ಹನ್ನೆರಡು ರಾಶಿಗಳ ಮೇಲೆ ಜುಲೈ 27ರ ಚಂದ್ರ ಗ್ರಹಣದ ಫಲಾಫಲ


ಜುಲೈ ಇಪ್ಪತೇಳನೇ ತಾರೀಕು ರಾತ್ರಿ 11.55ರಿಂದ 28ರ ಮಧ್ಯರಾತ್ರಿ 3.50ರ ತನಕ ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರ ಗ್ರಹಣ ಸಂಭವಿಸುತ್ತದೆ. ಇದು ಬಹಳ ದೀರ್ಘ ಕಾಲ ನಡೆಯುವ ಖಗ್ರಾಸ ಚಂದ್ರಗ್ರಣ. ಈ ಗ್ರಹಣದ ಅವಧಿಯಲ್ಲಿ ರವಿ ಹಾಗೂ ಚಂದ್ರನ ಮಧ್ಯೆ ಸಂಬಂಧ ಕಳೆದು ಹೋಗುತ್ತದೆ. ಅಂದಹಾಗೆ ಗ್ರಹಣವು ಉತ್ತರಾಷಾಢ ನಕ್ಷತ್ರದ ಕೊನೆ ಭಾಗ ಮತ್ತು ಶ್ರವಣ ನಕ್ಷತ್ರದಲ್ಲಿ ಸಂಭವಿಸಲಿದ್ದು, ಇದರ ಪರಿಣಾಮವು ಉತ್ತರಾಷಾಢ, ಶ್ರವಣ, ಧನಿಷ್ಠ, ಪೂರ್ವಾಷಾಢ, ರೋಹಿಣಿ, ಹಸ್ತ, ಕೃತ್ತಿಕಾ, ಉತ್ತರಾ ನಕ್ಷತ್ರದವರಿಗೆ ಆಗುತ್ತದೆ. ಇನ್ನು ರಾಶಿ ಪ್ರಕಾರ ಹೇಳಬೇಕು ಅಂದರೆ ಮಕರ, ವೃಷಭ, ಸಿಂಹ, ಧನು ರಾಶಿಯವರಿಗೆ ಈ ದೋಷದ ಫಲ ಹೆಚ್ಚಾಗಿ ಆಗುತ್ತದೆ. ಮನಸ್ಸು ಉದ್ವಿಗ್ನಗೊಳಿಸುವ ಜುಲೈ 27ರ ಚಂದ್ರಗ್ರಹಣದ ಪರಿಣಾಮ ಏನಾಗಲಿದೆ?

ಹೀಗೆ ಇಷ್ಟೇ ನಕ್ಷತ್ರ ಹಾಗೂ ರಾಶಿಯವರಿಗೆ ಹೀಗೆ ಎಂದು ಹೇಳಿಬಿಟ್ಟರೆ, ಉಳಿದ ರಾಶಿಗಳವರಿಗೆ ಎಂಥ ಫಲ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದ್ದರಿಂದ ದ್ವಾದಶಿ ರಾಶಿಗಳಿಗೆ ಈ ಬಾರಿಯ ಚಂದ್ರ ಗ್ರಹಣ ಏನು ಫಲ ನೀಡುತ್ತದೆ ಎಂಬುದನ್ನು ತಿಳಿಸಲಾಗುತ್ತಿದೆ. ಈ ಹಿಂದಿನ ಲೇಖನದಲ್ಲಿ ಗ್ರಹಣ ಕಾಲದ ಆಚರಣೆ, ಆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ವಿಧಿ-ವಿಧಾನಗಳನ್ನು ತಿಳಿಸಲಾಗಿತ್ತು. ಅದನ್ನೂ ಒಮ್ಮೆ ಓದಿಬಿಡಿ.

ಮೇಷ: ಶುಭ ಸಮಾಚಾರಗಳನ್ನು ಕೇಳುವ ಯೋಗವಿದೆ ಈ ಗ್ರಹಣವು ನಿಮಗೆ ಶುಭ ಫಲ ನೀಡುತ್ತದೆ. ಸುಖ ನೀಡುತ್ತದೆ. ಬಹಳ ಕಾಲದಿಂದ ದುಃಖದಿಂದ ಇದ್ದೀನಿ, ನೆಮ್ಮದಿಯಿಲ್ಲದಂತೆ ಆಗಿದೆ ಎಂದು ಕೊರಗುತ್ತಿದ್ದರೆ ಈ ಗ್ರಹಣದ ಮೂಲಕ ಉತ್ತಮ ಫಲ ಕಾಣುತ್ತೀರಿ. ಶುಭ ಸಮಾಚಾರಗಳನ್ನು ಕೇಳುವ ಯೋಗವಿದೆ. ಇಷ್ಟು ಕಾಲ ಇದ್ದ ಚಿಂತೆಗಳು ಕರಗುತ್ತವೆ.

