ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲು ಸರ್ಕಾರ ಸನ್ನದ್ಧ – ಎಸ್. ಸುರೇಶ್ ಕುಮಾರ್
- by Suddi Team
- June 24, 2020
- 14 Views

ಬೆಂಗಳೂರು: ನಾಳೆಯಿಂದ ಆರಂಭವಾಗಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗಳ ಕೇಂದ್ರಗಳು ಕೇವಲ ಪರೀಕ್ಷಾ ಕೇಂದ್ರಗಳಲ್ಲ, ಅವು ಸಂಪೂರ್ಣ ಸುರಕ್ಷಿತಾ ಕೇಂದ್ರಗಳಾಗಿದ್ದು ಯಾವುದೇ ಪೋಷಕರು ಆತಂಕಕ್ಕೊಳಗಾಗದೇ ತಮ್ಮ ಮಕ್ಕಳನ್ನು ಧೈರ್ಯವಾಗಿ ಪರೀಕ್ಷೆಗೆ ಕಳುಹಿಸಿಕೊಡಬೇಕೆಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಚಿವ ಸುರೇಶ್ ಕುಮಾರ್ ರಾಜ್ಯಾದ್ಯಂತ ಇರುವ 2879 ಪರೀಕ್ಷಾ ಕೇಂದ್ರಗಳಲ್ಲಿ 8,48,203 ವಿದ್ಯಾರ್ಥಿಗಳು ನಾಳೆಯಿಂದ ಪರೀಕ್ಷೆಗಳನ್ನು ಬರೆಯಲಿದ್ದು, ಸರ್ಕಾರವು ಸುಗಮ ಪರೀಕ್ಷಾ ನಿರ್ವಹಣೆಗೆ ಎಲ್ಲ ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ ಎಂದರು. ಪ್ರತಿ ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿ ಆರೋಗ್ಯ ತಪಾಸಣಾ ಕೌಂಟರ್ಗಳು ಸ್ಥಾಪನೆ ಮಾಡಲಾಗಿದ್ದು, ರಾಜ್ಯಾದ್ಯಾಂತ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ 5755 ಆರೋಗ್ಯ ತಪಾಸಣಾ ಕೌಂಟರ್ಗಳು ಕಾರ್ಯ ನಿರ್ವಹಿಸಲಿವೆ ಎಂದ ಸಚಿವರು ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಇಬ್ಬರಂತೆ ಕಿರಿಯ ಆರೋಗ್ಯ ಸಹಾಯಕರು ವಿದ್ಯಾರ್ಥಿಗಳ ಆರೋಗ್ಯ ತಪಾಸಣಾ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಪರೀಕ್ಷಾ ಕೇಂದ್ರ ಪ್ರವೇಶಿಸುವ ಪ್ರತಿಯೊಬ್ಬ ವಿದ್ಯಾರ್ಥಿ/ಸಿಬ್ಬಂದಿ ಮಾಸ್ಕ ಧರಿಸಿರುವುದನ್ನು ಖಚಿತ ಪಡಿಸಿಕೊಂಡು ಸ್ಯಾನಿಟೈಸರ್ಗಳಿಂದ ಕೈಗಳನ್ನು ಸ್ವಚ್ಛಗೊಳಿಸಿ ದೇಹದ ಉಷ್ಣತೆಯನ್ನು ಪರಿಶೀಲಿಸಿ ಪರೀಕ್ಷಾ ಕೇಂದ್ರದೊಳಕ್ಕೆ ಬರಲು ಅವಕಾಶ ಕಲ್ಪಿಸಲಾಗುವುದು ಎಂದು ವಿವರಿಸಿದರು.
