ಕಾಲಾ ಚಿತ್ರ ಬಿಡುಗಡೆಗೆ ವಿರೋಧ: ಸಿಲಿಕಾನ್ ಸಿಟಿಯಲ್ಲಿ ಪ್ರದರ್ಶನ ರದ್ದು
- by Suddi Team
- June 7, 2018
- 30 Views
ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಚಿತ್ರದ ಬಿಡುಗಡೆಗೆ ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಚಿತ್ರಮಂದಿರಗಳ ಮುಂದೆ ಸಂಘಟನೆಗಳ ಪ್ರತಿಭಟನೆಯಿಂದ ಪ್ರದರ್ಶನ ಆರಂಭಗೊಂಡಿಲ್ಲ.
ಕಾಲ ಚಿತ್ರದ ಬಿಡುಗಡೆಗೆ ಹೈಕೋರ್ಟ್ ಸಮ್ಮತಿ ನೀಡಿ ಭದ್ರತೆ ಒದಗಿಸುವಂತೆ ನಿರ್ದೇಶನ ನೀಡಿದ್ದ ಹಿನ್ನಲೆಯಲ್ಲಿ ಪೊಲೀಸರು ಚಿತ್ರಮಂದಿರಗಳಿಗೆ ಭದ್ರತೆ ಒದಗಿಸಿದ್ದಾರೆ. ಆದರೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಚಿತ್ರಮಂದಿರಗಳ ಮುಂದೆ ಜಮಾವಣೆಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೆ.ಜಿ ರಸ್ತೆಯ ಭೂಮಿಕ, ಲಾಲ್ ಬಾಗ್ ರಸ್ತೆಯ ಊರ್ವಶಿ ಸೇರಿದಂತೆ ಕಾಲಾ ಚಿತ್ರ ಬಿಡುಗಡೆಯಾಗಬೇಕಿದ್ದ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಇನ್ನೂ ಆರಂಭಗೊಂಡಿಲ್ಲ. ಕಾಲಾ ಚಿತ್ರ ಪ್ರದರ್ಶನಗೊಳ್ಳುವುದಿಲ್ಲ ಎನ್ನುವ ಫಲಕಗಳನ್ನು ಹಾಕಲಾಗಿದೆ. ಪೊಲೀಸ್ ಭದ್ರತೆ ಇದ್ದರೂ ಟಿಕೆಟ್ ನೀಡಲು ಹಿಂದೇಟು ಹಾಕಿದ ಚಿತ್ರಮಂದಿರಗಳ ವ್ಯವಸ್ಥಾಪಕರು ಚಿತ್ರ ಪ್ರದರ್ಶನ ಮಾಡುವುದರಿಂದ ದೂರ ಉಳಿದಿದ್ದಾರೆ.
ಇನ್ನು ಮಾಲ್ ಗಳಲ್ಲಿ ಚಿತ್ರ ಪ್ರದರ್ಶನ ಮಾಡಲಾಗುತ್ತದೆ ಎನ್ನುವ ಮಾಹಿತಿ ಹಿನ್ನಲೆಯಲ್ಲಿ ಮಂತ್ರಿ ಮಾಲ್ ಮುಂದೆ ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿನ್ನಲೆಯಲ್ಲಿ ಲಿಡೋ ಮಾಲ್ ನಲ್ಲಿ, ಆರ್ ಆರ್ ನಗರದ ಗೋಪಾಲನ್ ಮಾಲ್ ನಲ್ಲಿ ಕಾಲಾ ಚಿತ್ರದ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ಆದರೆ ಮಂತ್ರಿ ಮಾಲ್ ನಲ್ಲಿ ಮಾತ್ರ ಆನ್ ಲೈನ್ ಬುಕಿಂಗ್ ನಿಲ್ಲಿಸಿ ಥಿಯೇಟರ್ ಒಳಗೆ ಟಿಕೆಟ್ ನೀಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಮಾಲ್ ಒಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಹೋರಾಟಗಾರರನ್ನು ಬಂಧಿಸಿ ಕರೆದೊಯ್ದರು.
ಈ ವೇಳೆ ಮಾತನಾಡಿದ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ,ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಲಾ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ,ಕೋರ್ಟ್ ಆದೇಶದಂತೆ ಪೊಲೀಸರು ಚಿತ್ರಮಂದಿರಗಳಿಗೆ ಭದ್ರತೆ ಕಲ್ಪಿಸಿದ್ದಾರೆ,ಅವರ ಕೆಲಸ ಅವರು ಮಾಡಲಿ, ನಾವು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಲ್ಲ,ಆದರೆ ನಮ್ಮ ಹೋರಾಟ ಮುಂದುವರೆಸುತ್ತೇವೆ,ಚಿತ್ರದ ಪ್ರದರ್ಶನ ಆರಂಭಗೊಂಡರೆ ಗಂಟೆ ಗಂಟೆಗೂ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಮಗೆ ರಾಜಕೀಯ ಬೇಕಿಲ್ಲ, ರಜನಿಕಾಂತ್ ಕರ್ನಾಟಕ್ಕೆ ಬಂದು ಮಾತನಾಡಲಿ, ಅವರ ರಾಜ್ಯದ ಸಿಎಂ ನಮ್ಮ ರಾಜ್ಯಕ್ಕೆ ಬಂದು ನಮ್ಮ ರಾಜ್ಯದ ಸಿಎಂ ಜೊತೆ ಮಾತನಾಡಲಿ, ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು, ಕನ್ನಡಿಗರು, ತಮಿಳರು ಭಾರತಾಂಬೆಯ ಮಕ್ಕಳು, ನಮ್ಮನ್ನು ಕಚ್ಚಾಡುವಂತೆ ಮಾಡಬೇಡಿ, ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
Related Articles
Thank you for your comment. It is awaiting moderation.
Comments (0)