ಲಾಕ್ ಡೌನ್ ನಂತರ ರಾಜ್ಯಾದ್ಯಂತ ಪ್ರವಾಸ: ಡಿಕೆ ಶಿವಕುಮಾರ್

ಬೆಂಗಳೂರು: ಸರ್ಕಾರ ಲಾಕ್ ಡೌನ್ ತೆರವುಗೊಳಿಸಿದ ನಂತರ ರಾಜ್ಯದ ಮೂಲೆಮೂಲೆಗೂ ಪ್ರವಾಸ ಕೈಗೊಂಡು, ಸಂಕಷ್ಟಕ್ಕೆ ಸಿಲುಕಿರುವ ಎಲ್ಲ ವರ್ಗ, ಧರ್ಮದ ಜನರ ಕುಂದು ಕೊರತೆಗಳನ್ನು ಆಲಿಸುತ್ತೇನೆ, ಅವರ ಧ್ವನಿಯಾಗಿ ಅವರ ಬೆನ್ನಿಗೆ ನಿಲ್ಲುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಂಗಳವಾರ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ಮಾರ್ಚ್ 31ರವರೆಗೂ ಸರ್ಕಾರ ಲಾಕ್ ಡೌನ್ ವಿಸ್ತರಿಸಿದ್ದು, ಇದಾದ ನಂತರ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು…

1. ಲಾಕ್ ಡೌನ್ ಮುಗಿದ ತಕ್ಷಣ ಕೋವಿಡ್ ಸಮಸ್ಯೆಯಿಂದ ಎದುರಾಗಿರು ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. ಈ ಸರ್ಕಾರಕ್ಕೆ ನಾವು ಸಹಕಾರ ನೀಡಿದರು, ಕೆಲವು ವಿಚಾರಗಳಲ್ಲಿ ಹೊರತುಪಡಿಸಿ ಬಹುತೇಕ ವಿಚಾರಗಳಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ರೈತರ ಬೆಳೆ ಖರೀದಿಯಿಂದ ವಲಸೆ ಕಾರ್ಮಿಕರ ಸಂಕಷ್ಟದವರೆಗೂ ಪರಿಸ್ಥಿತಿ ನಿಭಾಯಿಸಲು ಸರ್ಕಾರ ವಿಫಲವಾಗಿದೆ. ಅಧಿಕಾರ ದುರುಪಯೋಗ, ತಮ್ಮ ಮತದಾರರಿಗೆ ಮಾತ್ರ ಸೌಲಭ್ಯ ಕಲ್ಪಿಸಿದೆ.

2. ಕೇಂದ್ರ ಸರ್ಕಾರ 21 ಲಕ್ಷ ಕೋಟಿ ಪರಿಹಾರ ಘೋಷಿಸಿದೆ. ಇದರ ಬಗ್ಗೆ ಆರ್ಥಿಕ ತಜ್ಞರು ಹಾಕಿರುವ ಲೆಕ್ಕಾಚಾರದ ಪ್ರಕಾರ ಕೇವಲ 2 ಲಕ್ಷ ಕೋಟಿ ಮಾತ್ರ ಸರ್ಕಾರಕ್ಕೆ ಹೊರೆಯಾಗಿದ್ದು, ಉಳಿದೆಲ್ಲವು ಬ್ಯಾಂಕ್ ಮೂಲಕ ಸಾಲವಾಗಿ ನೀಡಲು ನಿರ್ಧಾರವಾಗಿದೆ. ಇಂದು ಮೋದಿ ಸರ್ಕಾರ ಎಲ್ಲರನ್ನು ಸಾಲಗಾರರನ್ನಾಗಿ ಮಾಡಲು ಹೊರಟಿದೆ. ಆರಂಭದಲ್ಲಿ ಆರ್ಥಿಕ ನೆರವು ನೀಡುವ ನಿರೀಕ್ಷೆಯಾಗಿತ್ತು. ಆ ನಿರೀಕ್ಷೆ ಹುಸಿಯಾಗಿದೆ. ಕಲ್ಲಿದ್ದಲು, ವಿಮಾನಯಾನ ಕ್ಷೇತ್ರಗಳು ಖಾಸಗೀಕರಣಕ್ಕೂ, ಜನರ ಸಂಕಷ್ಟ ಪರಿಹಾರಕ್ಕೂ ಯಾವುದೇ ಸಂಬಂಧವಿಲ್ಲ.

