ರಾಜ್ಯದಲ್ಲಿ ಮುಂದುವರೆದ ಕೊರೋನಾರ್ಭಟ!

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದು ವಾಣಿಜ್ಯ ಹಾಗೂ ಕೈಗಾರಿಕಾ ಚಟುವಟಿಕೆ ಪುನರಾರಂಭಗೊಳ್ಳುತ್ತಿದೆ. ಒಂದೆಡೆ ಜನಜೀವನ ಸಹಜಸ್ಥಿತಿಯತ್ತ ಮರಳುತ್ತಿದ್ದರೆ, ಮತ್ತೊಂದೆಡೆ ಕರೊನಾ ಅಟ್ಟಹಾಸ ಮುಂದುವರಿದೆ.

ಸೋಮವಾರ ಒಂದೇ ದಿನ ಕರ್ನಾಟಕದಲ್ಲಿ ಬರೋಬ್ಬರಿ 84 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಈವರೆಗೆ ದಿನವೊಂದರಲ್ಲಿ ವರದಿಯಾದ ಗರಿಷ್ಠ ಪ್ರಕರಣ ಎನಿಸಿದೆ. ಒಂದೇ ದಿನ 69 ಪ್ರಕರಣಗಳು ದೃಢಪಟ್ಟಿದ್ದು ಈ ಹಿಂದಿನ ದಾಖಲೆಯಾಗಿತ್ತು.

84 ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ ಗರಿಷ್ಟ 18, ಮಂಡ್ಯದಲ್ಲಿ 17, ಉತ್ತರ ಕನ್ನಡ 8, ಕಲಬುರಗಿ 6, ರಾಯಚೂರು 6, ವಿಜಯಪುರ 5, ಯಾದಗಿರಿ 5, ಗದಗ 5, ಹಾಸನ 4, ಕೊಪ್ಪಳ 3, ಬೆಳಗಾವಿ 2, ಬಳ್ಳಾರಿ, ದಾವಣಗೆರೆ, ಬೀದರ್, ಕೊಡಗು ಹಾಗೂ ಮೈಸೂರಿನಲ್ಲಿ ತಲಾ 1 ಪ್ರಕರಣಗಳು ಸೇರಿವೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,231ಕ್ಕೆ ಏರಿಕೆಯಾಗಿದೆ. ಸಂಜೆಯ ವೇಳೆಗೆ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

672 ಸಕ್ರಿಯ ಪ್ರಕರಣಗಳು:
1,231 ಸೋಂಕಿತರ ಪೈಕಿ 521 ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದರೆ, 37 ಮಂದಿ ಸಾವಿಗೀಡಾಗಿದ್ದಾರೆ. ಓರ್ವ ಸೋಂಕಿತ ವ್ಯಕ್ತಿ ಕೋವಿಡ್-19 ಅಲ್ಲದೆ ಅನ್ಯ ಕಾರಣದಿಂದ ಮೃತಪಟ್ಟಿದ್ದು, ಸದ್ಯ ರಾಜ್ಯದಲ್ಲಿ 672 ಸಕ್ರಿಯ ಪ್ರಕರಣಗಳಿವೆ.

ಗ್ರೀನ್ ಝೋನ್‌ನಲ್ಲಿ ಕಾಣಿಸಿಕೊಂಡ ಕೋವಿಡ್-19:
ಸೋಮವಾರ ದೃಢಪಟ್ಟ ಪ್ರಕರಣಗಳ ಪೈಕಿ ಕೆಲ ಪ್ರಕರಣಗಳು ಹಸಿರು ವಲಯದಲ್ಲಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಗ್ರೀನ್ ರೆನ್ ಜಿಲ್ಲೆಯಾಗಿದ್ದ ರಾಯಚೂರಿನಲ್ಲಿ ಒಂದೇ ದಿನ 6 ಕೇಸ್‌ಗಳು ದಾಖಲಾಗಿದ್ದು, ರೆಡ್ ಝೋನ್ ಆಗಿ ಪರಿವರ್ತನೆಗೊಂಡಿದೆ. ಆರೂ ಸೋಂಕಿತರು ಮುಂಬೈನಿಂದ ಬಂದವರಾಗಿದ್ದಾರೆ. ಕೊಪ್ಪಳದಲ್ಲೂ ಮೂರು ಪ್ರಕರಣಗಳ ದಾಖಲಾಗಿದ್ದು ಓರ್ವ ವ್ಯಕ್ತಿ ಚೆನ್ನೈ ಮತ್ತಿಬ್ಬರು ಮಹಾರಾಷ್ಟ್ರದ ನಂಟು ಹೊಂದಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಎಲ್ಲ 89 ರೋಗಿಗಳೂ ಗುಣಮುಕ್ತರಾಗಿದ್ದರಿಂದ ಕರೊನಾ ಮುಕ್ತ ಎನಿಸಿಕೊಂಡಿದ್ದ ಮೈಸೂರಿನಲ್ಲಿ ಸೋಮವಾರ ಮತ್ತೊಂದು ಪ್ರಕರಣ ದಾಖಲಾಗಿದ್ದು, ಜಿಲ್ಲೆಯ ಜನರಲ್ಲಿ ಮತ್ತೆ ಆತಂಕ ಸೃಷ್ಟಿಮಾಡಿದೆ.

Related Articles

Comments (0)

Leave a Comment