ಸರ್ಕಾರದ ಅನುಮತಿ ನಂತರ ಪದಗ್ರಹಣ ‘ಪ್ರತಿಜ್ಞಾ’ ಕಾರ್ಯಕ್ರಮ: ಡಿ.ಕೆ. ಶಿವಕುಮಾರ್

ಬೆಂಗಳೂರು:ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೂತನ ಮಾರ್ಗಸೂಚಿಯಲ್ಲಿ ಜೂನ್ 8 ನೇ ತಾರೀಖಿನವರೆಗೂ ಯಾವುದೇ ರಾಜಕೀಯ ಸಭೆ ನಡೆಸುವಂತಿಲ್ಲ ಎಂದು ಹೇಳಿದೆ. ಹೀಗಾಗಿ ಸರ್ಕಾರ ಅನುಮತಿ ನೀಡಿದ ನಂತರ ಪದಗ್ರಹಣ ‘ಪ್ರತಿಜ್ಞಾ’ ಕಾರ್ಯಕ್ರಮ ನಡೆಯುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಡಿ.ಕೆ. ಶಿವಕುಮಾರ್, ಇದೇ ತಿಂಗಳು 7ರಂದು ನಡೆಸಲು ಉದ್ದೇಶಿಸಲಾಗಿದ್ದ ಪದಗ್ರಹಣ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದರು. ಈ ಅವರು ಹೇಳಿದ್ದಿಷ್ಟು:

ನನಗೆ ಕೆಪಿಸಿಸಿ ಅಧ್ಯಕ್ಷ ಜವಾಬ್ದಾರಿ ನೀಡಿದ ಘಳಿಗೆಯಿಂದಲೇ ನಾನು ನನ್ನ ಕೆಲಸ ಆರಂಭಿಸಿದ್ದೇನೆ. ನಂತರ ಕೊರೋನಾ ಸೋಂಕು ಎದುರಾಗಿದ್ದು, ಎಲ್ಲ ಹಿರಿಯ ನಾಯಕರ ಸಹಕಾರದೊಂದಿಗೆ ಪಕ್ಷದ ಕಾರ್ಯಕರ್ತರಿಗೆ ಅಗತ್ಯ ಮಾರ್ಗದರ್ಶನ ನೀಡಿ ನನ್ನ ಕೆಲಸ ಮುಂದುವರೆಸಿದ್ದೇನೆ.

ಕೋವಿಡ್ ಸಮಯದಲ್ಲಿ ಯಾವುದೇ ರಾಜಕೀಯ ಸಮಾರಂಭ ನಡೆಸಬಾರದು ಎಂದು ಸರ್ಕಾರ ಆದೇಶ ನೀಡಿದೆ. ಕಳೆದ ಎರಡೂವರೆ ತಿಂಗಳಿಂದ ನಮ್ಮ ಹೋರಾಟ ನಡೆಯುತ್ತಿದ್ದು, ಮಾನವ ಸೇವೆಗಾಗಿ, ಮಾನವೀಯತೆಯಿಂದ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಸರ್ಕಾರ ವಿಫಲವಾದಾಗ ಪ್ರತಿಪಕ್ಷವಾಗಿ ಎಲ್ಲ ವರ್ಗದ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇವೆ.

ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಸಾಂಕೇತಿಕವಾಗಿ ಕಾರ್ಯಕ್ರಮ ಮಾಡುವುದು ಒಂದು ಪದ್ಧತಿ. ನಮ್ಮ ಎಲ್ಲ ನಾಯಕರ ಜತೆ ಸೇರಿ ಸರಳ ಹಾಗೂ ವಿನೂತನ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೇವೆ. ಅದೇನೆಂದರೆ ಬೆಂಗಳೂರಿನಲ್ಲಿ ಸಾಂಕೇತಿಕವಾಗಿ 150 ಮಂದಿ ಸೇರಿ ಕಾರ್ಯಕ್ರಮ ಮಾಡುತ್ತೇವೆ. ಉಳಿದಂತೆ ಎಲ್ಲ ಪಂಚಾಯ್ತಿಗಳಲ್ಲಿ, ವಾರ್ಡ್ ಗಳಲ್ಲಿ ಸೇರಿ ಸುಮಾರು 7800 ಕಡೆಗಳಲ್ಲಿ ಏಕಕಾಲದಲ್ಲಿ “ವಂದೇ ಮಾತರಂ” ದೇಶಭಕ್ತಿ ಗೀತೆಯಿಂದ ಪ್ರಾರಂಭ ಮಾಡಿ ಸಂವಿಧಾನದ ಪೀಠಿಕೆ ವಾಚನದೊಂದುಮಿಗೆ ಪ್ರತಿಜ್ಞೆ ತೆಗೆದುಕೊಳ್ಳಲಾಗುವುದು.