ವೃಷಭ: ಅವಮಾನ ಆಗದಂತೆ ಇರಲು ಎಚ್ಚರ ವಹಿಸಿ ನಿಮಗೆ ಈ ಗ್ರಹಣದಿಂದ ಶುಭವೂ ಅಲ್ಲ, ಅಶುಭವೂ ಎಂಬಂಥ ಸ್ಥಿತಿ ಇದೆ. ಆದರೆ ಈಗಿನ ಗ್ರಹಣದ ಸ್ಥಿತಿಯನ್ನು ವಿಶ್ಲೇಷಣೆ ಮಾಡಿದರೆ, ಹೆಚ್ಚು ಮಾತನಾಡದಂತೆ ಇದ್ದುಬಿಡಿ. ಇದರಿಂದ ಎಷ್ಟೋ ಸಂಭವನೀಯ ಅವಮಾನಗಳಿಂದ ತಪ್ಪಿಸಿಕೊಳ್ಳಬಹುದು. ಆದ್ದರಿಂದ ನಿಮಗೆ ಸಂಬಂಧಪಡದ ವಿಚಾರಗಳಿಗೆ ಮಧ್ಯ ಮೂಗು ತೂರಿಸಿ ಅಭಿಪ್ರಾಯ ಹೇಳಲು ಹೋಗಬೇಡಿ.

ಮಿಥುನ: ಅಶುಭ ಫಲಗಳೇ ಹೆಚ್ಚಾಗಿವೆ ಈ ಬಾರಿ ಗ್ರಹಣ ಅಶುಭ ಫಲಗಳನ್ನು ನೀಡುತ್ತದೆ. ಉದ್ಯೋಗ, ಕುಟುಂಬ, ವೃತ್ತಿ- ವ್ಯಾಪಾರದಲ್ಲಿ ಕಷ್ಟಗಳೇ ಗೋಚರಿಸುತ್ತಿವೆ. ಮೇಲಿಂದ ಮೇಲೆ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನೀವು ಅಂದುಕೊಂಡಂತೆ ಯಾವುದೂ ಸಲೀಸಾಗಿ ನಡೆಯುವುದಿಲ್ಲ. ಆದ್ದರಿದ ಈ ಬಾರಿ ನೀವು ಗ್ರಹಣ ಶಾಂತಿ ಮಾಡಿಸಿಕೊಳ್ಳುವುದು ಉತ್ತಮ.

ಕರ್ಕಾಟಕ: ಶುಭ- ಅಶುಭ ಮಿಶ್ರ ಫಲ ನಿಮಗೆ ಶುಭ- ಅಶುಭ ಫಲಗಳನ್ನು ತೋರಿಸುತ್ತಿದೆ. ಸ್ತ್ರೀ ಸಂಬಂಧಿ ವಿಚಾರದಲ್ಲಿ ಕರ್ಕಾಟಕ ರಾಶಿಯ ಪುರುಷರು ಹೆಚ್ಚು ಎಚ್ಚರವಾಗಿರಬೇಕು. ಇನ್ನು ಈ ರಾಶಿಯ ಸ್ತ್ರೀಯರಿಗೆ ಗುಪ್ತ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಅಥವಾ ಈಗಾಗಲೇ ಸಮಸ್ಯೆಯಿದ್ದರೆ ಅದು ಉಲ್ಬಣಿಸಬಹುದು. ಇನ್ನು ಯಾರಿಗೂ ಗೊತ್ತಾಗದಂತೆ ವ್ಯವಹಾರ ಮಾಡಿದ್ದರೆ ಅದರಿಂದ ತೊಂದರೆಗಳನ್ನು ಎದುರಿಸುವಂತಾಗುತ್ತದೆ.

