ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮಾಡಿರುವ ಖರ್ಚೆಷ್ಟು?:ಶ್ವೇತಪತ್ರ ಹೊರಡಿಸಿ

ಬೆಂಗಳೂರು: ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಎಷ್ಟು ಅನುದಾನ ನೀಡಿದ್ದೀರಿ? ಎಷ್ಟು ವೆಚ್ಚ ಮಾಡಿದ್ದೀರಿ? ಏನೇನು ಅಭಿವೃದ್ಧಿ ಕೆಲಸಗಳು ಆಗಿವೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಭಾನುವಾರ ‘ಜನರೊಂದಿಗೆ ಜನತಾದಳ’ ಎಂಬ ಹೆಸರಿನಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಕ್ಷ ಸಂಹ್ಟನೆಗಾಗಿ ಹಮ್ಮಿಕೊಳ್ಳಲಾಗಿರುವ ರಾಜ್ಯ ಪ್ರವಾಸ ಹಾಗೂ ಮಿಸ್ ಕಾಲ್ ಸದಸ್ಯತ್ವದ ಅಭಿಯಾನಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಆರೋಗ್ಯ ಆವಿಷ್ಕಾರ ಎಂದು ನಮ್ಮ ಸಿಎಂ, ಡಿಸಿಎಂ ಯಾದಗಿರಿಗೆ ಹೋಗಿದ್ದರು. ಕಲ್ಯಾಣ ಕರ್ನಾಟಕದ ಉದ್ಧಾರ ಮಾಡುತ್ತೇವೆ ಎಂದು ಉದ್ದುದ್ದ ಭಾಷಣ ಮಾಡಿದ್ದಾರೆ. ಸಂತೋಷ, ಹಾಗಾದರೆ ನಿಮ್ಮ ಪಕ್ಷದ ಆಡಳಿತಾವಧಿಯಲ್ಲಿ, ಅದೂ ಎರಡು ವರ್ಷಗಳ ಅವಧಿಯಲ್ಲಿ ಏನೇನು ಕೆಲಸ ಮಾಡಿದ್ದೀರಿ ಎಂಬುದನ್ನು ಜನರ ಮುಂದೆ ಇಡಿ ಎಂದು ಅವರು ಆಗ್ರಹಿಸಿದರು.

ದೊಡ್ಡ ದೊಡ್ಡ ಆಸ್ಪತ್ರೆ ಕಟ್ಟಡಗಳಚನ್ನು ಕಟ್ಟುವುದು ಇರಲಿ. ನಿಮ್ಮ ಯೋಗ್ಯತೆಗೆ ಮೊದಲು ಇರುವ ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಕ ಮಾಡಿ. ವೈದ್ಯರೇ ಇಲ್ಲದೆ ಕೇವಲ ಕಟ್ಟಡ ಕಟ್ಟಿ ಏನು ಪ್ರಯೋಜನ? ಕಟ್ಟಡ ಕಟ್ಟಿ ಕಮೀಷನ್‌ ಹೊಡೆಯುತ್ತೀರಿ, ಅಷ್ಟೇ ಅಲ್ಲವೇ? ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಗುರುಮಿಟ್ಕಲ್ ಜನರು ಮಲ್ಲಿಕಾರ್ಜುನ ಖರ್ಗೆಯವರನ್ನು ಎಷ್ಟು ವರ್ಷ ಶಾಸಕರನ್ನಾಗಿ ಮಾಡಿದ್ದರು? ಎಷ್ಟು ವರ್ಷ ಅವರು ಮಂತ್ರಿಯಾಗಿದ್ದರು? ಎಷ್ಟು ವರ್ಷ ಪ್ರತಿಪಕ್ಷ ನಾಯಕರಾಗಿದ್ದರು? ಕಲಬುರಗಿಯಿಂದ ಎಷ್ಟು ಅವಧಿಗೆ ಲೋಕಸಭೆ ಸದಸ್ಯರಾದರು? ಈಗ ರಾಜ್ಯಸಭೆ ಪ್ರತಿಪಕ್ಷ ನಾಯಕರು.. ಆದರೂ ಕಲ್ಯಾಣ ಕರ್ನಾಟಕ ಇನ್ನೂ ಅಭಿವೃದ್ಧಿ ಆಗಿಲ್ಲ ಯಾಕೆ? ಇದುವರೆಗೆ ಈ ಭಾಗಕ್ಕೆ ಹಂಚಿಕೆಯಾದ ಅನುದಾನ ಎಲ್ಲಿಗೆ ಹೋಯಿತು? ಆ ದುಡ್ಡು ಯಾರ ಪಾಲಾಯಿತು? ಎಂದು ಅವರು ಅತ್ಯಂತ ತೀಕ್ಷ್ಣವಾಗಿ ಪ್ರಶ್ನಿಸಿದರು.

