ಲಿಂಗತತ್ತ್ವವನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಂಡಾಗಲೇ ವೀರಶೈವ ಧರ್ಮ ಮುಂದಿನ ಪೀಳಿಗೆಗೂ ದೃಢವಾಗಿ ಸಾಗುತ್ತದೆ: ಕಾಶಿ ಜಗದ್ಗುರುಗಳು
- by Suddi Team
- December 29, 2025
- 15 Views
ಶಿವಮೊಗ್ಗ: ಮಕ್ಕಳು ಮತ್ತು ಯುವ ಪೀಳಿಗೆಗೆ ವೀರಶೈವ ಲಿಂಗಾಯತ ಪರಂಪರೆ, ಧಾರ್ಮಿಕ ವಿಧಿ–ವಿಧಾನಗಳು, ಇಷ್ಟಲಿಂಗ ಪೂಜೆಯ ಮಹತ್ವವನ್ನು ತಿಳಿಸುವ ಹೊಣೆ ಪ್ರತಿಯೊಬ್ಬ ವೀರಶೈವ ಲಿಂಗಾಯತನ ಮೇಲಿದೆ. “ಲಿಂಗತತ್ತ್ವವನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಂಡಾಗಲೇ ವೀರಶೈವ ಧರ್ಮ ಮುಂದಿನ ಪೀಳಿಗೆಗೂ ದೃಢವಾಗಿ ಸಾಗುತ್ತದೆ ಎಂದು ಕಾಶಿ ಜ್ಞಾನ ಸಿಂಹಾಸನಾಧೀಶ್ವರರಾದ ಶ್ರೀ ಶ್ರೀ ಶ್ರೀ 1008 ಜಗದ್ಗುರು ವಿದ್ಯಾವಾಚಸ್ಪತಿ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘ ಹಾಗೂ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಲಿಂಗತತ್ವದರ್ಶನ’ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಎರಡನೇ ದಿನದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು,ವೀರಶೈವ ಲಿಂಗಾಯತ ಧರ್ಮದಲ್ಲಿ ಪ್ರತಿಯೊಬ್ಬರೂ ಲಿಂಗವನ್ನು ಧರಿಸಬೇಕು, ಕನಿಷ್ಠ ದಿನಕ್ಕೆ ಒಂದು ಬಾರಿ ಇಷ್ಟಲಿಂಗ ಪೂಜೆ ಮಾಡಬೇಕು.ಲಿಂಗ ಧಾರಣೆ ಕೇವಲ ದೇಹದ ಮೇಲಿನ ಆಚರಣೆ ಮಾತ್ರವಲ್ಲ, ಅದು ಆತ್ಮಜ್ಞಾನಕ್ಕೆ ದಾರಿ ಮಾಡಿಕೊಡುವ ಮಹತ್ವದ ಪ್ರಕ್ರಿಯೆ,ಲಿಂಗ ಧಾರಣೆ ಕೇವಲ ಕೊರಳಿಗೆ ಕಟ್ಟಿಕೊಳ್ಳುವ ಕ್ರಿಯೆಯಲ್ಲ. ಅದು ದೇವರನ್ನು ಸದಾ ಸ್ಮರಿಸುವ ಸಂಕೇತ. ಲಿಂಗ ಧರಿಸಿಕೊಂಡು ದಿನನಿತ್ಯ ಪೂಜೆ ಮಾಡದೇ ಇದ್ದರೆ ಅದು ಧರ್ಮದ ಆತ್ಮವನ್ನೇ ಕಳೆದುಕೊಳ್ಳುವಂತೆ ಆಗುತ್ತದೆ. “ಮನುಷ್ಯ ತಿಳಿದು ತಿಳಿಯದೆ ಅನೇಕ ತಪ್ಪುಗಳನ್ನು ಮಾಡುತ್ತಾನೆ. ಆದರೆ ದೇವರು ಕೊರಳಲ್ಲಿ ಇದ್ದರೆ, ಹಣೆಯಲ್ಲಿ ಭಸ್ಮ ಇದ್ದರೆ, ಮನಸ್ಸಿನಲ್ಲಿ ಭಯಕ್ಕೆ ಜಾಗವಿರುವುದಿಲ್ಲ ಎಂದು ಹೇಳಿದರು.