ಸಾಮಾಜಿಕ ಅಂತರ ಕಾಯ್ದುಕೊಂಡು ದೇಶದ ಹಾಗೂ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸಿ ಟಿವಿಯಲ್ಲಿ ನೇರ ಪ್ರಸಾರ ಮಾಡಿಸಲಾಗುವುದು. ಎಲ್ಲ ಕಡೆಯೂ ಕಾರ್ಯಕ್ರಮಗಳನ್ನು ಜೂಮ್ ಮೂಲಕ ನೇರ ಪ್ರಸಾರ ಮಾಡಲು ತೀರ್ಮಾನಿಸಿದ್ದೇವೆ. ರಾಜ್ಯದ ಮೂಲೆ ಮೂಲೆಯಿಂದ ಲಕ್ಷಂತರ ಜನರನ್ನು ಸೇರಿಸಿ, ಟ್ರಾಫಿಕ್ ಮತ್ತಿತರ ಸಮಸ್ಯೆ ಸೃಷ್ಟಿಸುವುದನ್ನು ತಡೆಯಲು ಹಾಗೂ ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ತಿಂಗಳು 7ರಂದು ಕಾರ್ಯಕ್ರಮ ಮಾಡಲು ಮುಖ್ಯಮಂತ್ರಿಗಳು, ಪೊಲೀಸ್ ಆಯುಕ್ತರಿಗೆ ಅನುಮತಿ ಕೇಳಿ, ಮನವಿ ಮಾಡಿದ್ದೆವು. ಆದರೆ ಈಗ ಹೊಸ ಮಾರ್ಗಸೂಚಿ ಹೊರಬಿದ್ದಿದೆ‌. ಇದರ ಹಿಂದೆ ರಾಜಕೀಯ ಹುನ್ನಾರವಿದೆ.

*’ಪ್ರತಿಜ್ಞಾ’ ಕಾರ್ಯಕ್ರಮ*

ಈ ಕಾರ್ಯಕ್ರಮಕ್ಕೆ ನಾವು “ಪ್ರತಿಜ್ಞಾ” ಎಂದು ಹೆಸರಿಟ್ಟಿದ್ದೇವೆ. ಸರ್ಕಾರ ಅನುಮತಿ ನೀಡಿದ ಕೆಲವೇ ಗಂಟೆಗಳಲ್ಲಿ ನಾನು ನಿಮಗೆ ಹೊಸ ದಿನಾಂಕ ತಿಳಿಸುತ್ತೇನೆ. ಹೀಗಾಗಿ ನಾನು ದಿನಾಂಕದ ವಿಚಾರದಲ್ಲಿ ಈವರೆಗೂ ಎಲ್ಲಿಯೂ ಘೋಷಣೆ ಮಾಡಿರಲಿಲ್ಲ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೂತನ ಮಾರ್ಗಸೂಚಿಯಲ್ಲಿ 8ನೇ ತಾರೀಕಿನವರೆಗೂ ರಾಜಕೀಯ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಲಾಗಿದ್ದು, ಆಮೂಲಕ 7ರಂದು ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ. ಕೇವಲ 150 ಜನ ಸೇರಲು ಅವರು ಅವಕಾಶ ನೀಡುತ್ತಿಲ್ಲ.

ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರಲ್ಲಿ ಒಂದು ಮನವಿ ಮಾಡಿಕೊಳ್ಳುತ್ತೇನೆ. ನೀವು ಈಗಾಗಲೇ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದೀರಿ. ಕಾರ್ಯಕ್ರಮ ದಿನಾಂಕ ಬದಲಾಗಬಹುದು ಆದರೆ ಕಾರ್ಯಕ್ರಮ ರದ್ದಾಗುವುದಿಲ್ಲ. ನೀವು ನಿಮ್ಮ ಸಿದ್ಧತೆ ಮುಂದುವರಿಸಿಕೊಳ್ಳಿ. ಸರ್ಕಾರದ ಅನುಮತಿ ಇಲ್ಲದೆ ಕಾರ್ಯಕ್ರಮ ಮಾಡಿದರೆ ಶಾಸನ ರೂಪಿಸುವ ನಾವೇ ಕಾನೂನು ಮುರಿದಂತಾಗುತ್ತದೆ. ಜತೆಗೆ ನಿಮಗೆ ಸ್ಥಳೀಯವಾಗಿ ಅಧಿಕಾರಿಗಳು ತೊಂದರೆ ನೀಡಲಿದ್ದಾರೆ. ಹೀಗಾಗಿ ಸರ್ಕಾರ ಅನುಮತಿ ನೀಡಿದ ನಂತರವೇ ಈ ಕಾರ್ಯಕ್ರಮ ನಡೆಸಲಾಗುವುದು. ಹೀಗಾಗಿ 7ರಂದು ಈ ಕಾರ್ಯಕ್ರಮ ಇರುವುದಿಲ್ಲ. ಸರ್ಕಾರದ ಅನುಮತಿಗಾಗಿ ಕಾಯೋಣ.

