ನೀವೇನು ಶಾಶ್ವತವಾಗಿ ಅಧಿಕಾರದಲ್ಲಿರ್ತೀರಾ? ಮುಂದೆ ಎಲ್ಲವೂ ಬದಲಾಗುತ್ತೆ, ಜಿಲ್ಲೆ ಹೆಸರೂ ಬದಲಾಗುತ್ತೆ: ಕುಮಾರಸ್ವಾಮಿ
- by Suddi Team
- May 24, 2025
- 71 Views

ನವದೆಹಲಿ: ಐತಿಹಾಸಿಕ ಮಹತ್ವ ಹೊಂದಿರುವ ರಾಮನಗರ ಹೆಸರನ್ನು ಕಿತ್ತುಹಾಕಿ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ್ದಾರೆ. ಆದರೆ, ಇವರೇನು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರೆಯೇ? ಮುಂದೆ ಪರಿಸ್ಥಿತಿ ಬದಲಾಗಲಿದೆ. ಆಗ ಇವರು ಇಟ್ಟಿರುವ ಹೆಸರೂ ಬದಲಾಗಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು ಅವರು, 2007ರಲ್ಲಿ ನಾನು ತೀರ್ಮಾನ ಮಾಡುವಾಗ ವಿರೋಧ ಮಾಡಬಹುದಾಗಿತ್ತು ಆಗ ಮಾಡಲಿಲ್ಲ. ಈ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ರಾಮನಗರ ಕೊಟ್ಟಿದೆ. ಇಡೀ ಜಗತ್ತೇ ನಿಬ್ಬೆರಗಾಗುವ ವಿಧಾನಸೌಧವನ್ನು ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿದ್ದರು. ನೆಹರು ಅವರಿಗೆ ಸೆಡ್ಡು ಹೊಡೆದು ರಾಜಕೀಯ ಮಾಡಿದ್ದರು. ಅಂತಹ ಮಹನೀಯರ ಹೆಸರನ್ನಾದರೂ ಜಿಲ್ಲೆಗೆ ಇಡಬಹುದಿತ್ತು. ಅವರ ಹೆಸರು ಇಟ್ಟಿದ್ದಿದ್ದರೆ ನಾನು ಅಭಿನಂದಿಸುತ್ತಿದ್ದೆ. ಕೆಂಗಲ್ ಅವರ ಹೆಸರಿಟ್ಟರೆ ಇವರ ಭೂಮಿಗಳಿಗೆ ಬೆಲೆ ಬರುವುದಿಲ್ಲವಲ್ಲ? ಎಂದು ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.
ರಾಮನಗರ ಹೆಸರನ್ನು ತೆಗೆದುಹಾಕಿ ಬೆಂಗಳೂರು ದಕ್ಷಿಣ ಎಂದು ಹೆಸರು ಇಟ್ಟುಕೊಂಡಿರುವುದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಭೂಮಿಗಳ ಬೆಳೆಯನ್ನು ಏರಿಸುವ ಷಡ್ಯಂತ್ರದ ಭಾಗವಾಗಿದೆ. ಅವರು ಏತಕ್ಕಾಗಿ ಜಿಲ್ಲೆಯ ಹೆಸರು ಬದಲಿಸಿದ್ದಾರೆ? ಅದರ ಹಿಂದಿನ ದುರುದ್ದೇಶ ಏನಿದೆ? ಎಂಬುದು ಗೊತ್ತಿದೆ. ಇದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾವಾಗ ಅದಕ್ಕೆ ತಿರುಗಿಸಿ ಉತ್ತರ ಕೊಡಬೇಕೋ ಆಗ ಕೊಡುತ್ತೇನೆ. ಇಂತಹ ರಾಜಕಾರಣಕ್ಕೆ ನಾನು ಸೊಪ್ಪು ಹಾಕುವುದಿಲ್ಲ. ಕೇಂದ್ರ ಗೃಹ ಸಚಿವರಿಗೆ ಹೆಸರು ಬದಲಾವಣೆ ರಾಜ್ಯ ಸರ್ಕಾರ ಪ್ರಸ್ತಾಪ ಕಳಿಸಿದ್ದು, ಅದು ತಿರಸ್ಕೃತವಾಗಿದ್ದು ನನಗೆ ಗೊತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇವರು ಮಾಡಿದ್ದು ಮುಂದೆ ಬದಲಾಗಲಿದೆ:
ಇವರೇನು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರೆಯೇ? ಇವರು ಮಾಡಿದ್ದು ಮುಂದೆ ಬದಲಾಗಲಿದೆ. ಅದೂ ನನಗೆ ಗೊತ್ತಿದೆ. ಹೇಳಿ ಕೇಳಿ ಈ ವ್ಯಕ್ತಿ ರಿಯಲ್ ಎಸ್ಟೇಟ್ ವ್ಯಾಪಾರಿ. ಏನೆಲ್ಲ ತಂತ್ರಗಾರಿಕೆ ಹೂಡಿದರೆ ತಮ್ಮ ಜಮೀನುಗಳಿಗೆ ಬೆಲೆ ಬರುತ್ತಿದೆ ಎನ್ನವುದು ಅವರಿಗೆ ಗೊತ್ತಿದೆ. ರಾಮನಗರ ಜಿಲ್ಲೆಯಾದಾಗಲೇ ರೈತರ ಭೂಮಿಗೆ ಬೆಲೆ ಬಂದಿರಲಿಲ್ಲವೇ? ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದರು.
