ಗದ್ದೆಗಿಳಿದು ಭತ್ತ ನಾಟಿ ಮಾಡಿದ ಸಿಎಂ ಕುಮಾರಸ್ವಾಮಿ!
- by Suddi Team
- August 11, 2018
- 257 Views

ಮಂಡ್ಯ: ಗದ್ದೆಗಿಳಿದು ನಾಟಿ ಮಾಡುವ ಮೂಲಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರೈತರು ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿದರು.
ಮಂಡ್ಯದ ಪಾಂಡವಪುರ ತಾಲ್ಲೂಕಿನ ಸೀತಾಪುರದ ಮಹದೇವಮ್ಮ ಎಂಬುವರ ಜಮೀನಿನಲ್ಲಿ ಸಿಎಂ ಭತ್ತ ನಾಟಿ ಮಾಡಿದರು. ಈ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿ, ನನ್ನ ರೈತ ಬಂಧುಗಳ ಜೊತೆಗೂಡಿ ನಾಟಿ ಮಾಡಿದ್ದೇನೆ. ಭತ್ತದ ಕಣಜ, ಹಸಿರಿನ ನಾಡು ಮಂಡ್ಯ ಜಿಲ್ಲೆ ಪ್ರಕೃತಿ ವಿಕೋಪ, ಬರ, ಮಳೆ ಹಾನಿಯಿಂದ ಜಿಲ್ಲೆ ಸೊರಗಿತ್ತು. ಕಳೆದ ಎರಡು ವರ್ಷದಿಂದ ಮಂಡ್ಯ ಜಿಲ್ಲೆಯ ರೈತರು ನೀರಿನ ಕೊರತೆಯಿಂದಾಗಿ ಭತ್ತ ನಾಟಿ ಮಾಡಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಕೃಷಿ ಇಲಾಖೆಯಿಂದ ರೈತರಿಗೆ ಭತ್ತ ನಾಟಿ ಮಾಡದಿರಲು, ಮನವಿ ಸಹ ಮಾಡಲಾಗಿತ್ತು. ಈ ವರ್ಷ ಕಾವೇರಿ ಕಣಿವೆ ಭಾಗದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ, ಭತ್ತವನ್ನು ನಾಟಿ ಮಾಡಲು ಒಳ್ಳೆಯ ವಾತಾವರಣ ಕೂಡಿ ಬಂದಿದೆ ಎಂದು ಸಿಎಂ ಹರ್ಷ ವ್ಯಕ್ತಪಡಿಸಿದರು.
ನಾನು ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಬಂದಿದ್ದೇನೆ. ಇಲ್ಲಿ ಕೆಲವು ಮಹತ್ವದ ಘೋಷಣೆಗಳನ್ನು ನಾನು ಮಾಡುವಂತಿಲ್ಲ. ಆದರೆ ಗೌರಿ-ಗಣೇಶ ಹಬ್ಬದೊಳಗೆ ಹೊಸ ಘೋಷಣೆ. ಸಂಪುಟದಲ್ಲಿ ಚರ್ಚಚೆ ಬಳಿಕ ನಾನು ಸಿಹಿ ಸುದ್ದಿ ನೀಡುತ್ತೇನೆ. ತಾಯಿ ಚಾಮುಂಡಿ ಈ ಬಾರಿ ನಮಗೆ ಕರುಣೆ ತೋರಿದ್ದಾಳೆ ಎಂದರು.
37 ಕ್ಷೇತ್ರಗಳಲ್ಲಿ ಗೆದ್ದಿದ್ದರೂ ಸಹಾ ನಾನು ಸಿಎಂ ಆಗಿದ್ದೇನೆ. ತಿಂಗಳಲ್ಲಿ ಒಂದು ದಿನ ಜನರ ಮಧ್ಯದಲ್ಲಿರುತ್ತೇನೆ. ನಿಮ್ಮ ಋಣ ತೀರಿಸಲು ನಾನು ಸದಾ ಬದ್ಧನಾಗಿರುತ್ತೇನೆ. ಏನೇ ಕಷ್ಟ ಬಂದರೂ ವಿಧಾನಸೌಧ ಬಾಗಿಲು ತೆರೆದಿರುತ್ತೆ. ರೈತರನ್ನು ಉಳಿಸಿಕೊಳ್ಳುವುದು ನನ್ನ ಕರ್ತವ್ಯ ಎಂದು ಗ್ರಾಮದ ಜನರಲ್ಲಿ ಭರವಸೆ ಮೂಡಿಸಿದರು.
