ಇನ್ನಾದರೂ ಬಿಜೆಪಿಯವರು ಕುದುರೆ ವ್ಯಾಪಾರ ನಿಲ್ಲಿಸಲಿ: ವೇಣುಗೋಪಾಲ್
- by Suddi Team
- November 6, 2018
- 38 Views

ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ರಾಜ್ಯದಲ್ಲಿ ಅಸ್ಥಿರ ಗೊಳಿಸಲು ನಿರಂತರ ಯತ್ನ ಮಾಡುತ್ತಿರುವ ಬಿಜೆಪಿಗೆ ಈ ಫಲಿತಾಂಶ ಜನರು ನೀಡಿದ ಉತ್ತರವಾಗಿದೆ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯ ಸರ್ಕಾರ ಅಸ್ಥಿರ ಗೊಳಿಸಲು ಕಳೆದ ನಾಲ್ಕೈದು ತಿಂಗಳಿಂದ ಬಿಜೆಪಿ ಯತ್ನಿಸುತ್ತಿದೆ. ಕುದುರೆ ವ್ಯಾಪಾರ ಮಾಡುತ್ತಲೇ ಬಂದಿದೆ. ಇದನ್ನು ಜನ ಒಪ್ಪಿಲ್ಲ ಅನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಸೆಮಿಫೈನಲ್ ಗೆಲುವು
ನಾವು ಸೆಮಿಫೈನಲ್ಸ್ ಗೆದ್ದಿದ್ದೇವೆ. ಮುಂದಿನ ಲೋಕಸಭೆ ಚುನಾವಣೆಗೆ ದೇಶದ ಸ್ಥಿತಿ ಏನಿರಲಿದೆ ಎಂದು ಕರ್ನಾಟಕದ ಮತದಾರರು ತೋರಿಸಿಕೊಟ್ಟಿದ್ದಾರೆ. ಲೋಕಸಭೆ ಚುನಾವಣೆ ಇದೇ ರೂಪದಲ್ಲಿ ಗೆಲುವು ಸಿಗಲಿದೆ ಎಂಬ ವಿಶ್ವಾಸ ಇದೆ. ಸೆಮಿಫೈನಲ್ಸ್ ಗೆದ್ದಿದ್ದೇವೆ, ಫೈನಲ್ ಕೂಡ ಗೆಲ್ಲುತ್ತೇವೆ ಎಂದರು.
ಐದೂ ಗೆದ್ದಿದ್ದೇವೆ
ಡಿಸಿಎಂ ಡಾ. ಜಿ. ಪರಮೇಶ್ವರ್ ಮಾತನಾಡಿ, ಶಿವಮೊಗ್ಗದಲ್ಲಿ ಬಿಜೆಪಿ ಗೆಲುವು ಮೂರು ಲಕ್ಷದಿಂದ 50 ಸಾವಿರಕ್ಕೆ ಇಳಿದಿದೆ. ನೈತಿಕವಾಗಿ ನಾವು ಇಲ್ಲಿಯೂ ಗೆದ್ದಿದ್ದೇವೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಮತ್ತೆ ಭದ್ರವಾಗಿದೆ. ಜಮಖಂಡಿಯಲ್ಲಿ ಗೆಲುವಿನ ಅಂತರ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದೂ ಸಾಧನೆ. ಬಿಜೆಪಿಗೆ ಮುಖಭಂಗವಾಗಿದೆ. ಮೈತ್ರಿ ಸರ್ಕಾರಕ್ಕೆ ಮತದಾರರು ಸಮ್ಮತಿಯ ಮುದ್ರೆ ಒತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಗೆ ರಾಜ್ಯದ ಮತದಾರ ಉತ್ತರ ಕೊಟ್ಟಿದ್ದಾನೆ. ನಾವು ಸಮ್ಮಿಶ್ರ ಸರ್ಕಾರ ಒಟ್ಟಾಗಿ ಕೇಂದ್ರದಲ್ಲಿ ಕೂಡ ಅಧಿಕಾರ ನಡೆಸಲು ಸೂಕ್ತ ಎಂಬ ಉತ್ತರ ಸಿಕ್ಕಿದೆ. 28 ಕ್ಷೇತ್ರದಲ್ಲಿ ಕೂಡ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಶ್ರಮಿಸುತ್ತೇವೆ. ಸಫಲತೆ ಸಿಗಲಿದೆ ಎಂಬ ವಿಶ್ವಾಸ ಇದೆ. ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದಾರೆ. ಮತದಾರರು ಉತ್ತಮ ಫಲಿತಾಂಶ ತೋರಿಸಿ ಸಮ್ಮಿಶ್ರ ಸರ್ಕಾರಕ್ಕೆ ಒಲವು ತೋರಿಸಿದ್ದಾರೆ ಎಂದರು.
