ಸೂಕ್ಷ್ಮಾಣುಜೀವಿ ನಿರೋಧಕತೆ ತಡೆಗೆ ಸಂಘಟಿತ ಪ್ರಯತ್ನ ಅಗತ್ಯ; ಸಚಿವ ಎನ್.ಎಸ್. ಭೋಸರಾಜು
- by Suddi Team
- May 14, 2025
- 26 Views

ಬೆಂಗಳೂರು: ಸೂಕ್ಷ್ಮಾಣುಜೀವಿ ನಿರೋಧಕತೆ (ಎಎಂಆರ್) ನಿಶ್ಯಬ್ದ ಸಾಂಕ್ರಾಮಿಕ ರೋಗವಾಗಿ ಹರಡುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಭೋಸರಾಜು ತಿಳಿಸಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಆಯೋಜಿಸಿರುವ ಸೂಕ್ಷ್ಮಾಣುಜೀವಿ ನಿರೋಧಕತೆ: ತಡೆಗಟ್ಟುವ ಕಾರ್ಯತಂತ್ರಗಳು ಮತ್ತು ಪರ್ಯಾಯಗಳು ಎಂಬ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದಲ್ಲಿ ಇಂಡಿಯಾ ಎಎಂಆರ್ ಇನ್ನೋವೇಷನ್ ಹಬ್ ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಸಂಶೋಧಕರು, ವೈದ್ಯರು ಮತ್ತು ನೀತಿ ರೂಪಿಸುವ ತಜ್ಞರು ತಾವು ಅನುಭವಿಸುತ್ತಿರುವ ಸನ್ನಿವೇಶಗಳಿಗೆ ತಕ್ಕ ಪರಿಹಾರಗಳನ್ನು ಹುಡುಕಲು ಒಟ್ಟಾಗಿ ಕೆಲಸ ಮಾಡುವಂತೆ ಪ್ರೋತ್ಸಾಹಿಸುತ್ತಿದೆ ಎಂದು ತಿಳಿಸಿದರು.
ಎಎಂಆರ್ ವಿರುದ್ಧದ ಹೋರಾಟದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕಾರ್ಯಯೋಜನೆಗಳ ಮೂಲಕ ಜನಜಾಗೃತಿ, ಔಷಧ ಬಳಕೆಯ ಮೇಲ್ವಿಚಾರಣೆ, ಮಾರಾಟದ ನಿಯಂತ್ರಣ ಮತ್ತು ಮಾನವರು ಹಾಗೂ ಪ್ರಾಣಿಗಳಲ್ಲಿ ಆಂಟಿಬಯೋಟಿಕ್ಗಳ ಸಮರ್ಪಕ ಬಳಕೆಗಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಸಂಶೋಧನೆಯಲ್ಲಿ ರಾಜ್ಯ ಮುಂದು:
ಕರ್ನಾಟಕ ಈ ಸಂಬಂಧ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದ್ದು, ಬೆಂಗಳೂರು ಸೇರಿ ಅನೇಕ ಪ್ರಸಿದ್ಧ ಸಂಶೋಧನಾ ಸಂಸ್ಥೆಗಳು ಎಎಂಆರ್ಗೆ ಪ್ರತಿಕ್ರಿಯಿಸಲು ಹೊಸಪದ್ಧತಿಗಳನ್ನು ಅಭಿವೃದ್ಧಿಪಡಿಸುತ್ತಿವೆ. ಎಎಂಆರ್ ವಿರುದ್ಧ ಹೋರಾಟ ಕೇವಲ ವೈಜ್ಞಾನಿಕ ಸವಾಲು ಮಾತ್ರವಲ್ಲ, ಅದು ನೈತಿಕ ಬದ್ಧತೆಯೂ ಹೌದು. ಸಂಘಟಿತ ಜ್ಞಾನ ಹಾಗೂ ಬದ್ಧತೆಯಿಂದ ಈ ಸವಾಲನ್ನು ಸಮರ್ಥವಾಗಿ ಎದುರಿಸುವ ಮೂಲಕ ನಾವು ಸಾರ್ವಜನಿಕ ಆರೋಗ್ಯ ರಕ್ಷಣೆ, ಆಹಾರ ಭದ್ರತೆ ಹಾಗೂ ಶಾಶ್ವತ ಅಭಿವೃದ್ಧಿಗೆ ನಮ್ಮ ಬದ್ದತೆ ತೋರಿಸಬಹುದಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಉಪ ಮಹಾನಿರ್ದೇಶಕರು ಮತ್ತು ಖ್ಯಾತ ವಿಜ್ಞಾನಿಗಳಾದ ಡಾ. ರಾಘವೇಂದ್ರ ಭಟ್ಟ, ನಿಟ್ಟೆ ವಿಶ್ವವಿದ್ಯಾಲಯದ ಸಲಹೆಗಾರ ಮತ್ತು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ನಿವೃತ್ತ ಹಿರಿಯ ಅಧಿಕಾರಿಗಳಾದ ಡಾ. ಕರುಣಾ ಸಾಗರ್ ಮತ್ತಿತರರು ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ಪದ್ಮಶ್ರೀ ಪುರಸ್ಕೃತ ಖ್ಯಾತ ವಿಜ್ಞಾನಿ ಪ್ರೊ. ಸುಬ್ಬಣ್ಣ ಅಯ್ಯಪ್ಪನ್ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.
Related Articles
Thank you for your comment. It is awaiting moderation.
Comments (0)