ಪರೀಕ್ಷಾ ಕೇಂದ್ರ ಸ್ಥಳಾಂತರ
ಕಂಟೈನ್ಮೆಂಟ್ ಜೋ಼ನ್ ಎಂದು ಪರಿಗಣಿಸಲಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಾಂತ 11 ಜಿಲ್ಲೆಗಳ 27 ಪರೀಕ್ಷಾ ಕೇಂದ್ರಗಳನ್ನು ಸುರಕ್ಷಿತ ವಲಯಗಳಿಗೆ ಸ್ಥಳಾಂತರಿಸಲಾಗಿದ್ದು, ಈ ಕೇಂದ್ರಗಳಲ್ಲಿನ 7490 ವಿದ್ಯಾರ್ಥಿಗಳು ಸ್ಥಳಾಂತರಿಸಿದ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲ್ಲಿದ್ದಾರೆ ಎಂಬ ಮಾಹಿತಿಯನ್ನು ಸಚಿವ ಸುರೇಶ್ ಕುಮಾರ್ ನೀಡಿದರು. ರಾಜ್ಯಾದ್ಯಾಂತ 10 ವಿದ್ಯಾರ್ಥಿಗಳು ಈ ದಿನದ ಅಂತ್ಯಕ್ಕೆ ಕೋವಿಡ್-19 ಸೊಂಕಿತರೆಂದು ಆರೋಗ್ಯ ಇಲಾಖೆಯು ಮಾಹಿತಿಯನ್ನು ನೀಡಿದ್ದು, ಗೃಹ ಕ್ವಾರೆಂಟೈನ್ ನಲ್ಲಿರುವ 09 ವಿದ್ಯಾರ್ಥಿಗಳು ಸೇರಿದಂತೆ 19 ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗಳಲ್ಲಿ ಅವಕಾಶವನ್ನು ಕಲ್ಪಿಸಲಾಗುವುದುದೆಂದು ಸಚಿವ ಸುರೇಶ್ ಕುಮಾರ್ ಹೇಳಿದರು.
ಪರೀಕ್ಷೆ ನಡೆಸುವುದು ಸರ್ಕಾರದ ಕರ್ತವ್ಯ:
ಎಸ್.ಎಸ್.ಎಲ್.ಸಿ. ಪರೀಕ್ಷೆಗಳನ್ನು ನಡೆಸುವುದು ಸರ್ಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿಲ್ಲ. ಶಿಕ್ಷಣ ಕ್ಷೇತ್ರದ ಪ್ರಮುಖರು ಸೇರಿ ಹಲವಾರು ಜನರ ಜೊತೆ ಸಂವಾದ ಚರ್ಚೆ ನಡೆಸಿದ ಬಳಿಕ ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ. ಪರೀಕ್ಷೆ ನಡೆಸದಂತೆ ಕೆಲವರು ಉಚ್ಛ ನ್ಯಾಯಾಲಯ, ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ನ್ಯಾಯಾಲಯಗಳು ಸರ್ಕಾರದ ತೀರ್ಮಾನವನ್ನು ಒಪ್ಪಿ ಪರೀಕ್ಷೆಗೆ ಅನುಮತಿ ನೀಡಿವೆ. ಹಾಗಾಗಿ ಸರ್ಕಾರಕ್ಕೆ ಪರೀಕ್ಷೆ ನಡೆಸುವುದು ಆದ್ಯ ಕರ್ತವ್ಯವಾಗಿದ್ದು, ವಿದ್ಯಾರ್ಥಿಗಳ ಸಂಪೂರ್ಣ ಹಿತವನ್ನು ಕಪಾಡಲು ನಾವು ಬದ್ಧರಾಗಿದ್ದೇವೆ. ಯಾವುದೇ ಆತಂಕವಿಲ್ಲದೆ, ಪರೀಕ್ಷೆ ಎದುರಿಸುವಂತೆ ವಿದ್ಯಾರ್ಥಿಗಳಲ್ಲಿ ಸುರೇಶ್ ಕುಮಾರ್ ಮನವಿ ಮಾಡಿದರು.