ಗುರುಮಿಟ್ಕಲ್‌ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಎಷ್ಟು ವರ್ಷ ಶಾಸಕರಾಗಿದ್ದರು ಎನ್ನುವುದು ಎಲ್ಲರೂ ಬಲ್ಲರು. ಹೋಗಲಿ, ಆ ಕ್ಷೇತ್ರಕ್ಕೆ ಏನು ಮಾಡಿದ್ದೀರಿ? ಇವತ್ತಿಗೂ ಆ ಕ್ಷೇತ್ರದಲ್ಲಿ ಸರಿಯಾದ ಮೂಲಸೌಕರ್ಯ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ. ಕಲ್ಯಾಣ ಕರ್ನಾಟಕವನ್ನು ಬೆಂಗಳೂರು ಮಾಡಬೇಕಂತೆ! ನೀವು ಬೇಕಾದರೆ ಬೆಂಗಳೂರನ್ನು ಸಿಂಗಾಪುರ ಮಾಡಿಕೊಳ್ಳಿ. ಆದರೆ, ಕಲ್ಯಾಣ ಕರ್ನಾಟಕವನ್ನು ಬೆಂಗಳೂರು, ಮೈಸೂರಿನಂತೆ ಅಭಿವೃದ್ಧಿ ಮಾಡಿ ಎಂದು ಖರ್ಗೆ ಅವರು ಹೇಳಿದ್ದಾರೆ. ಹಾಗಾದರೆ ಇಷ್ಟು ಸುದೀರ್ಘ ಕಾಲ ನೀವು ಮಾಡಿದ್ದೇನು? ಇಷ್ಟೂ ವರ್ಷ ಬಂದ ಹಣವೆಲ್ಲ ಎಲ್ಲಿ ಹೋಯಿತು? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ಮೊನ್ನೆ ಮೊನ್ನೆ ನಾವೆಲ್ಲಾ ನೋಡಿದೆವಲ್ಲ, ಮಳೆ ಬಂದಾಗ ಬೆಂಗಳೂರು ಎಂಬ ಸಿಂಗಾಪುರದ ಕಥೆ ಏನಾಯಿತು ಎಂದು? ಸಾಯಿ ಬಡಾವಣೆಯಲ್ಲಿಯೇ ಸಿಂಗಾಪುರ ಕಣ್ಣಿಗೆ ಕಂಡಿತಲ್ಲವೇ? ನಿನ್ನೆ ಯಾದಗಿರಿಯಲ್ಲಿ ಡಿಸಿಎಂ ಅವರ ವೀರಾವೇಷದ ಭಾಷಣ ನೋಡಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡುತ್ತಾರಂತೆ. ಅಪ್ಪಾ.. ನೀನು ಬೆಂಗಳೂರು ಉಸ್ತುವಾರಿ ಮಂತ್ರಿ. ಇಲ್ಲಿನ ನಿನ್ನ ಸಿಂಗಾಪುರ ಮಳೆ ಬಂದರೆ ಕೊಚ್ಚಿ ಹೋಗುತ್ತಿದೆ. ‌ಮೊದಲು ಇಲ್ಲಿ ಅಭಿವೃದ್ಧಿ ಮಾಡು. ಆಮೇಲೆ ಮಿಕ್ಕಿದ್ದು ಎಂದು ಅವರು ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ, ಡಿಕೆಶಿಗೆ ಟಾಂಗ್ ಕೊಟ್ಟರು.

ಕಾಂಗ್ರೆಸ್‌ ಪಕ್ಷದ ಆಡಳಿತ ಹೇಗಿದೆ ಎನ್ನುವುದನ್ನು ನೋಡುತ್ತಿದ್ದೇವೆ. ಕಳೆದು ಎರಡು ವರ್ಷಗಳಲ್ಲಿ ಕೆಪಿಎಸ್ಸಿ ಎಷ್ಟು ನೇಮಕಾತಿಗಳನ್ನು ಮಾಡಿದೆ? ಅಲ್ಲಿ ಏನೆಲ್ಲಾ ಅವಾಂತರಗಳು ನಡೆದಿವೆ. ಅದನ್ನು ತೊಳೆಯುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಕೊಳೆಯೇ ಹೋಗಿಲ್ಲವಲ್ಲ. ಬರೀ ಕಸವೇ ತುಂಬಿಕೊಂಡಿದೆ ಎಂದು ಅವರು ಕುಹಕವಾಡಿದರು.