ಹಸಿದವನ ಹೊಟ್ಟೆಯ ಮೇಲೆ ತಿಂಡಿಗಳನ್ನು ಗಂಟು ಮಾಡಿ ಕಟ್ಟಿದರೆ ಹಸಿವು ಹೋಗುವುದಿಲ್ಲ. ಹಾಗೆಯೇ ದೇಹದ ಮೇಲೆ ಲಿಂಗವನ್ನು ಧರಿಸಿದರೆ ಮಾತ್ರ ಭಕ್ತಿ ಬರುತ್ತದೆ ಎಂದು ಭ್ರಮಿಸಬಾರದು. ಲಿಂಗದ ಹಿಂದೆ ಅಡಗಿರುವ ತತ್ತ್ವ, ಅದರ ಮಹತ್ವ ಮತ್ತು ಲಿಂಗ ನೀಡಿದ ಗುರುವಿನ ಕುರಿತು ಗೌರವ ಇದ್ದಾಗ ಮಾತ್ರ ನಿಜವಾದ ಭಕ್ತಿ ಬೆಳೆಯುತ್ತದೆ. ಲಿಂಗ ಪೂಜೆಯೇ ವೀರಶೈವ ಧರ್ಮದ ಕೇಂದ್ರಬಿಂದು. “ಲಿಂಗ ಪೂಜೆಗಿಂತ ಶ್ರೇಷ್ಠವಾದ ಪೂಜೆ ಮತ್ತೊಂದು ಇಲ್ಲ. ಲಿಂಗ ಪೂಜೆ ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಸದಾ ಲಿಂಗವನ್ನು ಕೊರಳಲ್ಲಿ ಧರಿಸಿಕೊಂಡು ಪೂಜೆ ಮಾಡುವ ವೀರಶೈವ ಲಿಂಗಾಯತರು ಅತ್ಯಂತ ಭಾಗ್ಯಶಾಲಿಗಳು ಎಂದು ಹೇಳಿದರು.
ಸಿದ್ಧಾಂತ ಶಿಖಾಮಣಿಯಲ್ಲಿ ಹೇಳಿರುವ ಸಂಪತ್ತಿನ ತತ್ತ್ವವನ್ನು ವಿವರಿಸಿದ ಜಗದ್ಗುರುಗಳು, “ವೀರಶೈವರು ಮೂರು ವಿಧದ ಸಂಪತ್ತುಗಳನ್ನು ಹೊಂದಿರುವವರು. ಆದರೆ ಅವು ಹೊಲ–ಮನೆ, ಗದ್ದೆ, ಬಂಗಾರ, ಹಣವಲ್ಲ” ಎಂದು ತಿಳಿಸಿದರು. ಈ ಜಗತ್ತಿನ ಎಲ್ಲ ವಸ್ತುಗಳು ದೇವರ ಸೃಷ್ಟಿಯೇ ಆಗಿರುವುದರಿಂದ ಆತ್ಮಿಕವಾಗಿ ಅವು ಎಲ್ಲರಿಗೂ ಸೇರಿವೆ. ಆದರೆ ಭೌತಿಕವಾಗಿ ಯಾವುದೂ ನಮ್ಮದೇ ಅಲ್ಲ. ಸತ್ತ ಮೇಲೆ ನಮ್ಮ ದೇಹವೂ ನಮ್ಮ ಜೊತೆ ಬರುವುದಿಲ್ಲ. ಹೀಗಿದ್ದರೂ ಹೊನ್ನು–ಹೆಣ್ಣು–ಮಣ್ಣುಗಳನ್ನು ಸಂಪತ್ತು ಎಂದು ಭ್ರಮಿಸುವುದು ಮಾನವನ ದೊಡ್ಡ ಅಜ್ಞಾನ ಎಂದು ಹೇಳಿದರು.
