ಸಿಎಂ ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಪತ್ರ: ಯೂರಿಯಾ ಕೊರತೆ ನೀಗಿಸಿ ರೈತರ ಕಷ್ಟ ನಿವಾರಿಸಿ
- by Suddi Team
- September 8, 2020
- 19 Views

ಬೆಂಗಳೂರು:ಮುಂಗಾರು ಬಿತ್ತನೆಗೆ ಮುಂದಾಗಿರುವ ರೈತರು ಯೂರಿಯಾ ರಸಗೊಬ್ಬರ ಸಿಗದೆ ಪರದಾಡುತ್ತಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಯೂರಿಯಾವನ್ನು ತರಿಸಿಕೊಂಡು ರೈತರ ಸಂಕಷ್ಟವನ್ನು ಪರಿಹರಿಸಬೇಕೆಂದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದ ವಿವರ ಹೀಗಿದೆ.
ಕಳೆದ ಕೆಲವು ದಿನಗಳಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ‘ಯೂರಿಯಾ’ ಸಮಸ್ಯೆ ಉದ್ಭವಿಸಿ ರೈತರು ಪ್ರತಿಭಟನೆಗಳನ್ನು ನಡೆಸುತ್ತಿರುವ ಬಗ್ಗೆ ವರದಿಯಾಗುತ್ತಿವೆ. ಜನರು ಸಹ ಮಳೆಯಾಗಿದೆ ಬೆಳೆಗೆ ಯೂರಿಯಾ ಬೇಕು. ಆದರೆ ಅಂಗಡಿಗಳಲ್ಲಿ ಯೂರಿಯಾ ಲಭ್ಯವಿಲ್ಲವೆಂದು ಅಂಗಡಿಗಳಲ್ಲಿ ಹೇಳುತ್ತಿದ್ದಾರೆಂದು ನನ್ನ ಗಮನಕ್ಕೆ ತರುತ್ತಿದ್ದಾರೆ.
ಸಾಧಾರಣವಾಗಿ ಈ ಋತುವಿಗೆ 8,50,000 ಮೆಟ್ರಿಕ್ ಟನ್ಗಳಷ್ಟು ಯೂರಿಯಾದ ಅವಶ್ಯಕತೆ ಇತ್ತು. ಆದರೆ ನಿಮ್ಮ ವೈಬ್ಸೈಟ್ನ ಮಾಹಿತಿ ಪ್ರಕಾರ 8,95,221 ಮೆಟ್ರಿಕ್ ಟನ್ಗಳಷ್ಟು ಯೂರಿಯಾವನ್ನು ವಿತರಿಸಲಾಗಿದೆ (01-04-2020 ರಿಂದ 06-09-2020 ರವರೆಗೆ) ಹಾಗೂ 1,88,996 (06-09-2020 ರಂದು) ಮೆಟ್ರಿಕ್ ಟನ್ಗಳಷ್ಟು ಲಭ್ಯವಿದೆ ಎಂದು ಹೇಳಲಾಗುತ್ತಿದೆ. ಆದರೆ ಜನರು ಮಾತ್ರ ತಮಗೆ ಯೂರಿಯಾ ಸಿಗುತ್ತಿಲ್ಲವೆಂದು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಹಾಗಾದರೆ ಸಮಸ್ಯೆಯ ಮೂಲವಿರುವುದು ಎಲ್ಲಿ? ಕಾಳಸಂತೆಕೋರರು ಅಕ್ರಮವಾಗಿ ದಾಸ್ತಾನು ಮಾಡಿರಬೇಕು, ನಿಮ್ಮ ವೆಬ್ಸೈಟ್ನ ಅಂಕಿಅಂಶಗಳೇ ತಪ್ಪು ಇರಬೇಕು. ಅಥವಾ ಜನರ ಬೇಡಿಕೆ ಹೆಚ್ಚಾಗಿರಬೇಕು.