ಸ್ಟೇಡಿಯಂ ಕಾಲ್ತುಳಿತದಲ್ಲಿ ನಿಮ್ಮ ಆಡಳಿತ ಏನೆಂದು ಇಡೀ ರಾಜ್ಯದ ಜನರು ನೋಡಿದರು. ಏನು ಮಾಡಿದಿರಿ? ನಿಮ್ಮ ತಿಕ್ಕಾಟದಿಂದ ಮುಗ್ಧ ಜನರು ಜೀವ ಕಳೆದುಕೊಂಡರು. ನೀವು ವಿಧಾನಸೌಧದ ಮೆಟ್ಟಲುಗಳಿಗೆ ಮಾತ್ರ ನೀವು ಮುಖ್ಯಮಂತ್ರಿ ಅಂತೆ. ಆ ಸ್ಥಿತಿಗೆ ಬಂದು ಮುಟ್ಟಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವರು; ಗೃಹಲಕ್ಷ್ಮೀ ಯೋಜನೆ ಮಾಡಿದ್ದೀರಿ, ಎರಡು ಸಾವಿರ ಕೊಡ್ತಾ ಇದೀರಿ. ನಿಮ್ಮ ಹಾಗೆ ನಾವೂ ಟ್ಯಾಕ್ಸ್ ಹಾಕಿದರೆ ತಿಂಗಳಿಗೆ ನಾನು ಐದು ಸಾವಿರ ರೂಪಾಯಿ ಕೊಡುತ್ತೇನೆ. ಇದನ್ನೆಲ್ಲಾ ಆಡಳಿತ ಎನ್ನಲು ಸಾಧ್ಯವೇ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಜಾತಿಗಣತಿ ವರದಿ ಸ್ವೀಕಾರ ಮಾಡುವ ವಿಚಾರದಲ್ಲಿ ಕುಮಾರಸ್ವಾಮಿ ಅಂದಿನ ಸಚಿವ ಪುಟ್ಟರಂಗಶೆಟ್ಟಿಯನ್ನು ಹೆದರಿಸಿದರು ಎಂದು ಮುಖ್ಯಮಂತ್ರಿ ಸುಳ್ಳು ಹೇಳಿದ್ದಾರೆ. ನೀವು ಅಧಿಕಾರಕ್ಕೆ ಬಂದು ಎರಡು ವರ್ಷ ಆಯಿತಲ್ಲವೇ? ಜಾತಿ ಗಣತಿ ವರದಿಯನ್ನು ಅಂಗೀಕಾರ ಮಾಡಬೇಡಿ ಎಂದು ನಿಮ್ಮನ್ನು ಯಾರು ಹಿಡಿದು ಕೂತಿದ್ದಾರೆ? ಹಿಂದುಳಿದ ವರ್ಗಗಳ ಚಾಂಪಿಯನ್ ಅಲ್ವೇ ನೀವು? ಯಾಕೆ ವರದಿ ಜಾರಿ ಮಾಡಲಿಲ್ಲ. ಕಾಂತರಾಜು ಫೋಟೋ ಇಟ್ಟುಕೊಂಡು ಪೂಜೆ ಮಾಡ್ತಾ ಇದ್ರಾ ಎರಡು ವರ್ಷದಿಂದ? ನಿಮ್ಮ ಎರಡು ಸಾವಿರದಿಂದ ಜನ ಬದುಕ್ತಾ ಇಲ್ಲ ಸಿದ್ದರಾಮಯ್ಯನವರೇ.. ಈ ಸಂದರ್ಭದಲ್ಲಿ ನಾನು ವಿಧಾನಸೌಧದಲ್ಲಿ ಇರಬೇಕಿತ್ತು. ನಿಮಗೆ ತಕ್ಕ ಪಾಠ ಕಲಿಸುತ್ತಿದ್ದೆ. ಎಂತೆಂತಾ ವಿಚಾರಗಳಿವೆ, ಮಾತಾಡಲಿಕ್ಕೆ ಮತ್ತು ಚರ್ಚೆ ಮಾಡಲು ಎಷ್ಟು ವಿಚಾರಗಳು ಇವೆ. ಕಾವೇರಿ ಆರತಿಗೆ ನೂರು ಕೋಟಿ ಖರ್ಚು ಮಾಡುತ್ತಾರಂತೆ!  ನಿಮ್ಮ ಮುಖಕ್ಕೆ ಮಂಗಳಾರತಿ ಮಾಡಿಕೊಳ್ಳಲು ನೂರು ಕೋಟಿ ಹಣವಾ? ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.

