ಸಿದ್ದು ವಿರುದ್ಧ ಮುನಿಸಿಕೊಂಡ ಸಚಿವ ಸ್ಥಾನ ವಂಚಿತ ಶಾಸಕರು?

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರ ಬಂಡಾಯದ ಬಿಸಿ ಎದುರಾಗಿದೆ. ಇದೀಗ ಲಿಂಗಾಯತ – ವೀರಶೈವ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಎಂ.ಬಿ.ಪಾಟೀಲ್‌ಗೆ ಸಚಿವ ಸ್ಥಾನ ನೀಡದಿರುವುದು ಹಲವು ಶಾಸಕರ ಅಸಮಧಾನಕ್ಕೆ ಕಾರಣವಾಗಿದ್ದು ಬಂಡಾಯ ಶಾಸಕರು ಎಂ.ಬಿ.ಪಾಟೀಲ್ ನಿವಾಸದಲ್ಲಿ ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ.

ಸದಾಶಿವನಗರದಲ್ಲಿರುವ ಮಾಜಿ ಸಚಿವ ಎಂ.ಬಿ. ಪಾಟೀಲ್ ನಿವಾಸದಲ್ಲಿ ಸಭೆ ಸೇರಿರುವ ಸಚಿವ ಸ್ಥಾನ ವಂಚಿತ ಶಾಸಕರು ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೂ ಮುನಿಸಿಕೊಂಡಿದ್ದಾರೆ ಎನ್ನಲಾಗಿತ್ತಿದೆ.

ಎಂ.ಬಿ.ಪಾಟೀಲ್ ನಿವಾಸದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದ್ದು, ಸಚಿವ ಸ್ಥಾನ ಕೊಡಿಸುವ ಮಾತು ನೀಡಿದ್ದ ಸಿದ್ದರಾಮಯ್ಯ ಮಾತು ತಪ್ಪಿದ್ದಾರೆ. ಕಡೆಯ ಕ್ಷಣದಲ್ಲಿ ನಮ್ಮ ಕೈ ಬಿಟ್ಟಿದ್ದಾರೆ. ಪಕ್ಷದ ಮುಖಂಡರು, ಹೈಕಮಾಂಡ್ ಹಾಗೂ ಸಿದ್ದರಾಮಯ್ಯ ಎಲ್ಲರೂ ಕೈ ಕೊಟ್ಟಿದ್ದು ಇವರೆಲ್ಲರಿಗೂ ತಕ್ಕ ಪಾಠ ಕಲಿಸುವ ಬಗ್ಗೆ ಸಾಮೂಹಿಕ ನಿರ್ಧಾರ ಕೈಗೊಳ್ಳುವ ಚರ್ಚೆ ನಡೆದಿದೆ ಎನ್ನಲಾಗಿದೆ.

ಕಳೆದ ನಾಲ್ಕು ಗಂಟೆಯಿಂದ ಸಭೆ ಮುಂದುವರಿದಿದ್ದು, ಇನ್ನೂ ಒಂದೆರಡು ಗಂಟೆ ನಡೆಯುವ ನಿರೀಕ್ಷೆ ಹೊಂದಲಾಗಿದೆ. ಮುಂದಿನ ನಡೆ ಕೈಗೊಳ್ಳುವ ವಿಚಾರದಲ್ಲಿ ಈ ಸಭೆ ಮಹತ್ವದ್ದಾಗಿದ್ದು, ಸಿದ್ದರಾಮಯ್ಯ, ಹೈಕಮಾಂಡ್, ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ಶಾಕ್ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಅತೃಪ್ತರಮುಂದಿನ ನಿರ್ಧಾರ ಸಾಕಷ್ಟು ಕುತೂಹಲ ಮೂಡಿಸುತ್ತಿದೆ.
ಎಂಟಿಬಿ ನಾಗರಾಜ್ ಸಭೆಯಿಂದ ಒಮ್ಮೆ ಆಚೆ ಬಂದಿದ್ದು ಈ ಸಂದರ್ಭ ಮಾತನಾಡಿ, ಇನ್ನೂ ಎರಡು ದಿನ ಸಭೆ ನಡೆಯಲಿದೆ. ಸಾಕಷ್ಟು ವಿಚಾರ ಚರ್ಚೆ ಆಗುತ್ತಿದೆ. ಇನ್ನಷ್ಟು ಅತೃಪ್ತರು ನಮ್ಮನ್ನು ಸೇರಿಕೊಳ್ಳಲಿದ್ದಾರೆ. ಆಮೇಲೆ ಎಲ್ಲವನ್ನೂ ವಿವರಿಸುತ್ತೇವೆ ಎಂದಿದ್ದಾರೆ.
ಸಚಿವ ಸ್ಥಾನ ಪ್ರಭಲ ಆಕಾಂಕ್ಷಿಗಳಾದ ರೋಷನ್ ಬೇಗ್, ಸತೀಶ್ ಜಾರಕಿಹೊಳಿ, ಎಂಟಿಬಿ ನಾಗರಾಜ್, ಭೀಮಾ ನಾಯ್ಕ್, ಡಾ. ಕೆ. ಸುಧಾಕರ್ ಸೇರಿದಂತೆ ಹಲವು ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

Related Articles

Comments (0)

Leave a Comment