ಮನದ ಮುಂದಣ ಆಸೆಯೇ ಮಾಯೆ ಎಂದು ಅಲ್ಲಮಪ್ರಭುಗಳು ಹೇಳಿದ್ದಾರೆ. ಈ ಆಸೆಯನ್ನು ಮೀರಿಸಿ ಜ್ಞಾನವನ್ನು ಅರಿತವನೇ ನಿಜವಾದ ಶ್ರೀಮಂತ. ಈ ಜ್ಞಾನವೇ ದಿವ್ಯಜ್ಞಾನರತ್ನ. ಅದನ್ನು ಕಾಪಾಡಿಕೊಂಡು ಅನುಭಾವದ ಲೋಕದಲ್ಲಿ ನಡೆಯುವವರು ಎಲ್ಲರಿಗಿಂತ ಶ್ರೀಮಂತರು ಎಂದು ಜಗದ್ಗುರುಗಳು ಹೇಳಿದರು.
ಗುರು–ಲಿಂಗ–ಜಂಗಮ: ವೀರಶೈವ ಲಿಂಗಾಯತರ ನಿಜವಾದ ಸಂಪತ್ತು
ವೀರಶೈವ ಲಿಂಗಾಯತ ಧರ್ಮದಲ್ಲಿ ಮೂರು ಮಹಾಸಂಪತ್ತುಗಳಿವೆ ಎಂದು ತಿಳಿಸಿದ ಜಗದ್ಗುರುಗಳು, “ಗುರು, ಲಿಂಗ, ಜಂಗಮ – ಇವೇ ನಮ್ಮ ಸಂಪತ್ತುಗಳು. ಇವುಗಳನ್ನು ಯಾರು ಗೌರವಿಸುತ್ತಾರೋ, ಪಾಲಿಸುತ್ತಾರೋ, ತೃಪ್ತಿಪಡಿಸುತ್ತಾರೋ ಅವರೇ ನಿಜವಾದ ಶ್ರೀಮಂತರು” ಎಂದು ಹೇಳಿದರು.
ಹನುಮಂತ ಮತ್ತು ರಾಮನ ಸಂಭಾಷಣೆಯನ್ನು ಉದಾಹರಿಸಿದ ಅವರು, “ದೇವರನ್ನು ಮರೆಯುವುದೇ ವಿಪತ್ತು, ದೇವರನ್ನು ಸ್ಮರಿಸುವುದೇ ಸಂಪತ್ತು ಎಂದು ಹನುಮಂತನು ಹೇಳುತ್ತಾನೆ. ವೀರಶೈವ ಲಿಂಗಾಯತರಿಗೆ ಮನೆ ಇಲ್ಲದಿರಬಹುದು, ಅನ್ನ ಇಲ್ಲದಿರಬಹುದು, ಬಟ್ಟೆ ಇಲ್ಲದಿರಬಹುದು. ಆದರೆ ಕೊರಳಲ್ಲಿ ಲಿಂಗ ಇದ್ದರೆ, ಗುರುವಿನಲ್ಲಿ ಭಕ್ತಿ ಇದ್ದರೆ, ಜಂಗಮರಿಗೆ ಗೌರವ ಇದ್ದರೆ ಅವರಷ್ಟು ಶ್ರೀಮಂತರು ಯಾರು ಇಲ್ಲ” ಎಂದು ಹೇಳಿದರು.
ಇಷ್ಟಲಿಂಗವನ್ನು ಬ್ಯಾಂಕ್ ಲಾಕರ್ನಲ್ಲಿ ಇಡುವ ಪ್ರವೃತ್ತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಗದ್ಗುರುಗಳು, “ಲಿಂಗವನ್ನು ಬಂಗಾರದಲ್ಲಿ ಮಾಡಿಸಬೇಕು ಎಂದು ಎಲ್ಲಿಯೂ ಹೇಳಿಲ್ಲ. ಲಿಂಗವನ್ನು ಸದಾ ಧರಿಸಬೇಕು, ಪ್ರತಿದಿನ ಪೂಜೆ ಮಾಡಬೇಕು. ಲಾಕರ್ನಲ್ಲಿ ಇಡುವ ಲಿಂಗದಿಂದ ಆತ್ಮೋನ್ನತಿ ಸಾಧ್ಯವಿಲ್ಲ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹೊನ್ನಾಳಿ ಹಿರೇಕಲ್ಮಠದ ಶ್ರೀಗಳು, ಬಿಳಿಕಿ ಮಠದ ರಾಚೋಟೇಶ್ವರ ಶ್ರೀಗಳು ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.


Comments (0)