ಸಿಂಹ: ಒಳ್ಳೆಯ ವಿಚಾರಗಳು ನಡೆಯುತ್ತವೆ ಪಂಚಮ ಶನಿಯ ಪ್ರಭಾವದಿಂದ ಬಹಳ ಕಷ್ಟದಲ್ಲಿದ್ದೀವಿ. ಇನ್ನು ಈಗ ಗ್ರಹಣ ಬೇರೆ. ಇದರ ಪ್ರಭಾವ ನಮ್ಮ ಮೇಲೆ ಹೇಗೆ ಆಗುತ್ತದೋ ಎಂದು ಗಾಬರಿಯಾಗಿದ್ದರೆ, ಚಿಂತೆ ಬಿಟ್ಟುಬಿಡಿ. ಈ ಗ್ರಹಣವು ನಿಮಗೆ ಅನುಕೂಲವನ್ನು ತಂದುಕೊಡಲಿದೆ. ಈ ಸಮಯದಲ್ಲಿ ಶುಭ ಸುದ್ದಿಯನ್ನು ಕೇಳುತ್ತೀರಿ. ಒಳ್ಳೆಯ ವಿಚಾರಗಳು ನಿಮ್ಮ ಬದುಕಿನಲ್ಲಿ ಘಟಿಸುತ್ತವೆ.

ಕನ್ಯಾ: ಮನಸಿಗೆ ವೃಥಾ ಚಿಂತೆ ಕಾಡುತ್ತದೆ ನಿಮಗೆ ವೃಥಾ ಚಿಂತೆಗಳನ್ನು ಉಂಟು ಮಾಡುತ್ತದೆ. ಸಮಸ್ಯೆಯೇ ಅಲ್ಲದ ವಿಚಾರವೊಂದನ್ನು ಮನಸ್ಸಿಗೆ ತೆಗೆದುಕೊಂಡು, ಚಿಂತೆ ಮಾಡುವಂತಾಗುತ್ತದೆ. ಏಕೆ ಚಿಂತೆ ಮಾಡುತ್ತಿದ್ದೀರಿ ಎಂದು ಕುಟುಂಬದವರು ನಿಮ್ಮನ್ನು ಕೇಳಿ, ಅವರಿಗೆ ನೀವು ಕಾರಣ ಹೇಳಿದರೂ ಇದೆಂಥ ಕ್ಷುಲ್ಲಕ ವಿಚಾರ ಎಂದು ಹಾಸ್ಯ ಮಾಡುವಂತೆ ಆಗುತ್ತದೆ.

ತುಲಾ: ಬೇಡದ ವಿಚಾರಕ್ಕೆ ಮೂಗು ತೂರಿಸಕ್ಕೆ ಹೋಗಬೇಡಿ ಈ ಕೇತುಗ್ರಸ್ತ ಚಂದ್ರ ಗ್ರಹಣ ಮುಖ್ಯವಾಗಿ ನಿಮಗೆ ಸಮಸ್ಯೆಯನ್ನು ತರುತ್ತದೆ. ನಿಮ್ಮ ಮಾತು ಎಲ್ಲರೂ ಕೇಳುತ್ತಾರೆ. ಎಲ್ಲರೂ ಸ್ನೇಹಿತರು ಎಂಬ ಧೋರಣೆಯಿಂದ ಎಲ್ಲ ವಿಚಾರಕ್ಕೂ ಮೂಗು ತೂರಿಸಲು ಹೋಗುವುದು ಒಳ್ಳೆಯದಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ, ಆ ನಂತರವೇ ಮುಂದಕ್ಕೆ ಹೆಜ್ಜೆ ಇಡಿ. ನಿಮ್ಮದಲ್ಲದ, ಬೇಡದ ವಿಚಾರಕ್ಕೆ ಮೂಗು ತೂರಿಸಬೇಡಿ.

ವೃಶ್ಚಿಕ: ಅನುಕೂಲಕರ ಸನ್ನಿವೇಶ ಸೃಷ್ಟಿ ಸಾಡೇಸಾತ್ ನಿಮಗೆ ನಡೆಯುತ್ತಿದ್ದರೂ ಈ ಗ್ರಹಣದಿಂದ ಬಹಳ ಅನುಕೂಲಕರವಾದ ಸಮಯವನ್ನು ಕಾಣುತ್ತೀರಿ. ದುಡ್ಡು- ಕಾಸು ಕಾಣುವಂತೆ ಆಗುತ್ತದೆ. ಶುಭ ಸುದ್ದಿಯನ್ನು ಕೇಳುತ್ತೀರಿ. ಲಾಭದ ನಿರೀಕ್ಷೆಯಲ್ಲಿದ್ದರೆ ಅದು ಕೂಡ ಸಾಧ್ಯವಾಗುತ್ತದೆ. ಯಾವುದಾದರೂ ಸಾಲಕ್ಕೆ ಅರ್ಜಿ ಹಾಕಿಕೊಂಡು ಅದರ ನಿರೀಕ್ಷೆಯಲ್ಲಿದ್ದರೆ ಅದು ಕೂಡ ನಿಮ್ಮ ಕೈ ಸೇರಲಿದೆ.