ಒಂದು ವರ್ಷದ ಹಿಂದಯೇ ನಾನು ನಾಟಿ ಮಾಡುವ ಘೋಷಣೆ ಮಾಡಿದ್ದೆ. ನಾವು ಚಿಕ್ಕ ವಯಸ್ಸಿನಲ್ಲಿಯೇ ಹೊಲದಲ್ಲಿ ಕೆಲಸ ಮಾಡುತ್ತಿದ್ದೆವು. ನಮ್ಮ ಜೀವನದ ಕಸುಬು ಮುಂದುವರೆಸಿದ್ದೇನೆ. ನನ್ನ ತಾಯಿಯೊಂದಿಗೆ ಜತೆ ಸೇರಿ ಭತ್ತದ ನಾಟಿ ಮಾಡಿದ್ದೇನೆ. ಇಂದು ಭತ್ತದ ನಾಟಿಯಲ್ಲಿ ಭಾಗವಹಿಸಿದ್ದು ನನ್ನ ಪುಣ್ಯ. ಇನ್ನು ಒಂದು ವಾರದಲ್ಲಿ ಸಹಕಾರಿ ಬ್ಯಾಂಕ್ ನ ಒಂದೂವರೆ ಸಾವಿರ ಕೋಟಿ ಸಾಲ ಮನ್ನಾ ಮಾಡುತ್ತೇನೆ ಎಂದು ಮತ್ತೊಮ್ಮೆ ಸಾಲ ಮನ್ನಾ ಕುರಿತು ರೈತರಿಗೆ ಸ್ಪಷ್ಟಪಡಿಸಿದರು.
30 ಜಿಲ್ಲೆಯ ರೈತರಿಗಾಗಿ ನನ್ನ ಜೀವನ ಮುಡಿಪಾಗಿಟ್ಟಿದ್ದೇನೆ. ಯಾವುದೇ ಸಂಕಷ್ಟ ಬಂದರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಿಮ್ಮ ಸಂಕಷ್ಟಗಳನ್ನು ನಾನು ಪರಿಹರಿಸ್ತೇನೆ. ತಿಂಗಳಿಗೊಂದು ಜಿಲ್ಲೆಗೆ ಭೇಟಿ ನೀಡಿ ರೈತರ ಜತೆ ಸಂವಾದ ನಡೆಸುತ್ತೇನೆ. ಸಹಕಾರಿ ಬ್ಯಾಂಕ್ ಗಳಲ್ಲಿ 9500 ಕೋಟಿ ಸಾಲ ಮನ್ನಾ ಮಾಡಿರುವೆ ಎಂದು ಹೇಳಿದರು
ಇದೇ ವೇಳೆ ಮಾತನಾಡಿದ ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು, ಭತ್ತ ನಾಟಿ ಕಾರ್ಯ ಯುವಜನತೆಗೆ ಮಾದರಿ. ಕೈ ಕೆಸರಾದರೆ ಬಾಯಿ ಮೊಸರು ಎಂಬುದು ನಾಣ್ನುಡಿ. ಆದರೀಗ, ಕೈ ಕೆಸರಾಗಬಾರದು, ಬಾಯಿ ಮೊಸರಾಗ ಬೇಕೆಂಬ ಆಸೆ. ಇಂತಹ ಯುವ ಸಮೂಹಕ್ಕೆ ಸಿಎಂ ಕಾರ್ಯ ಮಾದರಿಯಾಗಿದೆ. ಯುವ ಸಮುದಾಯ ಕೃಷಿಯನ್ನು ಆಶ್ರಯಿಸಲು ಸಿಎಂ ಮಾದರಿಯಾಗಿದ್ದಾರೆ ಎಂದರು.
Related Articles
Thank you for your comment. It is awaiting moderation.
Comments (0)