*ಮನೆಯಲ್ಲೂ ಕೂತು ಕಾರ್ಯಕ್ರಮದಲ್ಲಿ ಭಾಗವಹಿಸಿ*

ಮನೆಯಲ್ಲೇ ಕೂತು ಜನರು, ಕಾಂಗ್ರೆಸ್ ಅಭಿಮಾನಿಗಳು, ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಮಿಸ್ ಕಾಲ್ (7676366666) ನೀಡುವ ಅವಕಾಶ ಕಲ್ಪಸಿದ್ದು, ಈ ಸಂಖ್ಯೆಗೆ ಮಿಸ್ ಕಾಲ್ ಕೊಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

*ಪರಿಶೀಲನೆ ಮಾಡುವುದರಲ್ಲಿ ತಪ್ಪೇನಿದೆ?*

ಸಾರ್ವಜನಿಕ ಹಕ್ಕುಪತ್ರ ಸಮಿತಿ ಕಾರ್ಯಕ್ಕೆ ಅಡ್ಡಿಪಡಿಸಿದ ವಿಧಾನಸಭೆ ಸ್ಪೀಕರ್ ಅವರ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡನೆ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಯಾವುದೇ ಅವ್ಯವಹಾರ ಆರೋಪ ಬಂದರೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಆ ಬಗ್ಗೆ ಪರಿಶೀಲನೆ ನಡೆಸುವ ಹಕ್ಕಿದೆ. ಈ ವಿಚಾರದಲ್ಲಿ ಸ್ಪೀಕರ್ ಅವರು ಹಸ್ತಕ್ಷೇಪ ಮಾಡಿದ್ದೇಕೆಂಬುದೇ ಗೊತ್ತಾಗುತ್ತಿಲ್ಲ. ಸರ್ಕಾರ ಪಾರದರ್ಶಕವಾಗಿರಬೇಕು. ಈಗ ಆರ್ಟಿಐ ಮೂಲಕ ಮಾಹಿತಿ ಸಿಗುವಾಗ ಸ್ಪೀಕರ್ ಅವರು ಪರಿಶೀಲನೆಗೆ ಅಡ್ಡಿ ಪಡಿಸಿದ್ದೇಕೆ? ಪರಿಶೀಲನೆ ಮಾಡುವುದರಲ್ಲಿ ತಪ್ಪೇನಿದೆ? ಈ ಸರ್ಕಾರದಲ್ಲೇ ಸಚಿವರು ಅಧಿಕಾರಿಗಳ ವಿರುದ್ಧ ದೂರಿರುವುದನ್ನು ನಾವು ನೋಡಿದ್ದೇವೆ. ಮುಖ್ಯಮಂತ್ರಿಗಳಿಗೂ ಅನೇಕ ದೂರುಗಳು ಹೋಗಿವೆ. ಅವರೇ ಅಧಿಕಾರಿಗಳ ಬದಲಾವಣೆ ಮಾಡಿರುವುದನ್ನು ನೋಡಿದ್ದೇವೆ.

ಈ ಸಮಿತಿ ಸರ್ಕಾರಕ್ಕೆ ಸಹಾಯ ಮಾಡಲು ಇದೆಯೇ ಹೊರತು ತೊಂದರೆ ನೀಡಲು ಅಲ್ಲ. ಸರ್ಕಾರದ ಅನುಮತಿ ಮೇಲೆ ಸ್ಪೀಕರ್ ಅವರೇ ರಚಿಸಿರುವ ಸಮಿತಿ ಇದು. ಈ ವಿಚಾರದಲ್ಲಿ ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸುವ ವಿಚಾರವಾಗಿ ಶಾಸಕಾಂಗ ಪಕ್ಷದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ.

Related Articles

Comments (0)

Leave a Comment