ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆಗೆ ಗೆಜೆಟ್ ನೋಟಿಫಿಕೇಷನ್: ರಾಜ್ಯದ ಒಪ್ಪಿಗೆ ಇಲ್ಲವೆಂದ ಹೆಚ್ಡಿಕೆ

ದೆಹಲಿ/ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ನಿರ್ವಹಣಾ ಪ್ರಾಧಿಕಾರ ರಚನೆಗೆ ಕೇಂದ್ರ ಸರ್ಕಾರ ಹೊರಡಿಸಿರುವ ಗೆಜೆಟ್ ನೋಟಿಫಿಕೇಷನ್ ಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ,ನೋಟಿಫಿಕೇಷನ್ ನಲ್ಲಿನ ನ್ಯೂನತೆಯನ್ನು ಸರಿಪಡಿಸಬೇಕು ಎನ್ನುವ ನಮ್ಮ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟು ಪ್ರಧಾನಿ ಮೋದಿ‌ ಜೊತೆ ಚರ್ಚೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಭೇಟಿ ಮಾಡಿದರು. ಸಮ್ಮಿಶ್ರ ಸರ್ಕಾರ ಮುನ್ನಡೆಸುವ ಸವಾಲುಗಳು,ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿಎಂ,ಇದೊಂದು ಸೌಹಾರ್ದಯುತ ಭೇಟಿಯಷ್ಟೆ.ಸಮ್ಮಿಶ್ರ ಸರ್ಕಾರದಲ್ಲಿ ಮುಂದೆ ಹೇಗೆ ಒಮ್ಮತದಿಂದ‌ ಹೋಗಬೇಕು,ರಾಜ್ಯದ ಅಭಿವೃದ್ಧಿಗೆ ಅವರ ಕಲ್ಪನೆಗಳೇನು?ಆ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದೇವೆ.ಸುಭದ್ರ ಸರ್ಕಾರ ನೀಡುವುದು,ರಾಜ್ಯದ ಅಭಿವೃದ್ಧಿಗೆ ಪೂರಕ ಸಹಕಾರ ನೀಡಲು ಮನವಿ ಮಾಡಿದ್ದು ರಾಹುಲ್ ಗಾಂಧಿ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದರು.

ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿಲ್ಲ, ಅದು ಅವರ ಪಕ್ಷದಲ್ಲಿ ಅವರ ಶಾಸಕರ ಜೊತೆ ಆ ಪಕ್ಷದ ನಾಯಕರೇ ಚರ್ಚೆ ಮಾಡಲಿದ್ದಾರೆ. ಸಮಸ್ಯೆಗಳಿಗೆ ಅವರೇ ಕುಳಿತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂದರು.

ಇಂದಿನ ಪ್ರಧಾನಿ ಭೇಟಿಯ ಉದ್ದೇಶ ಕಾವೇರಿ ಸಮಸ್ಯೆ ಸಂಬಂಧ ಚರ್ಚೆ ನಡೆಸುವುದೇ ಆಗಿದೆ.ಕಾವೇರಿ ನಿರ್ವಹಣಾ ಪ್ರಾಧಿಕಾರ ರಚಿಸಲು ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ.ಪ್ರತಿ 10 ದಿನಕ್ಕೆ ಒಮ್ಮೆ ನಮ್ಮ ಜಲಾಶಯದ ನೀರನ್ನು ಪರಿಶೀಲಿಸಿ ಪ್ರತು ತಿಂಗಳು ಜಲಾಶಯದಿಂದ ನೀರು ಬಿಡುವ ನಿರ್ಧಾರ ಅಧಿಕಾರ ಸಮಿತಿಗೆ ನೀಡಿರುವುದು ಅವೈಜ್ಞಾನಿಕವಾಗಿದೆ.ಅದು ಸರಿಯಲ್ಲ,ಯಾವ ಬೆಳೆ ಬೆಳೆಯಬೇಕು ಎಂದು ಪ್ರಾಧಿಕಾರ ನಿರ್ಧಾರಮಾಡಿದರೆ ಹೇಗೆ? ಇದು ನಮ್ಮ‌ ರೈತರಿಗೆ ಮಾರಕ, ಅಲ್ಲದೆ ನಮ್ಮಿಂದ ನೀರು ಪಡೆದ ನಂತರ ಅಲ್ಲಿ ಹೆಚ್ಚಿನ ಮಳೆಯಾಗಿ ಅವರ ಡ್ಯಾಂ ತುಂಬಿದರೆ ಆ ನೀರು ಸಮುದ್ರಕ್ಕೆ ಹೋಗಲಿದೆ.ಅದು ಅವೈಜ್ಞಾನಿಕ ಹಾಗಾಗಿ ಯಾವ ಸಮಯಕ್ಕೆ ನೀರ ಬಿಡಬೇಕು ಎಂದು ನಿರ್ಧರಿಸುವ ಅಧಿಕಾರ ನಮಗೂ ಬೇಕು‌ ಎಂದರು.

ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ‌ ಇದ್ದೇವೆ, ಅಂತಾರಾಜ್ಯ ವಿವಾದ ಪರಿಹಾರಕ್ಕೆ ಸುಪ್ರೀಂ ಕೋರ್ಟ್ ಕೈಗೊಳ್ಳುವ ನಿರ್ಧಾರ ಅಂತಿಮವಲ್ಲ,ಪಾರ್ಲಿಮೆಂಟ್ ಬೋರ್ಡ್ ಅಂತಿಮ,ಆದರೆ ಅಲ್ಲಿ ಚರ್ಚೆಯಾಗುವ ಮುನ್ನವೇ ನೋಟಿಫಿಕೇಷನ್ ಹೊರಡಿಸಿದ್ದಾರೆ, ಅದನ್ನ ಇಂದು‌ ಕೇಂದ್ರದ ಗಮನಕ್ಕೆ‌ ತರುತ್ತೇನೆ ಎಂದರು.

Related Articles

Comments (0)

Leave a Comment