ನನ್ನ ಜಮೀನಿಗೆ ಬೆಲೆ ಬರುತ್ತದೆ ಎಂದು ಅವರು ಹೇಳಿದ್ದಾರೆ. ಆ ಜಮೀನನ್ನು ಕೂಡ ಕಿತ್ತುಕೊಳ್ಳಲು ಕುತಂತ್ರ ಮಾಡಿದ್ದಾರೆ ಇವರು. 40 ವರ್ಷಗಳ ಹಿಂದೆ ಖರೀದಿ ಮಾಡಿದ ಜಮೀನಿಗೆ ಎಸ್ಐಟಿ ಅಂತ ರಚನೆ ಮಾಡಿಕೊಂಡು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ನನಗೆ ಕಿರುಕುಳ ಕೊಡುತ್ತಿದ್ದಾರೆ. ಇದರ ವಿರುದ್ಧ ನಾನೂ ಕಾನೂನು ಹೋರಾಟ ಮಾಡುತ್ತಿದ್ದೇನೆ ಎಂದು ಕೇಂದ್ರ ಸಚಿವರು ಹೇಳಿದರು.
ಇವರು ನನ್ನ ವಿರುದ್ಧ ಕಿರುಕುಳ, ಕುತಂತ್ರ ಮಾಡುತ್ತಿದ್ದಾರೆ. ಹೀಗೆಯೇ ಅವರು ಮಾಡುತ್ತಿರಲಿ, ಇವರು ಲೂಟಿ ಹೊಡೆದಿರುವ ಶೇ.50ರಷ್ಟು ಸರ್ಕಾರಿ ಭೂಮಿಗಳಿವೆ. ಇವರು ಏನೆಲ್ಲಾ ಅನ್ಯಾಯ, ಅಕ್ರಮ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಶಾಂತಿನಗರದ ದಲಿತರ ಜಾಗ ನುಂಗಿದ್ದು ಯಾರು? ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ನೀಡಲಾದ ಜಾಗ ನುಂಗಿದ್ದು ಯಾರು? ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನೆ ಮಾಡಿದರು.
ದಲಿತರ ಭೂಮಿ ಕಬಳಿಸಿದವರನ್ನು ಸಿದ್ದರಾಮಯ್ಯ ಜತೆಯಲ್ಲಿ ಇಟ್ಟುಕೊಂಡಿದ್ದಾರೆ?:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವಂದ್ವ ನೀತಿ ಬಗ್ಗೆ ಕಿಡಿಕಾರಿದ ಕೇಂದ್ರ ಸಚಿವ ಕುಮಾರಸ್ವಾಮಿ, ಸಿದ್ದಾರಾಮಯ್ಯ ತಮ್ಮನ್ನು ತಾವು ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಾರೆ. ದುರಂತವೆಂದರೆ, ದಲಿತರ ಭೂಮಿ ಕಬಳಿಸಿದವರನ್ನೇ ತಮ್ಮ ಜತೆಯಲ್ಲಿ ಇಟ್ಟುಕೊಂಡಿದ್ದಾರೆ. ಈಗ ನೋಡಿದರೆ ಅವರು ಮುಖ್ಯಮಂತ್ರಿ ಆಗಬೇಕು ಎಂದು ಹೊರಟಿದ್ದಾರೆ. ಇದು ಈ ಸರ್ಕಾರದಲ್ಲಿ ನಡೆಯುತ್ತಿರುವ ದಲಿತ ವಿರೋಧಿ ನೀತಿ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
Related Articles
Thank you for your comment. It is awaiting moderation.
Comments (0)