ಸಮಾಜಕ್ಕೆ ಕಸುವು ತುಂಬುವಂತೆ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನ: ಸುರೇಶ್ ಕುಮಾರ್ ಇಂಗಿತ

ಬೆಂಗಳೂರು: ಶಿಕ್ಷಣ ಕ್ಷೇತ್ರವನ್ನು ಇನ್ನೂ ಪರಿಣಾಮಕಾರಿಯಾಗಿ ಸುಧಾರಣೆ ಮಾಡುವ ನಿಟ್ಟಿನಲ್ಲಿ ಹಾಗೂ ಸಮಾಜಕ್ಕೆ ಕಸುವು ತುಂಬುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನಕ್ಕೆ ಎಲ್ಲರೂ ಶ್ರಮಿಸಬೇಕಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಶನಿವಾರ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನ ಕುರಿತು ಅಭಿಪ್ರಾಯ ಸಂಗ್ರಹ ಸಂವಾದ ಸರಣಿಯಲ್ಲಿ ರಾಜ್ಯದ ಡಯಟ್ ಪ್ರಾಚಾರ್ಯರು, ಉಪನ್ಯಾಸಕರು, ಡಿಡಿಪಿಐ ಹಾಗೂ ಶಿಕ್ಷಣಾಧಿಕಾರಿಗಳೊಂದಿಗೆ ವೆಬಿನಾರ್ ಸಂವಾದ ನಡೆಸಿ ಸಲಹೆಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ-2020ರಿಂದ ಶಿಕ್ಷಣ ಕ್ಷೇತ್ರದ ಎಲ್ಲ ಪ್ರಶ್ನೆಗಳಿಗೆ ಉತ್ತರ ಲಭಿಸಿದಂತಾಗಿದ್ದು, ಅದರ ಪರಿಣಾಮಕಾರಿ ಅನುಷ್ಠಾನ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ನೀತಿಯ ಅನುಷ್ಠಾನ ಮತ್ತು ಯಶಸ್ಸು ಎಲ್ಲರ ಮುಕ್ತಮನಸ್ಸಿನ ಪಾಲ್ಗೊಳ್ಳುವಿಕೆಯಿಂದ ಸಾಧ್ಯವಾಗಲಿದೆ. ನೂತನ ನೀತಿಯನ್ನು ಏಕಾಏಕಿ ತರಲಾಗಿಲ್ಲ. ಹಲವಾರು ಸುತ್ತಿನ ಸಂವಾದ, ಚರ್ಚೆ, ಆಕ್ಷೇಪಣೆಗಳ ಸ್ವೀಕಾರದಂತಹ ಹಲವಾರು ಪ್ರಕ್ರಿಯೆಗಳ ನಂತರ ಬಹು ಸಂಸ್ಕೃತಿಯ ನಮ್ಮ ದೇಶಕ್ಕೆ ಅನುಕೂಲವಾದ ನೀತಿಯನ್ನು ಸರ್ವ ಆಯಾಮಗಳನ್ನೊಳಗೊಂಡಂತೆ ಕಸ್ತೂರಿ ರಂಗನ್ ಅವರ ನೇತೃತ್ವದ ತಂಡ ವರದಿ ರೂಪಿಸಿದೆ ಎಂದರು.

ಈ ನೀತಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಿದಾಗ 2.50 ಲಕ್ಷದಷ್ಟು ಆಕ್ಷೇಪಣೆಗಳು ವ್ಯಕ್ತವಾಗಿದ್ದವು. ಅನುಷ್ಠಾನಯೋಗ್ಯ ಆಕ್ಷೇಪಣೆಗಳನ್ನು ಸಮರ್ಪಕವಾಗಿ ಅಳವಡಿಸಿಕೊಂಡು ನಂತರ ಅಳೆದು ತೂಗಿ ಎಲ್ಲ ದೃಷ್ಟಿಯಿಂದಲೂ ಯೋಗ್ಯವಾದ ವರದಿಯನ್ನು ಸಮಿತಿ ರೂಪಿಸಿದೆ. ವರದಿಯಲ್ಲಿ ಕರ್ನಾಟದಲ್ಲಿ ಈಗಾಗಲೇ ಇರುವ ಚಿಂತನೆಗಳು ವ್ಯಕ್ತವಾಗಿವೆ. ಸಮಿತಿಯಲ್ಲಿ ಕರ್ನಾಟಕದ ಮೂವರು ಸದಸ್ಯರು ಇದ್ದರು. ಎನ್ ಇ ಪಿ ಕರಡು ಸಮಿತಿ ಅಧ್ಯಕ್ಷರಾಗಿದ್ದ ಕಸ್ತೂರಿ ರಂಗನ್ ಅವರು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರೂ ಆಗಿ ಸೇವೆಸಲ್ಲಿಸಿದ್ದರು. ಈ ವರದಿಯಲ್ಲಿ ನಮ್ಮ ರಾಜ್ಯದ ಪ್ರಭಾವವೇ ಹೆಚ್ಚಾಗಿದ್ದು, ನಾವು ಅದನ್ನು ಅಳವಡಿಸಿಕೊಳ್ಳಲು ಅನುಕೂಲವಾಗಿದೆ ಎಂದು ಸಚಿವರು ಹೇಳಿದರು.

