ಕಬಿನಿ ನಾಲೆಯಲ್ಲಿ ಮುಳುಗಿ ದಂಪತಿ ಸಾವು

ಚಾಮರಾಜನಗರ: ತವರು ಮನೆಯಿಂದ ಪತಿಯೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದ ಪತ್ನಿ ದಾರಿ ಮಧ್ಯೆ ನಾಲೆಗೆ ಬಿದ್ದು ಸಾವನ್ನಪ್ಪಿದರೆ ಪತ್ನಿಯನ್ನು ಕಾಪಾಡಲು ಹೋದ ಪತಿಯೂ ಪತ್ನಿ ಜತೆ ಜಲಸಮಾಧಿಯಾಗಿದ್ದಾನೆ.

ಚಾಮರಾಜನಗರ ಜಿಲ್ಲೆಯ ಲಿಂಗಣಾಪುರ ಗೇಟ್ ಬಳಿಯ ಕಬಿನಿ ಬಲದಂಡೆ ನಾಲೆಯಲ್ಲಿ ದೇಮಹಳ್ಳಿಯ ಕೆಂಪಣ್ಣ(37), ಪೂರ್ಣಿಮಾ(27) ದಂಪತಿ ನಾಲೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಆಲ್ದೂರಿನಲ್ಲಿರುವ ತನ್ನ ತವರು ಮನೆಗೆ ಪತಿ ಕೆಂಪಣ್ಣ ಮತ್ತು ಮಗನೊಂದಿಗೆ ಹೋಗಿದ್ದ ಪೂರ್ಣಿಮಾ ದೇಮಹಳ್ಳಿಗೆ ಮರಳುತ್ತಿದ್ದಳು. ಈ ವೇಳೆ ದಾರಿ ಮಧ್ಯೆ ಬೈಕ್‌ನಿಂದ ಜಿಗಿದು ನಾಲೆಗೆ ಹಾರಿದ್ದಾಳೆ. ಆಕೆಯನ್ನು ರಕ್ಷಿಸಲು ಮುಂದಾದ ಪತಿ ಕೆಂಪಣ್ಣ ಕೂಡ ನೀರಿನಲ್ಲಿ ಮುಳುಗಿ ಹೋಗಿದ್ದಾನೆ. ಇದೇ ವೇಳೆ ಜಮೀನಿಗೆ ತೆರಳುತ್ತಿದ್ದ ಭೋಜರಾಜು ಎನ್ನುವವರು ನೀರಿನಲ್ಲಿ ರಕ್ಷಣೆಗಾಗಿ ಕೂಗುತ್ತಿದ್ದರುವುದನ್ನು ಕೇಳಿಸಿಕೊಂಡು ನಾಲೆಯ ಬಳಿಗೆ ಬಂದು ಸಹಾಯ ಮಾಡುವುದರೊಳಗೆ ದಂಪತಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಿಮಿಸಿದ ಪೊಲೀಸರು ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಈಜು ಪರಿಣಿತರ ನೆರವಿನೊಂದಿಗೆ ಮೃತ ದೇಹಗಳ ಹುಡುಕಾಟ ನಡೆಸಿತು. ದಂಪತಿ ಸಾವಿನ ಸುದ್ದಿ ಹರಡುತ್ತಿದ್ದಂತೆ ಅಕ್ಕ-ಪಕ್ಕದ ಗ್ರಾಮಗಳ ಜನರು ನಾಲೆ ಬಳಿ ಬಂದು ಜಮಾಯಿಸಿದರು.
ಪೂರ್ಣಿಮಾ ನಾಲೆಗೆ ಹಾರಲು ಕಾರಣ ತಿಳಿದು ಬಂದಿಲ್ಲ. ದಂಪತಿಗಳ ಮಧ್ಯೆ ಯಾವುದೇ ಕಲಹವಿರಲಿಲ್ಲ. ಇಬ್ಬರು ಅನ್ಯೋನ್ಯವಾಗಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದು, ಸಾವಿಗೆ ಕಾರಣ ನಿಗೂಢವಾಗಿ ಉಳಿದಿದೆ. ಕುದೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಬ್‌ಇನ್ಸ್‌ಪೆಕ್ಟರ್ ಸಿದ್ದಯ್ಯ ಮತ್ತು ಸಿಬ್ಬಂದಿ ತನಿಖೆ ಆರಂಭಿಸಿದ್ದಾರೆ

Related Articles

Comments (0)

Leave a Comment