3. ಮುಖ್ಯಮಂತ್ರಿಗಳೇ ನೀವು ಘೋಷಿಸಿರುವ 1610 ಕೋಟಿ ಪ್ಯಾಕೇಜ್ ನಲ್ಲಿ ಈವರೆಗೂ ಒಬ್ಬರಿಗೂ ಒಂದು ರೂಪಾಯಿ ನೀಡಲು ಸಾಧ್ಯವಾಗಿಲ್ಲ. ಪೀಣ್ಯ ಕೈಗಾರಿಕ ಪ್ರದೇಶದಲ್ಲಿ ನಾಲ್ಕೂವರೆ ಲಕ್ಷ ಮತದಾರರಿದ್ದು, ಮೂರು ಲಕ್ಷಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಸರ್ಕಾರ ಈ ಕ್ಷೇತ್ರಕ್ಕೆ ನೀಡಿದ ಆಹಾರ ಪ್ಯಾಕೇಟ್ ಗಳು ಮಾತ್ರ ಕೇವಲ 3 ಸಾವಿರ. ಇದಕ್ಕೆ ದಾಖಲೆಗಳು ಬಿಬಿಎಂಪಿ ಕಾರ್ಮಿಕ ವಿಭಾಗದಲ್ಲಿ ಉಳಿದುಕೊಂಡಿದೆ.

4. ನಿಮಗೆ ನಿಜವಾಗಿ ಕಾಳಜಿ ಇದ್ದಿದ್ದರೆ, ನಮ್ಮ ರಾಜ್ಯ ಕಟ್ಟುತ್ತಿರುವ ಕಾರ್ಮಿಕರನ್ನು ಸರಿಯಾಗಿ ನೋಡಿಕೊಂಡಿದ್ದರೆ, ಅವರು ಇಂದು ತಮ್ಮ ಊರಿಗೆ ಮರಳುತ್ತಿರಲಿಲ್ಲ. ಈ ದೇಶಕ್ಕಾಗಿ ಬೆವರು, ರಕ್ತ ಹರಿಸಿದವರಿಗೆ ನೀವು ಅಪಮಾನ ಮಾಡಿದ್ದೀರಿ. ನೀವು ಲಾಕ್ ಡೌನ್ ಸಡಿಲ ಮಾಡಿದ ನಂತರ ರಾಜ್ಯದ ಪ್ರವಾಸ ಮಾಡುತ್ತೇನೆ. ಇದು ಪಕ್ಷದ ಕಾರ್ಯಕ್ರಮವಲ್ಲ. ನನ್ನ ಅಣ್ಣ ತಮ್ಮಂದಿರು, ನೊಂದು ಬೆಂದವರ ಕಣ್ಣೀರು ವರೆಗೆ ಸಾಂತ್ವಾನ ಹೇಳಲು ಹೋಗುತ್ತೇನೆ. ಎಲ್ಲ ವರ್ಗ, ಧರ್ಮದ ಜನರನ್ನು ಭೇಟಿ ಮಾಡಿ ಅವರ ಜತೆ ನಿಲ್ಲುತ್ತೇವೆ.