ಪರೀಕ್ಷಾ ಕೇಂದ್ರಗಳಲ್ಲಿ ಒಂದು ಲಕ್ಷ ಸಿಬ್ಬಂದಿ:
ಎಂಟುವರೆ ಲಕ್ಷ ವಿದ್ಯಾರ್ಥಿಗಳು ಸುರಕ್ಷಿತವಾಗಿ ಪರೀಕ್ಷೆಯನ್ನು ಬರೆಯಲು ಶಿಕ್ಷಣ, ಗೃಹ, ಆರೋಗ್ಯ ಮತ್ತು ಸಾರಿಗೆ ಇಲಾಖೆಯ ಒಂದು ಲಕ್ಷಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ಪರೀಕ್ಷಾ ಕಾರ್ಯಗಳಿಗೆ ನಿಯೋಜಿಸಲಾಗಿದೆ. ಪ್ರತಿ ಪರೀಕ್ಷಾ ಕೊಠಡಿಗಳು ಸೊಂಕು ನಿವಾರಕ ದ್ರವಣದಿಂದ ಸ್ಯಾನಿಟೈಸ್ ಗೆ ಒಳಗಾಗಿವೆ. ಪರೀಕ್ಷಾ ಕೇಂದ್ರದ ಸುತ್ತಲಿನ ಸೈಬರ್, ಜೆರಾಕ್ಸ್ ಕೇಂದ್ರಗಳು ಮುಚ್ಚಲಿವೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಲು ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಬಿಡುವ ಪೋಷಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಪರೀಕ್ಷಾ ಸಂದರ್ಭದಲ್ಲಿ ಸುರಕ್ಷಿತವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪರೀಕ್ಷೆ ಬರೆಯಲು ತಮ್ಮ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕೆಂದು ಸಚಿವ ಸುರೇಶ್ ಕುಮಾರ್ ಮನವಿ ಮಾಡಿದರು.
ಗೃಹ ಇಲಾಖೆಯ ಸಂಪೂರ್ಣ ಸಹಕಾರ:
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ ಶಿಕ್ಷಣ ಇಲಾಖೆಯ ಎಲ್ಲ ಕ್ರಮಗಳಿಗೆ ಗೃಹ ಇಲಾಖೆಯು ಸಂಪೂರ್ಣ ಸಹಕಾರವಿದೆ ಎಂದರು. ಎಲ್ಲ ಪರೀಕ್ಷ ಕೇಂದ್ರಗಳ ಸುತ್ತ 200 ಮೀಟರ್ ವರೆಗೂ ನಿಷೇದಾಜ್ಞೆಯನ್ನು ಪೊಲೀಸ್ ಇಲಾಖೆಯು ಜಾರಿಯಲ್ಲಿಡಲ್ಲಿದ್ದು, ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರ ಹಾಗೂ ಮುಂಭಾಗದಲ್ಲಿ ಜನದಟ್ಟಣೆ ಉಂಟಾಗದ ರೀತಿಯಲ್ಲಿ ನಿಯಂತ್ರಣ, ಪರೀಕ್ಷಾ ಅಕ್ರಮಗಳು ನಡೆಯದಂತೆ ಎಲ್ಲ ಸುರಕ್ಷಿತ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳಲಿದೆ ಎಂದರು.
ಸಹಾಯವಾಣಿ
ಪರೀಕ್ಷಾ ಕೇಂದ್ರಗಳಲ್ಲಿ ಉದ್ಬವಿಸಬಹುದಾದ ಸಮಸ್ಯೆಗಳು ಹಾಗೂ ಸಂದೇಹಗಳನ್ನು ಪರಿಹರಿಸಲು ಕೇಂದ್ರಿಕೃತ ಸಹಾಯವಾಣಿಯನ್ನು ಶಿಕ್ಷಣ ಇಲಾಖೆಯು ತೆರೆದಿದ್ದು, 080-23310075 ಹಾಗೂ 080-23310076 ಗಳು ಕಾರ್ಯನಿರ್ವಹಿಸಲಿವೆ ಯಾವುದೇ ಪರೀಕ್ಷ ಕೇಂದ್ರಿತ ಸಮಸ್ಯೆಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರಾದ ಶ್ರೀಮತಿ ಸುಮಂಗಲ ಇವರು ನೋಡೆಲ್ ಅಧಿಕಾರಿಯಾಗಿ ಕೆಲವ ಮಾಡುವವರಿದ್ದು ಅವರನ್ನು ಯಾವುದೇ ಸಂದರ್ಭದಲ್ಲಿಯೂ ದೂರವಾಣಿ ಸಂಖ್ಯೆ 9449049434 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದರು.
