ಶಿಮ್ಲಾ ಆಸ್ಪತ್ರೆಯಲ್ಲಿ ಪತ್ತೆಯಾದ ಮಹಿಳೆಗೆ ನೆರವು: ಸಿಎಂ ಭರವಸೆ

ಬೆಂಗಳೂರು: ಶಿಮ್ಲಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೈಸೂರು ಮೂಲದ ಮಹಿಳೆಯನ್ನು ಇಂದು ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಬೆಂಗಳೂರಿಗೆ ವಾಪಸ್ ಕರೆತಂದಿದ್ದಾರೆ. ಆ ಮಹಿಳೆಗೆ ಉತ್ತಮ ರೀತಿಯಲ್ಲಿ ಬದುಕಲು ಅಗತ್ಯ ನೆರವು ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.

ರಾಜ್ಯಕ್ಕೆ ವಾಪಸ್ಸಾಗಿರುವ ಮಹಿಳೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಮಹಿಳೆ ಚಿಕಿತ್ಸೆಗೆ ಹಾಗೂ ಉತ್ತಮ ರೀತಿಯಲ್ಲಿ ಬದುಕಲು ಅಗತ್ಯ ನೆರವು ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ತಮ್ಮ ಮನೆ ಬಿದ್ದು ಹೋಗಿದ್ದು, ಮನೆ ಕಟ್ಟಿಸಿಕೊಡುವಂತೆ ಹಾಗೂ ತನ್ನ ಪತಿಯನ್ನು ಹುಡುಕಿಕೊಡುವಂತೆ ಮಹಿಳೆಯು ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ಕುರಿತು ಮೈಸೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಮಹಿಳೆಯನ್ನು ವಾಪಸ್ ಕರೆತರುವಲ್ಲಿ ಶ್ರಮಿಸಿದ ಅಧಿಕಾರಿಗಳ ತಂಡದಲ್ಲಿದ್ದ ಆರೋಗ್ಯ ಇಲಾಖೆ ಉಪನಿರ್ದೇಶಕರಾದ ಡಾ. ರಜನಿ, ಮೈಸೂರು ಜಿಲ್ಲೆಯ ಮಾನಸಿಕ ಆರೋಗ್ಯ ಅಧಿಕಾರಿ ಡಾ. ಮಂಜುಪ್ರಸಾದ್,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೇ ಅಧಿಕಾರಿ ಮಂಜುಳಾ ಹಾಗೂ ಮಹಿಳಾ ಪೊಲೀಸ್ ನಗೀನಾ ಅವರನ್ನು ಅಭಿನಂದಿಸಿದರು.

ಮಹಿಳೆಗೆ ಸದ್ಯ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ನೀಡಿ ಚಿಕಿತ್ಸೆ ನೀಡಲಾಗುವುದು. ನಂತರ ಅವರ ಮನೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಜೊತೆಗೆ ಮಹಿಳೆಯನ್ನು ಹಾಗೂ ಅಧಿಕಾರಿಗಳ ತಂಡವನ್ನು ಆಹ್ವಾನಿಸಿ ಸತ್ಕರಿಸಿದ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹಾಗೂ ಅವರ ಕನ್ನಡತಿ ಪತ್ನಿ ಸಾಧನಾ ಠಾಕೂರ್ ಅವರಿಗೆ ಕ್ರತಜ್ಞತೆ ಸಲ್ಲಿಸಿದರು.

Related Articles

Comments (0)

Leave a Comment