5. ನಮ್ಮ ಪಕ್ಷಕ್ಕೆ ಇತಿಹಾಸ, ಚರಿತ್ರೆ ಇದೆ. ಅಧಿಕಾರ, ರಾಜಕೀಯಕ್ಕೆ ಕಾರ್ಯಕ್ರಮ ಮಾಡುತ್ತಿಲ್ಲ. ಇದು ಮಾನವೀಯ ಸೇವೆ. ಅದಕ್ಕೆ ನಾನು ನಿಮ್ಮ ಸಹಕಾರವನ್ನು ಬೇಡುತ್ತೇನೆ. ಇಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಅನೇಕ ವಿಚಾರಗಳನ್ನು ಚರ್ಚಿಸಲಿದ್ದೇವೆ. ಪ್ರತಿ ಕ್ಷೇತ್ರ, ವಾರ್ಡ್ ನಲ್ಲಿ ಸಂಘಟನೆ ಮಾಡಬೇಕು ಎಂಬುದನ್ನು ಚರ್ಚಿಸುತ್ತೇವೆ.

6. ದೇಶ ಹಾಗೂ ರಾಜ್ಯದಲ್ಲಿ ಸೋಂಕು ಪ್ರಮಾಣ ಹೆಚ್ಚಲು ಕಾರಣ, ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸುತ್ತಿಲ್ಲ. ಸರ್ಕಾರ ಕೇವಲ ಯೂಟರ್ನ್ ನಿರ್ಧಾರಗಳನ್ನೇ ನೀಡುತ್ತಿವೆ. ಈ ಗೊಂದಲಗಳು ಈ ವೈಫಲ್ಯಕ್ಕೆ ಕಾರಣ. ನಾವು ರಾಜಕಾರಣ ಮಾಡಬಾರದು ಅಂತಾ ಸುಮ್ಮನಿದ್ದೇವೆ. ಈ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ.

7. ಸರ್ಕಾರ ಸರಿಯಾಗಿ ಮುಂದಾಲೋಚನೆ ಇಲ್ಲ, ಸಮನ್ವಯತೆ, ನಂಬಿಕೆ ಇಲ್ಲ. ಹೀಗಾಗಿ ಪರಿಣಾಮಕಾರಿ ಯೋಜನೆಗಳು ಇಲ್ಲದೆ ಸಮಸ್ಯೆ ಹೆಚ್ಚಾಗುತ್ತಿದೆ.

8. ಸರ್ಕಾರ ಈಗ ತೆಗೆದುಕೊಂಡಿರುವ ನರೇಗಾ ಹಾಗೂ ಇತರೆ ಉತ್ತಮ ನಿರ್ಧಾರಗಳನ್ನು ನಮ್ಮ ಪುಸ್ತಕದಿಂದಲೇ ತೆಗೆದುಕೊಂಡಿದ್ದಾರೆ. ಹೂವು, ಹಣ್ಣು, ತರಕಾರಿ ರೈತರಿಗೆ 6 ಸಾವಿರ ಕೊಡುತ್ತಾರೆ ಇದು ಯಾವ ರೀತಿಯ ಪರಿಹಾರ? ಸರ್ಕಾರಕ್ಕೆ ನಾಚಿಕೆಯಾಗಬೇಕು. ಯಾವ ಚಾಲಕನಿಗೆ, ಯಾವ ಕ್ಷೌರಿಕರಿಗೆ ಹಣ ಸಿಕ್ಕಿದೆ? ನಾವು ಅದಿಕಾರದಲ್ಲಿದ್ದರೆ ಇಷ್ಟು ಹೊತ್ತಿಗಾಗಲೇ ಜನರ ಮನೆ ಬಾಗಿಲಿಗೆ ಚೆಕ್ ತಲುಪುತಿತ್ತು.

9. ಈಗ ಹೇರಲಾಗಿರುವ ಲಾಕ್ ಡೌನ್ ಅವೈಜ್ಞಾನಿಕವಾಗಿದ್ದು, ಯಾವುದೇ ಸಾಮಾನ್ಯ ವ್ಯಕ್ತಿಯ ಅಭಿಪ್ರಾಯವನ್ನೂ ಪಡೆದಿಲ್ಲ. ಇದು ಸರ್ವಾಧಿಕಾರ ಧೋರಣೆ. ನಾವು ವಿಶೇಷ ಅಧಿವೇಶನ ಕರೆಯಲು ಮನವಿ ಮಾಡಿದೆವು. ಕರೆದು ಚರ್ಚಿಸಿದ್ದರೆ, ನಿಮಗೆ ನೆರವಾಗಲು ಆರ್ಥಿಕ ನಿರ್ಣಯಗಳಿಗೆ ಸಹಕಾರ ನೀಡುತ್ತಿದ್ದೆವು.