ಧನು: ಧನ ನಷ್ಟ ಆಗುವ ಸಾಧ್ಯತೆಗಳಿವೆ ನಿಮಗೆ ಎರಡನೇ ಸ್ಥಾನದಲ್ಲಿ ಗ್ರಹಣ ನಡೆಯುವುದರಿಂದ ಹಣಕಾಸಿನ ವಿಚಾರದಲ್ಲಿ ನಷ್ಟವಿದೆ. ಅದರಲ್ಲೂ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಬೇಕು ಅನ್ನೋ ಆಲೋಚನೆ ಇದ್ದರೆ ಅದನ್ನು ಕೈ ಬಿಡಿ. ಅಷ್ಟೇ ಇಲ್ಲ, ಯಾವುದೇ ರೀತಿಯ ರಿಸ್ಕ್ ಒಳಗೊಂಡ ಹೂಡಿಕೆಯನ್ನು ಈ ಸಂದರ್ಭದಲ್ಲಿ ಮಾಡಬೇಡಿ. ಹಾಗೊಂದು ವೇಳೆ ಮಾಡಿದರೆ ತೀರಾ ನಷ್ಟವನ್ನು ಅನುಭವಿಸುತ್ತೀರಿ, ಎಚ್ಚರ.

ಮಕರ: ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ನಿಮ್ಮ ರಾಶಿಯಲ್ಲೇ ಗ್ರಹಣ ನಡೆಯುವುದರಿಂದ ಗಾಯಗಳಾಗುವ ಸಾಧ್ಯತೆ ಇದೆ. ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆ ಇದೆ. ಈಜಲು ಹೋಗಬೇಡಿ. ಮರ ಹತ್ತಬೇಡಿ. ತೀರಾ ಅನಿವಾರ್ಯ ಅಲ್ಲದಿದ್ದರೆ ವಾಹನವನ್ನೇ ಚಾಲನೆ ಮಾಡಬೇಡಿ. ಇನ್ನು ಗಾಡಿ ಚಾಲನೆ ಮಾಡುವುದು ಅನಿವಾರ್ಯ ಎಂದಾದಲ್ಲಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಿ. ಗಾಯ, ಮೈ-ಕೈ ನೋವು ಕಾಣಿಸುತ್ತಿದೆ.

ಕುಂಭ: ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ನೀವು ಎಷ್ಟು ಸಾಧ್ಯವೋ ಅಷ್ಟು ಆರೋಗ್ಯದ ಬಗ್ಗೆ ಎಚ್ಚರವಾಗಿರಿ. ಎಲ್ಲೆಂದರಲ್ಲಿ ಊಟ ಮಾಡಬೇಡಿ, ನೀರು ಕುಡಿಯಬೇಡಿ. ಇನ್ನು ಎರಡ್ಮೂರು ತಿಂಗಳ ಕಾಲ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ, ಈ ಗ್ರಹಣವು ನಿಮಗೆ ಅಶುಭ ಫಲವನ್ನು ನೀಡುತ್ತದೆ. ಅದರಲ್ಲೂ ಆರೋಗ್ಯ ಬಾಧೆಯನ್ನು ತರುವುದರಿಂದ ನಾಲಗೆ ಮೇಲೆ ಹತೋಟಿಯಿರಲಿ.

ಮೀನ: ಭೂಮಿ ಲಾಭ, ವಸ್ತು ಲಾಭ ನಿಮಗೆ ಈ ಕೇತುಗ್ರಸ್ತ ಚಂದ್ರಗ್ರಹಣದಿಂದ ಬಹಳ ಶುಭ ಫಲಗಳಿವೆ. ವ್ಯಾಪಾರದಲ್ಲಿ ಲಾಭ, ಭೂಮಿ ಲಾಭ, ವಸ್ತು ಲಾಭ, ವ್ಯಕ್ತಿಗಳಿಂದ ಲಾಭ ಎಲ್ಲದರಿಂದ ಎಲ್ಲದರಲ್ಲಿಯೂ ಲಾಭ ಕಾಣುತ್ತಿದೆ. ಇನ್ನು ಇಷ್ಟು ಕಾಲ ಆರೋಗ್ಯ ಸಮಸ್ಯೆ ಇತ್ತು ಎಂದು ಕಂಗಾಲಾಗಿರುವವರಿಗೆ ಆ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ.

Related Articles

Comments (0)

Leave a Comment