ಪರಿಶೀಲಿಸಿ ನೋಡಿದರೆ ಈ 3 ಅಂಶಗಳೂ ನಿಜ ಇರುವಂತೆ ಕಾಣುತ್ತಿವೆ. ಕೊರೋನಾ ಕಾರಣದಿಂದ ಲಾಕ್ಡೌನ್ ಹೇರಿದ್ದರಿಂದ ನಗರಗಳಿಂದ ವ್ಯಾಪಕವಾಗಿ ಗ್ರಾಮಾಂತರ ಪ್ರದೇಶಕ್ಕೆ ವಲಸೆ ಹೋದರು. ಹಾಗಾಗಿ ಸಹಜವಾಗಿಯೇ ಕೃಷಿ ಕ್ಷೇತ್ರದ ಮೇಲೆ ಒತ್ತು ಬೀಳಲಾರಂಭಿಸಿತು. ಈ ವಿಚಾರವನ್ನು ಮನಗಂಡು ನಾವು ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಸರ್ಕಾರಕ್ಕೆ ಮಾಡಿದ ಮನವಿ ಪತ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೀಜ ಮತ್ತು ಗೊಬ್ಬರವನ್ನು ದಾಸ್ತಾನು ಮಾಡಿಕೊಳ್ಳಬೇಕೆಂದು ಹಾಗೂ ಒದಗಿಸಬೇಕೆಂದು ಆಗ್ರಹಿಸಿದ್ದೆವು.
ಸರ್ಕಾರದ ಅಂಕಿಅಂಶಗಳ ಪ್ರಕಾರವೇ ಶೇ.20 ರಷ್ಟು ಹೆಚ್ಚುವರಿ ಭೂ ಪ್ರದೇಶದಲ್ಲಿ ಭಿತ್ತನೆ ಮಾಡಲಾಗಿದೆ. ಸರ್ಕಾರ ಇದೇ ರೀತಿಯ ನಿರ್ಲಕ್ಷ್ಯ ರೀತಿಯ ಗೊಬ್ಬರಗಳಿಗೂ ರೈತರು ಪರದಾಡಬೇಕಾಗುತ್ತದೆ.
ಜೆ.ಪಿ.ಯು ಈ ಹಿಂದೆ ಅಧಿಕಾರದಲ್ಲಿದ್ದಾಗಲೂ ಔಷಧಿ ಗೊಬ್ಬರಗಳನ್ನು ಸಮರ್ಪಕವಾಗಿ ವಿತರಿಸಲಾಗದೆ ಸಂಘರ್ಷ ಉಂಟಾದ್ದರಿಂದ ಹಾವೇರಿಯಲ್ಲಿ ಗೋಲಿಬಾರ್ ನಡೆಸಿ ಇಬ್ಬರು ರೈತರನ್ನು ಕೊಲೆ ಮಾಡಲಾಯಿತು. ಅಂತಹ ಕೆಟ್ಟ ನೆನಪುಗಳು ಬೆನ್ನಿಗಿದ್ದರೂ ಸಹ ಗೊಬ್ಬರದಂತಹ ಮಹತ್ವವಾದ ವಿಷಯವನ್ನು ನಿಭಾಯಿಸಲಾಗದೇ ಸರ್ಕಾರ ಮತ್ತೊಮ್ಮೆ ಸಂಪೂರ್ಣ ವಿಫಲವಾಗಿದೆ.
ರೈತರ ಕಾಳಜಿಯಿಂದಾಗಿ ಬೆಳೆಗಳು ಚೆನ್ನಾಗಿರುವುದರಿಂದ ಬೆಲೆ ಕುಸಿತದ ಸಮಸ್ಯೆಯು ಮುಂದಿನ ದಿನಗಳಲ್ಲಿ ಖಂಡಿತವಾಗಿ ಉದ್ಭವಿಸುತ್ತದೆ. ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ ಎಂದು ಸಿದ್ದರಾಮಯ್ಯ ಅವರು ಪತ್ರದಲ್ಲಿ ವಿವರಿಸಿದ್ದಾರೆ.
Related Articles
Thank you for your comment. It is awaiting moderation.
Comments (0)