10. ಮಾರ್ಚ್ 11ರಂದು ನನ್ನನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಹೈಕಮಾಂಡ್ ನೇಮಕ ಮಾಡಿತು. ಅವತ್ತಿನಿಂದ ನನ್ನ ಕಾರ್ಯ ಪ್ರಾರಂಭಿಸಿದ್ದೇನೆ. ಸಾಂಕೇತಿಕವಾಗಿ ಧ್ವಜ ಬದಲಾಯಿಸುವುದು ಒಂದು ಪದ್ಧತಿ, ಸಂಪ್ರದಾಯ. ಈ ಕಾರ್ಯಕ್ಕೆ ಕೊರೋನಾ ಅಡ್ಡಿಯಾಯಿತು. ನಾನು ಸಾಂಕೇತಿಕವಾಗಿ ಅಧಿಕಾರ ಸ್ವೀಕರಿಸಿಲ್ಲಲ್ಲ ಎಂದು ಮನೆಯಲ್ಲಿ ಕೂರಲಿಲ್ಲ. ನಮ್ಮ ವಿರೋಧ ಪಕ್ಷದ ನಾಯಕರಿಂದ ಶಾಸಕರು, ನಾಯಕರು, ಕಾರ್ಯಕರ್ತರು ಎಲ್ಲರೂ ಸೇರಿ ನಮ್ಮ ಆರೋಗ್ಯವನ್ನು ಲೆಕ್ಕಿಸದೇ ರಸ್ತೆಗಿಳಿದು, ತೋಟಗಳಿಗೆ ಹೋಗಿ, ಅಧಿಕಾರಿಗಳ ಜತೆ ಚರ್ಚಿಸಿ, ಕಾಂಗ್ರೆಸ್ ಒಂದು ವಿರೋಧ ಪಕ್ಷವಾಗಿ ರಾಜ್ಯದಲ್ಲಿ ಯಾವ ರೀತಿ ಕೆಲಸ ಮಾಡಲು ಸಾಧ್ಯ ಎಂಬುದನ್ನು ತೋರಿಸಿದೆ. ಸಂಕಷ್ಟದ ಸಮಯದಲ್ಲಿ ಜನರ ಮಧ್ಯೆ ಇರಬೇಕು ಎಂಬುದು ನಮ್ಮ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಎಲ್ಲ ಕಾರ್ಯಕರ್ತರು, ಮುಖಂಡರು ತಮ್ಮ ಕ್ಷೇತ್ರದಲ್ಲಿ ಸರ್ಕಾರಕ್ಕಿಂತ ಹೆಚ್ಚಾಗಿ ಕೆಲಸ ಮಾಡಿದ್ದಾರೆ ಎಂಬುದಕ್ಕೆ ಮಾಧ್ಯಮಗಳು ಪ್ರಕಟಿಸಿರುವ ವರದಿಗಳೇ ಸಾಕ್ಷಿ.

11. ಅನೇಕ ಸಂಘ ಸಂಸ್ಥೆಗಳು, ಯಾವ ಅಧಿಕಾರವನ್ನು ಬಯಸದೇ ಮಾನವೀಯ ಸೇವೆಗೆ ಮುಂದಾಗಿವೆ. ಇವರಿಗೆ ಹಾಗೂ ನಮ್ಮ ಪಕ್ಷದ ಕಾರ್ಯಕರ್ತರು ಮುಖಂಡರಿಗೆ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.