ಇನ್ನಷ್ಟು ಅಂತರದ ಸೋಲಾಗಲಿದೆ
ಒಗ್ಗಟ್ಟಿನ ಪ್ರಯತ್ನಕ್ಕೆ ಗೆಲುವಾಗಿದೆ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ನೀವು ನಕಾರಾತ್ಮಕ ರಾಜಕಾರಣ ಬಿಡಿ, ಜವಾಬ್ದಾರಿಯುತ ಪಕ್ಷವಾಗಿ ಮುಂದುವರಿಯಿರಿ. ಇದು ನಿಮಗೆ ಪಾಠ. ಇದೇ ರೀತಿ ಮುಂದುವರಿದರೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇನ್ನಷ್ಟು ಅಂತರದ ಸೋಲಾಗಲಿದೆ.
ಸಾಲಮನ್ನಾ ವಿಚಾರ ಸೇರಿದಂತೆ ಅನೇಕ ವಿಚಾರದಲ್ಲಿ ಬಿಜೆಪಿ ಪಕ್ಷವು ಸಮ್ಮಿಶ್ರ ಸರ್ಕಾರದ ವಿರುದ್ಧ ಕಾರ್ಯನಿರ್ವಹಿಸುತ್ತಾ ಬಂದಿದೆ. ನಾವು ಒಟ್ಟಾಗಿ ಶ್ರಮಿಸಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇವೆ. ಹೈಕಮಾಂಡ್ ಮಾರ್ಗದರ್ಶನದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದ್ದೇವೆ. ರಾಜ್ಯದ ಐದು ಕ್ಷೇತ್ರದ ಮತದಾರರು, ದೇಶಕ್ಕೆ ಸಂದೇಶ ನೀಡಿದ್ದಾರೆ. ಮೋದಿ ಸರ್ಕಾರ ಮುಂದಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಮೋದಿ ಹೊಗಳುವ ಕಾರ್ಯ ಆಗುತ್ತಿದೆ. ಅವರ ಸಾಧನೆ ಏನೆಂದು ಎಲ್ಲೂ ಹೇಳುತ್ತಿಲ್ಲ. ಇಂದಿನ ಫಲಿತಾಂಶ ಭಾಷಣಕ್ಕೆ ಬೆಲೆ ಇಲ್ಲ ಅನ್ನುವುದನ್ನು ತೋರಿಸುತ್ತಿದೆ. ಬಿಜೆಪಿ ಜನವಿರೋಧಿ ನೀತಿ, ಮೋದಿ ಆಡಳೊತವನ್ನು ಪ್ರಶ್ನಿಸಿದೆ. ಇಂದಿನ ಫಲಿತಾಂಶ ಮುಂದಿನ ಐದು ರಾಜ್ಯ, 2019 ರ ಲೋಕಸಭೆ ಚುನಾವಣೆಯ ದಿಕ್ಸೂಚಿಯಾಗಿದೆ. ಜನ ಬಿಜೆಪಿ ಸರ್ವಾಧಿಕಾರ ಒಪ್ಪಿಲ್ಲ ಅನ್ನುವುದನ್ನು ತೋರಿಸಿದೆ ಎಂದರು.
Related Articles
Thank you for your comment. It is awaiting moderation.
Comments (0)