣದಲ್ಲಿ ರಾಜಕೀಯ ಜಿದ್ದಾಜಿದ್ದಿನ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ‘ಚುರುಮುರಿ’ (ಝಲ್ ಮುರಿ) ಪ್ರೇಮ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಭಾನುವಾರ ದಿನವಿಡೀ ನಾಲ್ಕು ಬೃಹತ್ ರ್ಯಾಲಿಗಳನ್ನು ನಡೆಸಿ ಸುಸ್ತಾಗಿದ್ದ ಪ್ರಧಾನಿ, ಹಠಾತ್ತನೆ ರಸ್ತೆ ಬದಿಯ ಗಾಡಿಯ ಮುಂದೆ ನಿಂತು ಸ್ಥಳೀಯ ಖಾದ್ಯ ಸವಿಯುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು.
ಮೋದಿ ಹಾರಿಸಿದ ಹಾಸ್ಯದ ಚಟಾಕಿ:
ಝಲ್ ಮುರಿ ಸಿದ್ಧಪಡಿಸುತ್ತಿದ್ದ ವ್ಯಾಪಾರಿ, “ಸಾರ್, ಈರುಳ್ಳಿ ಹಾಕಲೇ?” ಎಂದು ವಿನಯದಿಂದ ಕೇಳಿದಾಗ, ಮೋದಿ ಅವರು ನಗುತ್ತಲೇ ನೀಡಿದ ಉತ್ತರ ಈಗ ವೈರಲ್ ಆಗಿದೆ. “ನಾನು ಈರುಳ್ಳಿ ತಿನ್ನುತ್ತೇನೆ, ಆದರೆ ಜನರ ತಲೆ ತಿನ್ನುವುದಿಲ್ಲ!” ಎಂದು ಅವರು ಹೇಳುತ್ತಿದ್ದಂತೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಸ್ಥಳೀಯರು ನಗೆಗಡಲಲ್ಲಿ ತೇಲಿದರು.
ಹತ್ತು ರೂಪಾಯಿಯ ಪ್ರಾಮಾಣಿಕತೆ:
ಪ್ರಧಾನಿ ಎಂಬ ಹಮ್ಮು-ಬಿಮ್ಮಿಲ್ಲದೆ ವ್ಯಾಪಾರಿಯೊಂದಿಗೆ ಕುಶಲೋಪರಿ ವಿಚಾರಿಸಿದ ಅವರು, ಆರೋಗ್ಯದ ದೃಷ್ಟಿಯಿಂದ “ಉಪ್ಪು ಬೇಡ” ಎಂದು ಮನವಿ ಮಾಡಿದರು. ತಿಂಡಿ ಸವಿದ ನಂತರ ವ್ಯಾಪಾರಿಗೆ ಹತ್ತು ರೂಪಾಯಿ ನೀಡಿ, “ಇದನ್ನು ಇಟ್ಟುಕೋ, ಇದು ನಿನ್ನ ಕಠಿಣ ಪರಿಶ್ರಮದ ಬೆಲೆ” ಎಂದು ಬೆನ್ನುತಟ್ಟಿದರು.
ಪ್ರಚಾರದ ನಡುವೆ ಸಿಕ್ಕ ವಿರಾಮ:
ಪುರುಲಿಯಾದಿಂದ ಬಿಷ್ಣುಪುರದವರೆಗಿನ ಬಿರುಸಿನ ಪ್ರಚಾರದ ನಡುವೆ ಸಿಕ್ಕ ಈ ಕಿರು ವಿರಾಮದ ಫೋಟೋಗಳನ್ನು ಸ್ವತಃ ಮೋದಿ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಜಾರ್ಗ್ರಾಮ್ನ ಈ ಝಲ್ ಮುರಿ ಅದ್ಭುತವಾಗಿತ್ತು” ಎಂದು ಅವರು ಬರೆದುಕೊಂಡಿದ್ದಾರೆ.
ರಾಜಕೀಯ ವಾಕ್ಸಮರಗಳ ನಡುವೆ ಪ್ರಧಾನಿಗಳ ಈ ‘ಕಾಮನ್ ಮ್ಯಾನ್’ ಅವತಾರ ಬಂಗಾಳಿ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ
Related Articles
Thank you for your comment. It is awaiting moderation.


Comments (0)