ಕೋವಿಡ್-19 ಬಗ್ಗೆ ಅನವಶ್ಯಕ ಆತಂಕ ಬೇಡ – ತಾಂತ್ರಿಕ ಸಮಿತಿಯ ಅಧ್ಯಕ್ಷ ಡಾ. ಸುದರ್ಶನ್
ರಾಜ್ಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಹಾಗೂ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಸುದರ್ಶನ್ ಮಾತನಾಡಿ ಶಿಕ್ಷಣ ಇಲಾಖೆಯು ಪ್ರಮಾಣಿತ ಕಾರ್ಯಚರಣ ವಿಧಾನ (SOP)ದನುಸಾರ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಯಲಿಟ್ಟಿದ್ದು, ಈ ಕ್ರಮಗಳನ್ನು ಅನುಸರಿಸಿ ಪರೀಕ್ಷಾ ಕೇಂದ್ರಕ್ಕೆ ಹಾಜರಾದರೆ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು. ಮಾಸ್ಕ, ಸ್ಯಾನಿಟೈಸರ್ಗಳನ್ನು ಕಡ್ಡಾಯವಾಗಿ ಬಳಸಿ ಸುರಕ್ಷಿತ ಸಾಮಾಜಿಕ ಅಂತರವನ್ನು ಕಾಯ್ದುಕೊಂಡರೆ ಯಾವುದೇ ಆರೋಗ್ಯ ಸಮಸ್ಯೆಯು ಉದ್ಬವಿಸುವುದಿಲ್ಲ ಎಂದ ಡಾ. ಸುದರ್ಶನ್ ಪೋಷಕರು ಸರ್ಕಾರದ ನಿರ್ದೇಶನಗಳನ್ನು ವಿದ್ಯಾರ್ಥಿಗಳು ಪಾಲಿಸುವಲ್ಲಿ ಸೂಕ್ತ ಮಾರ್ಗದರ್ಶನವನ್ನು ನೀಡಿ ಪರೀಕ್ಷೆಗೆ ಸಜ್ಜುಗೊಳಿಸಬೇಕೆಂದರು. ಆತಂಕದಿಂದ ಪರೀಕ್ಷ ಕೊಠಡಿಯೊಳಕ್ಕೆ ಆಗಮಿಸುವ ಯಾವುದೇ ವಿದ್ಯಾರ್ಥಿಯು ತಾನು ಅಪೇಕ್ಷಿಸಿದಲ್ಲಿ ಒಂದೆರಡು ಕ್ಷಣ ಮಾಸ್ಕನ್ನು ಮೂಗಿನ ಕೆಳಭಾಗಕ್ಕೆ ಇಳಿಸಿದಲ್ಲಿಯೂ ಸಹ ಯಾವುದೇ ಆರೋಗ್ಯದ ಸಮಸ್ಯೆಯಾಗುವುದಿಲ್ಲ. ಕೆಮ್ಮು, ಸೀನಬೇಕಾದಲ್ಲಿ ಮಾತ್ರ ಕಡ್ಡಯವಾಗಿ ಮಾಸ್ಕನ್ನು ಧರಿಸಿದ್ದಲ್ಲಿ ಬೇರಾವ ತೊಂದರೆಯು ಆಗುವುದಿಲ್ಲ. ಲಕ್ಷಣ ರಹಿತವಾದ ವ್ಯಕ್ತಿಗಳಿಂದ ಬೇರೆ ವ್ಯಕ್ತಿಗಳಿಗೆ ಕೋವಿಡ್-19 ಹರಡುವಿಕೆ ಸಾಧ್ಯತೆಗಳು ತೀರ ಕಡಿಮೆ ಎಂಬುದು ವಿಶ್ವಾದ್ಯಂತ ನಡೆಸಿರುವ ಆರೋಗ್ಯ ಸಮೀಕ್ಷೆಗಳಲ್ಲಿ ಸಾಬೀತಾಗಿದೆ. ಅನವಶ್ಯಕವಾಗಿ ಕೋವಿಡ್-19 ಕುರಿತಂತೆ ಸಾರ್ವಜನಿಕರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಡಾ. ಸುದರ್ಶನ್ ಹೇಳಿದರು.
ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ
ಇಂದು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ನಾಳೆ ನಡೆಯಲಿರುವ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎನ್ನುವ ವದಂತಿ ಸುಳ್ಳು ಎಂದು ಸ್ಪಷ್ಟೀಕರಿಸಿದ ಸುರೇಶ್ ಕುಮಾರ್ ಈ ಸುದ್ಧಿಯನ್ನು ಹಬ್ಬಿದ ವ್ಯಕ್ತಿಗಳನ್ನು ಬಂದಿಸಲು ಸೈಬರ್ ಕ್ರೈಮ್ಗೆ ಇಲಾಖೆಯು ದೂರನ್ನು ನೀಡುತ್ತದೆ ಎಂದು ಹೇಳಿದರು. ಮಾಧ್ಯಮಗಳು ಇಂತಹ ಸುದ್ಧಿಗಳನ್ನು ಬಿತ್ತರಿಸುವಾಗ ಅತ್ಯಂತ ಜಾಗರೂಕವಾಗಿ ಆಲೋಚಿಸಿ ಖಚಿತ ಪಡಿಸಿಕೊಂಡು ಕ್ರಮ ವಹಿಸಬೇಕಂದು ಮನವಿ ಮಾಡಿದ ಸುರೇಶ್ ಕುಮಾರ್ ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಸಮಾಜದ ಆತ್ಮ ವಿಶ್ವಾಸವನ್ನು ವೃದ್ಧಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಪರೀಕ್ಷಾ ಕೇಂದ್ರಗಳಿಗೆ ಭೇಟಿ:
ಇಂದು ಬೆಳಗ್ಗಿನಿಂದ ಬೆಂಗಳೂರಿನ 08 ವಿವಿಧ ಪರೀಕ್ಷಾ ಕೇಂದ್ರಗಳಿಗೆ ತಾವು ಭೇಟಿ ನೀಡಿದ್ದು ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದ್ದ ಅಣಕು ವ್ಯವಸ್ಥೆಯನ್ನು ಪರಿಶೀಲಿಸಿದ್ದಾಗಿ ಸಚಿವ ಸುರೇಶ್ ಕುಮಾರ್ ಹೇಳಿದರು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿದ್ದತಾ ಕ್ರಮಗಳು ತೃಪ್ತಿಕರವಾಗಿದ್ದು ಯಾವುದೇ ಪೋಷಕರು ಧೈರ್ಯದಿಂದ ತಮ್ಮ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಿ ಅವರ ಹಿತದೃಷ್ಠಿಯಿಂದ ಸರ್ಕಾರವು ತೆಗೆದುಕೊಂಡಿರುವ ಕ್ರಮಗಳಿಗೆ ಪೋತ್ಸಾಹ ನೀಡಬೇಕೆಂದರು.
ಸಾಂಕ್ರಮಿಕ ರೋಗ ತಜ್ಞ ಡಾ. ಗಿರಿಧರ ಬಾಬು, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ. ಲೋಕೇಶ್, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ. ಜಗದೀಶ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.
Related Articles
Thank you for your comment. It is awaiting moderation.
Comments (0)