ಎರಡೂವರೆ ಲಕ್ಷ ಕೋಟಿ ಸಾಲ ಪಡೆದಿರುವುದೇ ಸಾಧನೆ: ಸರ್ಕಾರದ ವಿರುದ್ಧ ಬಸವರಾಜ ಬೊಮ್ಮಾಯಿ ವಾಗ್ದಾಳಿ

ಬೆಂಗಳೂರು: ಕರ್ನಾಟಕದ ಇತಿಹಾಸದಲ್ಲಿ ಕಳೆದ ಎರಡು ವರ್ಷ ಆರ್ಥಿಕವಾಗಿ ಕರಾಳ ದಿನಗಳಾಗಿದ್ದು, ಈ ಅವಧಿಯಲ್ಲಿ ಎರಡೂವರೆ ಲಕ್ಷ ಕೋಟಿ ಸಾಲ ಪಡೆದಿರುವುದೇ ರಾಜ್ಯ ಸರ್ಕಾರದ ಸಾಧನೆಯಾಗಿದೆ. ರಾಜ್ಯದ ಇತಿಹಾದಲ್ಲೇ ಅತಿ ಹೆಚ್ಚು ಸಾಲ ಪಡೆದ ಖ್ಯಾತಿ ಸಿಎಂ ಸಿದ್ದರಾಮಯ್ಯ ಅವರಿಗೆ ಹೊಗುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯ ಸರ್ಕಾರ ಸಂಪೂರ್ಣವಾಗಿ ಸಾಲದ ಮೇಲೆ ಅವಲಂಬನೆಯಾಗಿದೆ. ಅದರ ಜತೆಗೆ ಪೆಟ್ರೋಲ್, ಡಿಸೇಲ್, ಅಬಕಾರಿ, ಹಾಲು, ನೀರು, ಕಸ, ಸ್ಟಾಂಪ್ ಡ್ಯೂಟಿ ಎಲ್ಲದರ ಮೇಲೆ ಅತಿ ಹೆಚ್ಚು ತೆರಿಗೆ ಹಾಕಿದ ಖ್ಯಾತಿ‌ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಕಳೆದ ವರ್ಷ 40 ಸಾವಿರ ಕೋಟಿ ರೂ. ಹೆಚ್ಚುವರಿ ತೆರಿಗೆ ಹಾಕಿದ್ದರು. ಈ ವರ್ಷ 60 ಸಾವಿರ ಕೋಟಿ ರೂ.‌ ಹೊಸ ತೆರಿಗೆಯ ಭಾರವನ್ನು ಜನರ ಮೇಲೆ ಹಾಕಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ದೂರಿದ್ದಾರೆ.

ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ನೆಲಕಚ್ಚಿದೆ. ಯಾವುದೇ ನಿರಾವರಿ ಯೋಜನೆ‌, ರಾಜ್ಯ ಹೆದ್ದಾರಿ ನಿರ್ಮಾಣ, ಮನೆ ಕಟ್ಟಲು ರಾಜ್ಯ ಸರ್ಕಾರ ಹಣ ನೀಡಿಲ್ಲ. ಕೇಂದ್ರದ ಹಣಕ್ಕೆ ಸಮನಾದ ವಂತಿಗೆಯನ್ನು ಬಿಡುಗಡೆ ಮಾಡುತ್ತಿಲ್ಲ. ಗ್ಯಾರಂಟಿ ನೆಪದಲ್ಲಿ ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡುವ ಕೆಲಸ ಈ ಸರ್ಕಾರ ಮಾಡಿದೆ. ಸರ್ಕಾರ ಸಾಮಾನ್ಯ ಜನರ ಬಾಯಲ್ಲಿ ಒಂದು ಶಾಪವಾಗಿ ಪರಿಣಮಿಸಿದೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಸರ್ಕಾರ ಕರ್ನಾಟವನ್ನು ಅಭಿವೃದ್ಧಿ ಮಾಡುವುದಿರಲಿ, ಕರ್ನಾಟಕವನ್ನು ಸಾಲಗಾರ ರಾಜ್ಯವನ್ನಾಗಿ ಮಾಡಿದೆ. ಯಾವ‌ ಪುರುಷಾರ್ಥಕ್ಕಾಗಿ ಸಾಧನಾ ಸಮಾವೇಶ ಮಾಡಲಾಗುತ್ತಿದೆ ಎಂದು ಜನ ಕೇಳುತ್ತಿದ್ದಾರೆ. ಇದೊಂದು ಅಭಿವೃದ್ಧಿ ಶೂನ್ಯ ಜನವಿರೋಧಿ ಅತ್ಯಂತ ಭ್ರಷ್ಟ ಸರ್ಕಾರ ಎಂದು ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

Related Articles

Comments (0)

Leave a Comment