12. ನನ್ನ ಕಾರ್ಯಕ್ರಮ ಕೇವಲ ಡಿಕೆ ಶಿವಕುಮಾರ್ ಕಾರ್ಯಕ್ರಮವಲ್ಲ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಕಾರ್ಯಕ್ರಮ. ಕೆಲವು ಮಾಧ್ಯಮಗಳಲ್ಲಿ ನಾನು ಇದೇ 31ರಂದು ಅಧಿಕಾರ ಸ್ವೀಕರಿಸುತ್ತೇನೆ ಎಂದು ಪ್ರಕಟಿಸಿದ್ದನ್ನು ನಾನು ನೋಡಿದ್ದೇನೆ. ನಾನು ಭಾನುವಾರದಂದು ಆ ಕಾರ್ಯಕ್ರಮ ನಡೆಸಿದರೆ ಸಾರಿಗೆ ಸೇರಿದಂತೆ ಇತರೆ ವಿಚಾರವಾಗಿ ಸಮಸ್ಯೆ ಆಗಬಾರದು ಎಂದು ಚರ್ಚಿಸಿದ್ದೆ. ಆದರೆ ಅಧಿಕೃತವಾಗಿ ಪ್ರಕಟಿಸಲಿಲ್ಲ.

13. ಆದರೆ ಪಾಪ ಯಡಿಯೂರಪ್ಪನವರು ಎಲ್ಲ ದಿನ ಕೆಲಸ ಮಾಡಬಹುದು, ಆದರೆ ಎಲ್ಲ ಭಾನುವಾರ ಮಾತ್ರ ಕರ್ಫ್ಯೂ ಜಾರಿ ಯಾವ ಕಾರ್ಯಕ್ರಮ ಮಾಡುವಂತಿಲ್ಲ ಎಂದು ಆದೇಶ ಮಾಡಿದ್ದಾರೆ. ನಾವು ಕಾನೂನು ಉಲ್ಲಂಘನೆ ಮಾಡಿ ಈ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ. ಕಾನೂನಿಗೆ ನಾವೆಲ್ಲರೂ ಗೌರವ ಕೊಡಬೇಕಾಗುತ್ತದೆ. ಹೀಗಾಗಿ 31ರಂದು ಈ ಕಾರ್ಯಕ್ರಮ ಮಾಡುವುದಿಲ್ಲ. ಲಾಕ್ ಡೌನ್ ತೆರವಾದ ನಂತರ ಒಂದು ದಿನ ನಾನು ಆ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ.

14. ಈ ಬಾರಿ ಒಂದು ವಿನೂತನ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೇವೆ. ಈ ಕಾರ್ಯಕ್ರಮದ ರೂಪುರೇಷೆ ತಿಳಿಸುತ್ತೇವೆ. ಪ್ರತಿ ಗ್ರಾಮ ಪಂಚಾಯ್ತಿ, ವಾರ್ಡ್ ನಲ್ಲಿ ಈ ಕಾರ್ಯಕ್ರಮ ನಡೆಸಲಾಗುವುದು. ನಾನು ಇಲ್ಲಿ ಧ್ವಜ ಸ್ವೀಕರಿಸಿ, ಜ್ಯೋತಿ ಹಚ್ಚಿದಾಗಿನಿಂದ ಪ್ರತಿ ಪಂಚಾಯ್ತಿ, ವಾರ್ಡ್ ನಲ್ಲಿ ಸುಮಾರು 7200 ಕಡೆಗಳಲ್ಲಿ ಈ ಕಾರ್ಯಕ್ರಮ ಮಾಡುತ್ತೇವೆ.

15. ಪ್ರತಿ ಕಡೆ ಎರಡು ಟಿವಿ ಇಟ್ಟು, ಮಾಧ್ಯಮಗಳ ಮನವಿ ಮಾಡಿ ಈ ಕಾರ್ಯಕ್ರಮ ನೇರಪ್ರಸಾರಕ್ಕೆ ಮಾಡಲಾಗುವುದು. ಈ ವೇಳೆ ಸಂವಿಧಾನದ ಪೀಠಿಕೆ ಓದಿ, ಪ್ರತಿಜ್ಞೆ ಸ್ವೀಕಾರ ಮಾಡಲಾಗುವುದು.

Related Articles

Comments (0)

Leave a Comment