ರಾಜ್ಯದ ಜನರಿಗೆ ಹೊರೆಯಾಗದಂತೆ ರೈತರ ಸಾಲ ಮನ್ನಾ: ಸಿಎಂ

ಬೆಂಗಳೂರು: ಜುಲೈ ಮೊದಲನೇ ವಾರದಲ್ಲಿ ರಾಜ್ಯ ಮುಂಗಡ ಬಜೆಟ್ ಮಂಡನೆ ಮಾಡುತ್ತೇನೆ, ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಬಗ್ಗೆ ಘೋಷಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

ಬೆಂಗಳೂರು ವರದಿಗಾರರ ಕೂಟ ಮತ್ತು ಪ್ರೆಸ್‌ಕ್ಲಬ್ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯದ ಮೈತ್ರಿ ಸರ್ಕಾರವನ್ನು ರಾಷ್ಟ್ರ ಮಟ್ಟದಲ್ಲಿ ಎಲ್ಲರೂ ಗಮನಿಸುತ್ತಿದ್ದಾರೆ. ರೈತರ ಸಾಲಮನ್ನಾ ವಿಚಾರದಲ್ಲಿ ನನಗೆ ಕಮಿಟೆಮೆಂಟ್ ಇದೆ. ಈ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆ ಇಲ್ಲ.  ಸಾಲ ಮನ್ನಾ ಮಾಡಲು ಸಾವಿರಾರು ಕೋಟಿ ಹಣ ಹೊಂದಾಣಿಕೆ ಮಾಡಬೇಕಿದೆ. ಸರ್ಕಾರ ಯಂತ್ರದಲ್ಲಿ ಸೋರಿಕೆಯನ್ನು  ತಡೆಯಬೇಕು ಎಂದರು.

ರೈತರ ಸಾಲಮನ್ನಾ ಬಗ್ಗೆ ಪ್ರಧಾನಿ ಬಳಿಯೂ ಮನವಿ ಮಾಡಿದ್ದೇನೆ. ಕೇಂದ್ರ ಸರ್ಕಾರ ಎರಡು ಲಕ್ಷ ಕೋಟಿ ಬಾಂಡ್ ತಯಾರಿಸಲು ರಾಷ್ಟ್ರೀಯ ಬ್ಯಾಂಕ್ ಗಳಿಗೆ ನೀಡಿದ್ದಾರೆ. ಅದರಲ್ಲಿ 25% ಹಣವನ್ನ ರೈತರ ಸಾಲ ಮನ್ನಾ ಕಡೆ ಡೈವರ್ಟ್ ಮಾಡಿ ಅಂತ ಮನವಿ ಮಾಡಿದ್ದೇನೆ. ರಾಹುಲ್ ಗಾಂಧಿ ಭೇಟಿ ಮಾಡಿ ಅವರಿಂದ ಕೆಲವು ಸಲಹೆಗಳನ್ನು ಪಡೆದುಕೊಂಡಿದ್ದೇನೆ ಮತ್ತು ಕೆಲವೊಂದು ವಿಚಾರಗಳನ್ನು ಅವರ ಮುಂದಿಟ್ಟಿದ್ದೇನೆ ಎಂದು ತಿಳಿಸಿದರು.

ಜುಲೈ ಮೊದಲನೇ ವಾರದಲ್ಲಿ ಬಜೆಟ್ ಮಂಡನೆ ಮಾಡುತ್ತೇನೆ. ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಬಗ್ಗೆ ಘೋಷಣೆ ಮಾಡುತ್ತೇನೆ. ಸಾಲಮನ್ನಾ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ರಾಜ್ಯದ ಜನತೆಗೆ ಹೊರೆಯಾಗದಂತೆ ರೈತರ ಸಾಲಮನ್ನಾ ಮಾಡಲು ಬದ್ಧನಾಗಿದ್ದೇನೆ ಎಂದು ಮತ್ತೊಮ್ಮ ರಾಜ್ಯದ ರೈತರಿಗೆ ಭರವಸೆ ನೀಡಿದರು.

Related Articles

Comments (0)

Leave a Comment