ಪ್ರಿಯಾಂಕ್ ಖರ್ಗೆ ಹೇಳಿಕೆ ಗೋಸುಂಬೆತನದ್ದೇ? ದ್ವಿಮುಖ ನೀತಿಯೇ?: ಎನ್. ರವಿಕುಮಾರ್
- by Suddi Team
- May 14, 2025
- 34 Views

ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆಯವರ ಹೇಳಿಕೆ ಅತ್ಯಂತ ನಾಚಿಕೆಗೇಡಿನದು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಟೀಕಿಸಿದ್ದಾರೆ. ಈ ಹೇಳಿಕೆ ಗೋಸುಂಬೆತನದ್ದೇ ಅಥವಾ ದ್ವಿಮುಖ ನೀತಿಯದೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಬಹಳ ದೊಡ್ಡ ಜ್ಞಾನಿ ಪ್ರಿಯಾಂಕ್ ಖರ್ಗೆಯವರು ಏ.22ರಿಂದ ಮೇ 12ರವರೆಗೆ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಿದ್ದರು ಎಂದು ಕೇಳಿದ್ದಾರೆ. ಅವರು ಎಲ್ಲಿದ್ದರು ಎಂಬುದು ದೇಶದ ಪ್ರತಿ ಪ್ರಜೆಗೂ ಗೊತ್ತಿದೆ. ಮೋದಿ ಏನು ಮಾಡಿದ್ದಾರೆ ಎಂದು ಒಬ್ಬ ಸಚಿವರಾಗಿ ಅವರಿಗೆ ಗೊತ್ತಿಲ್ಲದಿರುವುದು ನಾಚಿಕೆಗೇಡು ಎಂದು ಟೀಕಿಸಿದರು.
ಮೋದಿ ಮತ್ತು ನಮ್ಮ ಸೈನಿಕರು ಪೆಹಲ್ಗಾಮ್ ಘಟನೆಗೆ ಏನು ಉತ್ತರ ಕೊಟ್ಟು ಪ್ರತೀಕಾರ ತೆಗೆದುಕೊಂಡಿದ್ದಾರೆಂದು ಜಗತ್ತಿಗೇ ಗೊತ್ತಿದೆ. ಆದರೆ ಪ್ರಿಯಾಂಕ ಖರ್ಗೆ ಯವರಿಗೆ ಏಕೆ ಗೊತ್ತಿಲ್ಲ?. ಪಾಕಿಸ್ತಾನದ ಮೇಲೆ ಪ್ರತೀಕಾರ ತೀರಿಸಿಕೊಂಡದ್ದು ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ, ಬಿ.ಕೆ ಹರಿಪ್ರಸಾದ್ ರವರುಗಳಿಗೆ ಇಷ್ಟವಿರಲಿಲ್ಲವೇ ಎಂದು ಪ್ರಶ್ನಿಸಿದರು.
2004 ರಿಂದ 2014 ರವರೆಗೆ ಕಾಂಗ್ರೆಸ್ ಸರ್ಕಾರ ಇದ್ದ ಅವಧಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕರು ದೆಹಲಿ, ಜೈಪುರ, ಅಹಮದಾಬಾದ್, ಮುಂಬೈ ಸೇರಿ 25ಕ್ಕಿಂತ ಹೆಚ್ಚು ದಾಳಿ ಮಾಡಿದ್ದರು. ಆಗ ಸುಮಾರು 900 ಕ್ಕಿಂತ ಹೆಚ್ಚು ಜನ ಹತ್ಯೆಯಾದರೂ ಕಾಂಗ್ರೆಸ್ ಸರ್ಕಾರ ಯಾವ ಕ್ರಮ ಕೈಗೊಂಡಿತ್ತು?. ಪ್ರತೀಕಾರವನ್ನು ತೆಗೆದುಕೊಳ್ಳುವುದಕ್ಕೆ ಅಂದಿನ ಮನಮೋಹನ್ ಸಿಂಗ್ ಸರ್ಕಾರ ಸೂಚಿಸುತ್ತದೆ ಎಂದು ನಮ್ಮ ಸೇನೆ ಕಾಯುತ್ತಿತ್ತು. ಆದರೆ ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಮನಮೋಹನ್ ಸಿಂಗ್ ಸರ್ಕಾರ ಯಾವುದೇ ವಾಯು ದಾಳಿಯಾಗಲೀ, ಕಾರ್ಯಚರಣೆಯಾಗಲೀ ಮಾಡದಿರುವುದು ಇಡೀ ದೇಶದ ಜನರಿಗೆ ಗೊತ್ತಿದೆ. ಆ ಕಾಲದಲ್ಲಿ ಭಯೋತ್ಪಾದನೆ ಎಲ್ಲೆಂದರಲ್ಲಿ ತಾಂಡವವಾಡುತಿತ್ತು ಎಂದು ಆರೋಪಿಸಿದರು.
