ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಡಿ.ಕೆ ಶಿವಕುಮಾರ್ ಚಾಲನೆ

ಬೆಂಗಳೂರು:ಕೋವಿಡ್ ನಿರ್ವಹಣೆಗೆ ಜನರಿಗೆ ನೆರವಾಗಲು ಕಾಂಗ್ರೆಸ್ ಹಮ್ಮಿಕೊಂಡಿರುವ ‘ಆರೋಗ್ಯ ಹಸ್ತ’ ಕಾರ್ಯಕ್ರಮವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಉದ್ಘಾಟಿಸಿದರು.

ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್, ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ, ಶಾಸಕಿ ಸೌಮ್ಯ ರೆಡ್ಡಿ ಇದ್ದರು. ಈ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು…

ಕೆಪಿಸಿಸಿ ವೈದ್ಯರ ಘಟಕ ಇಂದು ಆರೋಗ್ಯ ಹಸ್ತ ಕಾರ್ಯಕ್ರಮ ಮೂಲಕ ಇಡೀ ರಾಜ್ಯಕ್ಕೆ ಒಂದು ಹೊಸ ಅಧ್ಯಾಯ ಬರೆದಿದೆ.ಈ ಕಾರ್ಯಕ್ರಮ ಜನರ ಬಳಿಗೆ ಹೋಗಬೇಕು, ಕಾಂಗ್ರೆಸ್ ಪಕ್ಷ ಕೇವಲ ಅಧಿಕಾರಕ್ಕೆ ಮಾತ್ರವಲ್ಲ ಕಷ್ಟದಲ್ಲಿರುವ ಜನರ ಸೇವೆ ಮಾಡಬೇಕು ಎಂದು ರೂಪಿಸಲಾಗಿದೆ.

ವೈದ್ಯ ಘಟಕ ಹಾಗೂ ಮಾಜಿ ಆರೋಗ್ಯ ಸಚಿವರ ಜತೆ ಚರ್ಚಿಸಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಬಿಟಿಎಂ ಹಾಗೂ ಜಯನಗರದಲ್ಲಿ ಈ ಪ್ರಾಯೋಗಿಕ ಕಾರ್ಯಕ್ರಮ ಮಾಡಿ ಅದನ್ನು ಇಡೀ ರಾಜ್ಯಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ.

ಇದು ಮಾನವೀಯತೆಯ ಪ್ರಶ್ನೆ. ಈ ಪರಿಸ್ಥಿತಿ ನಿಭಾಯಿಸಲು ಕರ್ನಾಟಕ ಸರ್ಕಾರ ವಿಫಲವಾಗಿರುವುದನ್ನು ಎಲ್ಲರೂ ಒಪ್ಪುತ್ತಿದ್ದಾರೆ. ಈ ಸೋಂಕು ಇಷ್ಟು ತೀವ್ರವಾಗಲು ಸರ್ಕಾರವೇ ಕಾರಣ.ಪ್ರತಿ ಪಂಚಾಯಿತಿ ಮತ್ತು ವಾರ್ಡ್ ಗಳಲ್ಲಿ ಇಬ್ಬರನ್ನು ಆಯ್ಕೆ ಮಾಡಿ ಅವರನ್ನು ಕೊರೋನಾ ಕಾಂಗ್ರೆಸ್ ವಾರಿಯರ್ ಎಂದು ಕಳೆಸಿಕೊಡುತ್ತಿದ್ದೇವೆ. ರಾಜ್ಯದ್ಯಂತ 15 ಸಾವಿರ ಯುವಕರನ್ನು ಕಾಂಗ್ರೆಸ್ ವಾರಿಯರ್ ಎಂದು ಗುರುತಿಸಲಾಗಿದೆ. ಈ ವಾರಿಯರ್ಸ್ ಗಳ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇವರಿಗೆ ವಿಮೆಯನ್ನು ಮಾಡಿಸಲಾಗುತ್ತಿದೆ.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೇಗೆ ಹೋರಾಟ ಮಾಡಲಾಗಿತ್ತೋ ಅದೇ ರೀತಿ ಈ ಮಹಾಮಾರಿ ದೂರ ಮಾಡಲು, ರಾಜ್ಯದ ಜನರಿಗೆ ಧೈರ್ಯ ಕೊಡಲು ಈ ಪ್ರಯತ್ನ ಮಾಡಲಾಗುತ್ತಿದೆ.

Related Articles

Comments (0)

Leave a Comment