ವರದಿಯ ಪರಿಣಾಮಕಾರಿ ಅನುಷ್ಠಾನಕ್ಕೆ ನಮ್ಮ ಅಧಿಕಾರಿಗಳು ಸಮರ್ಪಣಾ ಹಾಗೂ ಸಕಾರಾತ್ಮಕ ಮನೋಭಾವದಿಂದ ಕೆಲಸ ಮಾಡಬೇಕು. ನಮ್ಮ ರಾಜ್ಯದ ನಿಲುವಿಗೆ ಅನುಗುಣವಾಗಿ ಹೊಸ ನೀತಿಯ ಅನುಷ್ಠಾನಕ್ಕೆ ಅಧಿಕಾರಿಗಳು ಯೋಗ್ಯ ಸಲಹೆಗಳಿದ್ದರೆ ಮುಕ್ತವಾಗಿ ವ್ಯಕ್ತಪಡಿಸಬೇಕು ಎಂದು ಸುರೇಶ್ ಕುಮಾರ್ ಹೇಳಿದರು.
ಮೊದಲಿದ್ದ 10+ 2 ಸಿಸ್ಟಮ್ ಗೆ ಬದಲಾಗಿ ಹೊಸ ನೀತಿಯಂತೆ 5+3+3+4 ನೀತಿಗೆ ನಾವೀಗ ಬದಲಾಗಬೇಕಿದೆ. ಚಿಕ್ಕ ವಯಸ್ಸಿನಲ್ಲಿಯೇ ನಾವು ನಮ್ಮ ಮಕ್ಕಳನ್ನು ಕೌಶಲ್ಯಯುಕ್ತರನ್ನಾಗಿ ಮಾಡಬೇಕಿದೆ. ಆ ನಿಟ್ಟಿನಲ್ಲಿ ನಾವು ನಮ್ಮ ಮಕ್ಕಳನ್ನು ಪರಿಣಾಮಕಾರಿಯಾಗಿ ಸಿದ್ಧಗೊಳಿಸಬೇಕಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಶಾಲಾ ಶಿಕ್ಷಣದ 8 ಅಧ್ಯಾಯಗಳನ್ನು ವಿಭಾಗೀಯವಾರು ಅಧಿಕಾರಿಗಳು ವಿಶ್ಲೇಷಿಸಿ ಸಲಹೆ ಸೂಚನೆಗಳನ್ನು ನೀಡಿದರು. 100ಕ್ಕೂ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳು ವೆಬಿನಾರ್ ನಲ್ಲಿ ಭಾಗವಹಿಸಿದ್ದರು. ಟೀಚಿಂಗ ಪ್ರಾಕ್ಟೀಸ್, ವೃತ್ತಿ ಕೌಶಲ ನೀಡಿಕೆ, ಶಿಕ್ಷಕರ ನೇಮಕ, ಶಿಕ್ಷಕರಾದ ನಂತರ ವೃತ್ತಿಪರತೆ ಪರೀಕ್ಷೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಅಧಿಕಾರಿಗಳು ವಿಷಯ ಮಂಡಿಸಿದರು.

ಸರ್ವ ಶಿಕ್ಷಣ ಅಭಿಯಾನ ರಾಜ್ಯ ಯೋಜನಾ ನಿರ್ದೇಶಕಿ ದೀಪಾ ಚೋಳನ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

Related Articles

Comments (0)

Leave a Comment