2014 ರಿಂದ 2025 ರವರೆಗೆ ದೇಶದಲ್ಲಿ 3 ಭಯೋತ್ಪಾದಕ ದಾಳಿಗಳು ಆಗಿವೆ. ಮೊದಲನೆಯದಾಗಿ ಉರಿ ದಾಳಿ, ಬಳಿಕ ಪುಲ್ವಾಮಾ ದಾಳಿ ಮತ್ತು ಈಚೆಗೆ ಪೆಹಲ್ಗಾಮ್ ದಾಳಿ ನಡೆದಿದೆ. ಈ ಮೂರು ದಾಳಿಗಳಿಗೆ ನರೇಂದ್ರ ಮೋದಿ ಜೀ ರವರು ಸರ್ಜಿಕಲ್ ಸ್ಟ್ರೈಕ್, ವಾಯು ದಾಳಿ ಮತ್ತು ಈಚೆಗೆ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಭಯೋತ್ಪಾದಕರ ಅಡಗುದಾಣಗಳನ್ನು ನಾಶ ಪಡಿಸಿದ್ದಾರೆ. 56 ಎದೆ ಇಂಚಿನ ಸರ್ಕಾರವು ತನ್ನ ತಾಕತ್ತನ್ನು ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟಿದೆ ಎಂದು ವಿವರಿಸಿದರು.
ಈ ಕಾರ್ಯಾಚರಣೆಗಳ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರಿಗೆ ತಿಳಿಯಲಿಲ್ಲವೇ ಹಾಗೂ ಏಪ್ರಿಲ್ 22ನೇ ತಾರೀಖಿನಿಂದ ಮೇ 12 ತಾರೀಖಿನವರೆಗೆ ನರೇಂದ್ರ ಮೋದಿಯವರು ಏನು ಮಾಡಿದ್ದಾರೆ ಎಂದು ಗೊತ್ತಾಗಲಿಲ್ಲವೇ? ಯಾರಿಗೆ 56 ಇಂಚಿನ ಎದೆ ಇದೆ. ಕಾಂಗ್ರೆಸ್ಸಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಅಥವಾ ನಮ್ಮ ನರೇಂದ್ರ ಮೋದಿಯವರಿಗೆ ಇದೆಯೇ ಎಂದು ಪ್ರಶ್ನಿಸಿದರು.
ಇಡೀ ಪ್ರಪಂಚಕ್ಕೆ ಗೊತ್ತಾಗಿದೆ. ಇನ್ನು ಮುಂದೆ ಭಾರತದಲ್ಲಿ ಯಾವುದೇ ಭಯೋತ್ಪಾದನೆ ಕೃತ್ಯ ನಡೆದರೂ ಕೂಡ ಅದಕ್ಕೆ ನಾವು ಯುದ್ಧ ಮಾಡುತ್ತೇವೆ ಎಂದು ಜಗತ್ತಿಗೆ ಸ್ಪಷ್ಟ ಸಂದೇಶವನ್ನು ಸೈನಿಕರು ಮತ್ತು ಮೋದಿ ಅವರ ಸರ್ಕಾರ ನೀಡಿದೆ.ಭಯೋತ್ಪಾದಕ ಸಂಘಟನೆಯನ್ನು ಕಟ್ಟಿದ ಮಸೂದ್ ಅಜರ್ ಕುಟುಂಬದ 14 ಜನ ಹತ್ಯೆಯಾದ ಕಾರಣ ಪಾಕಿಸ್ತಾನ ಸರ್ಕಾರ ವಿದೇಶದಿಂದ ಬಂದ ಸಾಲದ ಹಣದಲ್ಲಿ 14 ಕೋಟಿ ಹಣವನ್ನು ನೀಡಿದೆ. ಇದು ಪಾಕಿಸ್ತಾನವು ಯಾವ ರೀತಿ ಭಯೋತ್ಪಾದಕರನ್ನು ಪೋಷಿಸುತ್ತಿದೆ ಎಂಬುದನ್ನು ತಿಳಿಸುತ್ತದೆ ಎಂದರು.
ಪಾಕಿಸ್ತಾನ ಯಾವ ರೀತಿ ಭಯೋತ್ಪಾದಕರನ್ನು ಸಾಕುತ್ತಿದೆಯೋ ಅದೇ ರೀತಿ ನಮ್ಮ ರಾಜ್ಯದಲ್ಲಿ ನೀವು ಭಯೋತ್ಪಾದಕರನ್ನು ಸಾಕುತ್ತಿದ್ದೀರಿ ಎಂದು ಪ್ರಿಯಾಂಕ್ ಖರ್ಗೆಯವರಿಗೆ ತಿಳಿಸುವುದಾಗಿ ಹೇಳಿದರು. ಉದಾಹರಣೆಗೆ ಅದಿಲ್ಗೆ ನಿಮ್ಮ ಸರ್ಕಾರ ನೀಡಿದ್ದ 25 ಲಕ್ಷ ಹಣದಲ್ಲಿ ಸುಹಾಸ್ ಶೆಟ್ಟಿ ಕೊಲೆಯಾಗಿದೆ ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಹಾಗಿದ್ದಲ್ಲಿ ಅದಿಲ್ಗೆ ಹಣ ನೀಡಿ ನೀವೇ ಭಯೋತ್ಪಾದಕನನ್ನು ಸಾಕುತ್ತಿದ್ದೀರಿ ಮತ್ತು ಪಾಕಿಸ್ತಾನ ಜಿಂದಾಬಾದ್ ಎಂದವರ ಮೇಲೆ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನವರು ನರೇಂದ್ರ ಮೋದಿ ಮತ್ತು ಸೈನಿಕರ ಮೇಲೆ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
Related Articles
Thank you for your comment. It is awaiting moderation.
Comments (0)