ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ; ಡಿಸಿಎಂ ವಿಷಾದ, ಮೃತಪಟ್ಟವರಿಗೆ ಸಂತಾಪ

ಬೆಂಗಳೂರು:”ಈ ದುರ್ಘಟನೆ ಆಗಬಾರದಿತ್ತು ಆಗಿದೆ. ನಾವು ಮುಂಜಾಗೃತಾ ಕ್ರಮವಾಗಿ ಮೆರವಣಿಗೆಯನ್ನು ರದ್ದು ಮಾಡಿದ್ದೆವು. ಈ ದುರ್ಘಟನೆ ನಡೆದಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಮೃತರಿಗೆ ಸಂತಾಪ ಸೂಚಿಸುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ ತಿಳಿಸಿದ್ದಾರೆ.

ಬೌರಿಂಗ್ ಅಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.”ದುರ್ಘಟನೆ ಬಗ್ಗೆ ಪೊಲೀಸ್ ಆಯುಕ್ತರ ಜತೆ ಚರ್ಚೆ ಮಾಡಿದ್ದೇನೆ. ಲಕ್ಷಾಂತರ ಜನ ಸೇರಿದ್ದು, ಕೆಲವರು ಕ್ರೀಡಾಂಗಣದ ಗೇಟ್ ಅನ್ನು ಮುರಿಯುವ ಪ್ರಯತ್ನ ಮಾಡಲಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ 6 ಜನ ಮೃತಪಟ್ಟಿದ್ದು, 11-12 ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಜನರು ಆತಂಕಕ್ಕೆ ಒಳಗಾಗದೇ, ಶಾಂತರಾಗಿ ಸಹಕಾರ ನೀಡಬೇಕು. ಆರ್ ಸಿಬಿ ತಂಡದ ಸಂಭ್ರಮಾಚಾರಣೆಯನ್ನು 10 ನಿಮಿಷಕ್ಕೆ ಮೊಟಕುಗೊಳಿಸಲಾಗಿದೆ” ಎಂದು ತಿಳಿಸಿದರು.

“ಮೆಟ್ರೋಗಳಲ್ಲೂ ಜನದಟ್ಟಣೆ ಹೆಚ್ಚಾಗಿದೆ. ಪೊಲೀಸರು ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದರು. ಆದರೆ ಅನಿರೀಕ್ಷಿತವಾಗಿ ಜನ ಸೇರಿದ್ದಾರೆ” ಎಂದು ತಿಳಿಸಿದರು.  ವಿರೋಧ ಪಕ್ಷಗಳ ಟೀಕೆ ಬಗ್ಗೆ ಕೇಳಿದಾಗ, “ಅವರ ಆಡಳಿತ ಅವಧಿಯಲ್ಲಿದ್ದ ಪೊಲೀಸರೇ ಈಗಲೂ ಇದ್ದಾರೆ” ಎಂದು ತಿಳಿಸಿದರು.

ಮೃತರಿಗೆ ಸಂತಾಪ:

ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿರುವ ಶಿವಕುಮಾರ್ ಅವರು, “ಆರ್‌ಸಿಬಿಯ ಐಪಿಎಲ್ ಗೆಲುವಿನ ಸಂಭ್ರಮಾಚರಣೆಗೆ ಸಾಕ್ಷಿಯಾಗಬೇಕಿದ್ದ ಜನರು ದುರಂತಕ್ಕೆ ಒಳಗಾಗಿ, ಮೃತಪಟ್ಟಿರುವುದು ತೀವ್ರ ನೋವು ಮತ್ತು ಆಘಾತ ತಂದಿದೆ. ಮೃತರಿಗೆ ನನ್ನ ಸಂತಾಪಗಳು. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು.

ಅಭಿಮಾನ ಇರಲಿ, ಆದರೆ ಜೀವಕ್ಕಿಂತ ದೊಡ್ಡದಲ್ಲ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಳ್ಳುತ್ತೇನೆ” ಎಂದು ಮನವಿ ಮಾಡಿದರು.

