ಮೈತ್ರಿ ಸರ್ಕಾರ ಹೆಚ್ಚು ದಿನ ಉಳಿಯಲ್ಲ: ಅನಂತ್ ಕುಮಾರ್

ಬೆಂಗಳೂರು: 37 ಸ್ಥಾನ ಪಡೆದ ಪಕ್ಷ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದೆ. ಆದರೆ, ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಸರ್ಕಾರದಲ್ಲಿ ಸೃಷ್ಠಿಯಾಗಿರುವ ಸಂಪುಟ ಬಿಕ್ಕಟ್ಟು ಮತ್ತೊಂದು ರಾಜಕೀಯ ಪುನರ್ ಸಮೀಕರಣಕ್ಕೆ ದಾರಿ ಮಾಡಿಕೊಡಲಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ವಿಶ್ಲೇಷಿಸಿದ್ದಾರೆ.

ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಗೆ ಕೇಂದ್ರ ಸಚಿವ ಅನಂತ್ ಕುಮಾರ್‌ ತಮ್ಮ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಜೊತೆ ಬಂದು ವಿವಿ ಪುರಂನ ಲಾಲ್ ಬಾಗ್ ವೆಸ್ಟ್ ಗೇಟ್ ಬಳಿಯಿರುವ ಸರಸ್ವತಿ ವಿದ್ಯಾ ಮಂದಿರದಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಮತದಾನ ನಂತರ ಮಾತನಾಡಿದ ಅನಂತಕುಮಾರ್, ಇವತ್ತು ವಿಧಾನಪರಿಷತ್ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು. ನಾನೂ ಸಹಾ ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಮತ ಚಲಾವಣೆ ಮಾಡಿದ್ದೇನೆ. ನಮ್ಮ ಎಲ್ಲ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಗೆಲುವು ಪಡೆಯಲಿದ್ದಾರೆ‌ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ದಿಕ್ಕು ತಪ್ಪಿದ್ದು ಸರ್ಕಾರ ಅತಂತ್ರ ಪರಿಸ್ಥಿತಿಯಲ್ಲಿದೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ 25 ಸಚಿವರು ಸರ್ಕಾರ ರಚನೆ ಆದ ಮೇಲೂ ಖಾತೆ ರಹಿತರಾಗಿದ್ದಾರೆ. ಖಾತೆ ಹಂಚಿಕೆಯಲ್ಲಿ ಎರಡೂ ಪಕ್ಷಗಳಲ್ಲಿ ಬಿಕ್ಕಟ್ಟು ತಲೆದೋರಿದೆ. ಇದು ರಾಜ್ಯ ರಾಜಕೀಯದಲ್ಲಿ ಪುನರ್ ಸಮೀಕರಣಕ್ಕೆ ಕಾರಣವಾಗಲಿದೆ ಎಂದು ವಿಶ್ಲೇಷಿಸಿದರು. ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಎರಡೂ ಪಕ್ಷಗಳ ಶಾಸಕರಿಗೆ ಮತ್ತು ಕಾರ್ಯಕರ್ತರಿಗೆ ಇಷ್ಟವಿಲ್ಲ ಅಷ್ಟೇ ಅಲ್ಲ ಮೈತ್ರಿ ಸರಕಾರ ರಾಜ್ಯದ ಜನತೆಗೂ ಇಷ್ಟವಿಲ್ಲ ಎಂದರು.

ಮೊದಲ ಬಾರಿ ನಾವು ಅಧಿಕಾರ ಸ್ವೀಕಾರ ಮಾಡಿದಾಗಲೇ ನಮಗೆ ಬಹುಮತ ಬರಬೇಕಿತ್ತು, ಆದರೆ 37 ಸ್ಥಾನ ಪಡೆದ ಪಕ್ಷ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದೆ. ಇವರು ಎಷ್ಟು ದಿನ ಆಡಳಿತ ನಡೆಸುತ್ತಾರೋ ನಡೆಸಲಿ ಎಂದರು.

ಪ್ರಣಬ್ ಮುಖರ್ಜಿ ಒಬ್ಬ ಮುತ್ಸದ್ದಿ ರಾಜಕಾರಣಿ ಅವರು ನೆನ್ನೆ ಆರ್ ಎಸ್ ಎಸ್ ನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತಾಡಿದ್ದಾರೆ, 80 ವರ್ಷಗಳಿಂದ ದೇಶ ಸೇವೆ ಮಾಡುತ್ತಲೆ ಬಂದಿರುವ ಸಂಘಕ್ಕೆ ಒಂದು ಸಮರ್ಥನೆ ಸಿಕ್ಕಿಂತಾಗಿದೆ, ಪ್ರಣಬ್ ಮುಖರ್ಜಿ ಭಾಷಣ ಸಂಘವನ್ನು ಪ್ರೀತಿಸುವ, ಸಂಘವನ್ನು ವಿರೋಧಿಸುವವರಿಗೆ ಒಂದು ಸಂದೇಶ ರವಾನಿಸಿದೆ ಎಂದು ಅಭಿಪ್ರಾಯಪಟ್ಟರು.

Related Articles

Comments (0)

Leave a Comment