ಬೇಲಿಯೇ ಎದ್ದು ಹೊಲ ಮೇಯ್ದಂಗೆ: ಆರೋಗ್ಯ ಸಚಿವರ ನಡೆಗೆ ಭಾರೀ ಆಕ್ರೋಶ!
- by Suddi Team
- June 2, 2020
- 15 Views

ಚಿತ್ರದುರ್ಗ: ಕೊರೋನಾ ಸಂಕಷ್ಟದಿಂದ ಸರ್ಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಗುಂಪು ಸೇರಬೇಡಿ ಎಂದೆಲ್ಲಾ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ, ಆದ್ರೆ ಈ ಎಲ್ಲಾ ಜಾಗೃತಿ ಕೇವಲ ಜನ ಸಾಮಾನ್ಯರಿಗೆ ಮಾತ್ರನಾ ಎಂಬ ಅನುಮಾನ ಮೂಡುವಂತಾಗಿದೆ. ಯಾಕಂದ್ರೆ ಜವಬ್ದಾರಿ ಮರೆತ ಆರೋಗ್ಯ ಸಚಿವರೊಬ್ಬರು ಜನ ಸೇರಿಸಿ ದೊಂಬಿ ಮಾಡಿದ್ದಾರೆ.
ಆರೋಗ್ಯ ಸಚಿವ ಶ್ರೀರಾಮುಲು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪರಶುರಾಮಪುರ ಭಾಗದಲ್ಲಿ ಹರಿಯುತ್ತಿರುವ ವೇದಾವತಿ ನದಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ರು. ಅರೋಗ್ಯ ಸಚಿವರಿಗೆ ಅಭಿಮಾನಿಗಳು, ಕಾರ್ಯಕರ್ತರು ಭರ್ಜರಿ ಸ್ವಾಗತ ಆಯೋಜಿಸಿದ್ದರು. ಕನಿಷ್ಠ ಜ್ಞಾನವೂ ಇಲ್ಲದೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನ, ಜನಪ್ರತಿನಿಧಿಗಳು ಅಕ್ಷರಶಃ ಅನಾಗರಿಕರಂತೆ ವರ್ತಿಸಿದ್ರು. ಪಟಾಕಿ ಸಿಡಿಸಿ, ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿ ನೂರಾರು ಕೆಜಿ ತೂಕದ ಸೇಬಿನ ಹಾರ ಹಾಕಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನ ಉಲ್ಲಂಘಿಸಿದರು.
ಇನ್ನೂ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಬುದ್ಧಿ ಹೇಳಬೇಕಿದ್ದ ಸಚಿವ ಶ್ರೀರಾಮುಲು ಸಾಮಾಜಿಕ ಅಂತರವೂ ಕಾಪಾಡಿಕೊಳ್ಳದೆ, ಮಾಸ್ಕ್ ಕೂಡ ಹಾಕದೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚತ್ತ ಶ್ರೀರಾಮುಲು ಯೂ ಟರ್ನ್ ಹೊಡೆದಿದ್ದು, ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರಿಗೆ ನೀತಿ ಪಾಠ ಹೇಳಿದ್ದಾರೆ. ಮೆರವಣಿಗೆಯಲ್ಲಿ ನಗು ಮೊಗದಿಂದಲೇ ಸೇಬಿನ ಹಾರಕ್ಕೆ ಕೊರಳೊಡ್ಡಿದ ರಾಮುಲು ನಂತರ ಹಾಗೆಲ್ಲ ಮಾಡಿದ್ದು ತಪ್ಪು, ನಾವು ಪ್ರಧಾನಿ, ಮುಖ್ಯಮಂತ್ರಿ ಮಾತಿಗೆ ಬೆಲೆ ಕೊಡಬೇಕು. ಎಲ್ಲರೂ ಮಾಸ್ಕ್ ಹಾಕಿಕೊಳ್ಳಬೇಕು ಅಂತ ಹೇಳೋ ಮೂಲಕ ತೇಪೆ ಹಚ್ಚೋ ಕೆಲಸ ಮಾಡಿದ್ರು. ಅಲ್ಲದೆ ಮುಂದಿನ ಊರುಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳನ್ನು ರದ್ದು ಮಾಡ್ಕೊಂಡು ವಾಪಸ್ ಬೆಂಗಳೂರಿಗೆ ಹೋಗ್ತಿನಿ ಅಂತ ತಪ್ಪು ಮರೆಮಾಚೋ ಕೆಲಸ ಮಾಡಿದ್ರು.
ಸಚಿವರು ಕಾರ್ಯಕ್ರಮ ಮುಗಿಯೋವರೆಗೂ ಸಂಭ್ರಮದಿಂದಲೇ ಸಭೆಯಲ್ಲಿ ಭಾಗವಹಿಸಿದ್ದರು. ಶ್ರೀರಾಮುಲುಗೆ ಸಂಸದ ಎ.ನಾರಾಯಣಸ್ವಾಮಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸಾಥ್ ನೀಡಿದ್ರು..
Related Articles
Thank you for your comment. It is awaiting moderation.
Comments (0)