ಮೋಜು ಮಸ್ತಿಗಾಗಿ ಅಲ್ಲ‌, ಜನರಿಗಾಗಿ ಆಯೋಜಿಸಿದ ಕಾರ್ಯಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಹೊಸಪೇಟೆ (ವಿಜಯನಗರ) : ಜನರ ಸಮಾಧಿ ಮೇಲೆ ಅಧಿಕಾರ ಅನುಭವಿಸಿದವರು ಬಿಜೆಪಿಗರೇ ಹೊರತು ಕಾಂಗ್ರೆಸ್ ಪಕ್ಷದವರಲ್ಲ. ಇದಕ್ಕೆ ಕೊರೊನಾ ಅವಧಿಯೇ‌ ಸಾಕ್ಷಿ. ನಾವು ಕಳೆದ ಎರಡು ವರ್ಷದಲ್ಲಿ ಜನರಿಗೆ ಕೊಟ್ಟ ವಾಗ್ದಾನವನ್ನು  ನಡೆಸಿಕೊಟ್ಟಿದ್ದೇವೆ. ನಮ್ಮದು ಸಾರ್ಥಕ ಎರಡು ವರ್ಷ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಈ ಎರಡು ವರ್ಷದಲ್ಲಿ ಜನರ ಸೇವೆಯನ್ನು ಮಾಡಿದ್ದೇವೆ. ಮುಂದಿನ ಮೂರು ವರ್ಷಗಳ ಕಾಲ ಮತ್ತಷ್ಟು ಸೇವೆ ಮಾಡಲಿದ್ದೇವೆ.  ಬಿಜೆಪಿಯವರ ರೀತಿ ಡೋಂಗಿ ರಾಜಕಾರಣ ಮಾಡುವ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದರು.

ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದರೂ ಕಾಂಗ್ರೆಸ್ ಪಕ್ಷದವರು ಹೊಸಪೇಟೆಯಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮೋಜು ಮಸ್ತಿಗೂ ಕಾಂಗ್ರೆಸ್ ಪಕ್ಷಕ್ಕೂ ಬಹಳಷ್ಟು ದೂರ. ಕಾಂಗ್ರೆಸ್ ಸರ್ಕಾರಕ್ಕೆ ಜನಪರ ಯೋಜನೆಗಳನ್ನು ರೂಪಿಸುವುದು, ಕಾರ್ಯಕ್ರಮಗಳನ್ನು ಕೊಡುವುದೇ ಕೆಲಸ.‌ ಆದರೆ, ಬಿಜೆಪಿಯವರಿಗೆ ಅಧಿಕಾರದ ದಾಹ, ಕುದುರೆ ವ್ಯಾಪಾರದ ಮೂಲಕ ಹಿಂಭಾಗಿಲಿನಿಂದ ಅಧಿಕಾರ ಹಿಡಿಯವುದೇ ಗುರಿ. ಇದು ಮೋಜು ಮಸ್ತಿ  ಕಾರ್ಯಕ್ರಮವಲ್ಲ. ಜನರಿಗಾಗಿ ಆಯೋಜಿಸಿದ ಕಾರ್ಯಕ್ರಮ ಎಂದು ಹೇಳಿದರು.

ಏಪ್ರಿಲ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳಿಗೆ ತಲುಪುತ್ತಿದ್ದು, ಫೆಬ್ರವರಿ ಮತ್ತು ಮಾರ್ಚ್ ಹಣ ಸ್ವಲ್ಪ  ತಡವಾಗಿದೆ. ಆ ಹಣ ಕೂಡ ಸಂದಾಯವಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Related Articles

Comments (0)

Leave a Comment