ರಾಜ್ಯಕ್ಕೆ ಹೆಮ್ಮೆ ತಂದ ಆರ್ ಸಿಬಿ ತಂಡಕ್ಕೆ ಜನರ ಪರವಾಗಿ ಅಭಿನಂದನೆಗಳು:

ಇದಕ್ಕೂ ಮುನ್ನ ಸದಾಶಿವನಗರ ನಿವಾಸ ಹಾಗೂ ಕನಕಪುರದಲ್ಲಿ ಮಾಧ್ಯಮಗಳು, ಆರ್ ಸಿಬಿ ತಂಡ ಐಪಿಎಲ್ ಟೂರ್ನಿ ಗೆದ್ದಿರುವ ಬಗ್ಗೆ ಕೇಳಿದಾಗ, “ನಮ್ಮ ಆರ್ ಸಿಬಿ ತಂಡ ಐಪಿಎಲ್ ಟೂರ್ನಿಯನ್ನು ಗೆದ್ದಿದ್ದು, ನಮ್ಮ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ರಾಜ್ಯದ ಜನರ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಶುಭಕೋರಿದರು.

“ಕಳೆದ 18 ವರ್ಷಗಳಿಂದ ಆರ್ ಸಿಬಿ ತಂಡ ಈ ಟ್ರೋಫಿ ಗೆಲ್ಲಲು ಬಹಳಷ್ಟು ಪ್ರಯತ್ನ ಮಾಡಿದ್ದರು. ಎಷ್ಟೇ ಕಷ್ಟ ಎದುರಾದರೂ ವಿರಾಟ್ ಕೊಹ್ಲಿ ನಮ್ಮ ತಂಡವನ್ನು ಬಿಡದೇ ತಂಡದ ಕಷ್ಟ ಹಾಗೂ ಸುಖದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಇದೊಂದು ವಿಶೇಷ ಸಂದರ್ಭ” ಎಂದು ತಿಳಿಸಿದರು.

ವಿರಾಟ್ ಕೊಹ್ಲಿ ಭಾವುಕರಾದ ಬಗ್ಗೆ ಕೇಳಿದಾಗ, “ಕಣ್ಣೀರು ದುಃಖಕ್ಕೂ ಬರಿತ್ತದೆ, ಸಂತೋಷಕ್ಕೂ ಬರುತ್ತದೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ. ನಾನು ಐಪಿಎಲ್ ಅನ್ನು ನೋಡುತ್ತಾ ಬಂದಿದ್ದೇನೆ. ಫೈನಲ್ ಪಂದ್ಯ ವೀಕ್ಷಿಸಲು ನನ್ನ ಸ್ನೇಹಿತರು ವಿಮಾನ ಟಿಕೆಟ್ ಕೂಡ ಬುಕ್ ಮಾಡಿದ್ದರು. ಆದರೆ ನಾನು ಹೋಗಲು ಆಗಲಿಲ್ಲ” ಎಂದು ತಿಳಿಸಿದರು.

ಸುರಕ್ಷತೆ ದೃಷ್ಟಿಯಿಂದ ಮೆರವಣಿಗೆ ರದ್ದು:

ಸರ್ಕಾರದಿಂದ ಸನ್ಮಾನ ಕಾರ್ಯಕ್ರಮದ ಬಗ್ಗೆ ಕೇಳಿದಾಗ, “ಆರ್ ಸಿಬಿ ತಂಡದವರು ತೆರೆದ ವಾಹನದಲ್ಲಿ ಪರೇಡ್ ನಡೆಸಲು ಮನವಿ ಮಾಡಿದ್ದರು. ಆದರೆ ಕಾನೂನು ಸುವ್ಯವಸ್ಥೆ, ತಂಡದ ಆಟಗಾರರು ಹಾಗೂ ಜನರ ಸುರಕ್ಷತೆ ಹಿನ್ನೆಲೆಯಲ್ಲಿ ನಾನು ಹಾಗೂ ಸಿಎಂ ಚರ್ಚೆ ಮಾಡಿದ್ದು ಪೊಲೀಸರು ಮೆರವಣಿಗೆಗೆ ಅನುಮತಿ ನೀಡಿಲ್ಲ” ಎಂದು ತಿಳಿಸಿದರು.

Related Articles

Comments (0)

Leave a Comment