ನಾನು ಗಟ್ಟಿಮುಟ್ಟಾಗಿದ್ದೇನೆ ಎಂದ ಹೆಚ್ಡಿಕೆ:

ಇದೇ ಮೊದಲು ಬಾರಿಗೆ ತಮ್ಮ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ನಾನು ಆರೋಗ್ಯವಾಗಿ ಗಟ್ಟಿಮುಟ್ಟಾಗಿದ್ದೇನೆ. ಏನೂ ಚಿಂತೆ ಬೇಡ. ಕಾಂಗ್ರೆಸ್ಸಿನವರು ಕುಮಾರಸ್ವಾಮಿ ಆರೋಗ್ಯ ಕೆಟ್ಟಿದೆ, ನಮ್ಮ ಪಕ್ಷಕ್ಕೆ ಬನ್ನಿ ಎಂದು ಶಾಸಕರನ್ನು ಕರೆಯುತ್ತಿದ್ದಾರೆ. ನೀವು ಏನೂ ಚಿಂತೆ ಮಾಡಬೇಡಿ. ನಾನು ಆರೋಗ್ಯವಾಗಿದ್ದೇನೆ ಎಂದರು.

ನಾನು ಇನ್ನೂ ನಿಮ್ಮ ಜೊತೆ ಹದಿನೈದು ಇಪ್ಪತ್ತು ವರ್ಷ ಕಾಲ ಇರುತ್ತೇನೆ. ಜನತಾದಳವೂ ಇರುತ್ತದೆ. ನಮ್ಮ ಪಕ್ಷಕ್ಕೆ ಶಕ್ತಿ ಇದೆ. ಜೆಡಿಎಸ್ ಬಿಟ್ಟು ಬನ್ನಿ ಎನ್ನುವವರಿಗೆ ಈ ಸಭೆಯ ಮೂಲಕ ಉತ್ತರ ಕೊಟ್ಟಿದ್ದೀರಿ. ಧೈರ್ಯದಿಂದ ಹೊರಡಿ, ಈ ಸಲ ಜನತಾದಳ, ಬಿಜೆಪಿ ಮೈತ್ರಿ ಸರಕಾರ ಬರಲಿದೆ. ಜೆಡಿಎಸ್- ಬಿಜೆಪಿ ಮೈತ್ರಿ ಬಗ್ಗೆ ಯಾವುದೇ ಅಪಪ್ರಚಾರಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಕೈಲಾಗದವರು ಅಪಪ್ರಚಾರ ಮಾಡುತ್ತಾರೆ. ಅವರಿಗೆಲ್ಲ ದಿಟ್ಟ ಉತ್ತರ ಕೊಡೋಣ. ನಿಮ್ಮ ಪಾಡಿಗೆ ನೀವು ಪಕ್ಷದ ಕೆಲಸ ಮಾಡಿ ಎಂದು ಕುಮಾರಸ್ವಾಮಿ ಅವರು ಕಾರ್ಯಮರ್ತರಿಗೆ ಧೈರ್ಯ ಹೇಳಿದರು.

ಜೆಡಿಎಸ್ ಮುಗಿದುಹೋಗಿದೆ, ಬನ್ನಿ ನಮ್ಮ ಜೊತೆ ಎಂದು ಸಿಎಂ ಹೇಳುತ್ತಾರಲ್ಲವೇ? ಇಲ್ಲಿ ಜನ ಸೇರಿರುವುದು ನೋಡಿದರೆ ಅವರಿಗೆ ಉತ್ತರ ಸಿಗುತ್ತದೆ ಎಂದು ಭಾವಿಸಿದ್ದೇನೆ. ಮುಂದಿನ ದಿನಗಳಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ ಸರಕಾರ ಅಧಿಕಾರಕ್ಕೆ ಬರುತ್ತದೆ. ಮೈತ್ರಿಯಲ್ಲಿ ಗೊಂದಲ ಇಲ್ಲ,‌ ಸೀಟ್ ತರೋದು ನನ್ನ ಜವಾಬ್ದಾರಿ ಎಂದು ಕೇಂದ್ರ ಸಚಿವರು ಹೇಳಿದರು.

Related Articles

Comments (0)

Leave a Comment