ಎಂ.ಪಿ ಪ್ರಕಾಶ್ ಪುತ್ರ ಎಂ.ಪಿ ರವೀಂದ್ರ ನಡೆದು ಬಂದ ಹಾದಿ

ಹರಪನಹಳ್ಳಿ : ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ ಅವರ ಏಕೈಕ ಪುತ್ರ ಮಾಜಿ ಶಾಸಕ ಎಂ.ಪಿ.ರವೀಂದ್ರ ಅನಾರೋಗ್ಯದಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

೪೯ ವರ್ಷ ವಯಸ್ಸಿನ ಎಂ.ಪಿ.ರವೀಂದ್ರ ಅವರು ದಿನಾಂಕ ೫-೪-೧೯೬೯ರಂದು ಜನಿಸಿದ್ದರು. ಅವರಿಗೆ ತಾಯಿ ಎಂ.ಪಿ.ರುದ್ರಾಂಬ, ಮೂವರು ಸಹೋದರಿಯರು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿ, ಇಂಜಿನಿಯರಿಂಗ್ ಪದವಿ ಅಪೂರ್ಣಗೊಳಿಸಿದ್ದಾರೆ.

ಮೂಲತಃ ಸ್ವಾತಂತ್ರ್ಯ ಹೋರಾಟ, ರಾಜಕೀಯ ಕುಟುಂಬದಲ್ಲಿ ಜನಿಸಿದ್ದರು. ತಂದೆ ಎಂ.ಪಿ.ಪ್ರಕಾಶ್‌ರು ಕುಟುಂಬ ಸಮೇತರಾಗಿ ನಾರಾಯಣದೇವರ ಕೆರೆ ಗ್ರಾಮ ತೊರೆದು, ವಕೀಲಿ ವೃತ್ತಿ ಹರಸಿ ಹಡಗಲಿಗೆ ಬಂದು ನೆಲೆಸುವ ಮೂಲಕ ಜನಪ್ರಿಯತೆಗಳಿಸಿ ರಾಜಕೀಯ ಪ್ರವೇಶಿಸಿದ್ದರು. ಸರಳ ಸಜ್ಜನ ರಾಜಕಾರಣಕ್ಕೆ ಹೆಸರಾಗಿದ್ದ ದಿ.ಎಂ.ಪಿ.ಪ್ರಕಾಶ್‌ರ ಏಕೈಕ ಪುತ್ರ ರವೀಂದ್ರ.
ತಂದೆ ಪ್ರಕಾಶ್‌ರ ರಾಜಕೀಯ ರಂಗದಲ್ಲಿ ಅಜಾತಶತ್ರು ಆಗಿದ್ದರು. ಅವರ ಹಾದಿಯಲ್ಲಿ ಮುನ್ನಡದೇ ಮಗ ರವೀಂದ್ರ ತಮ್ಮ ತಂದೆ ಕಾಲದಲ್ಲಿ ನಡೆದ ಚುನಾವಣೆಗಳಲ್ಲಿ ತೆರೆಯ ಹಿಂದೆ ಸಾಕಷ್ಟು ಪರಿಶ್ರಮಪಡುತ್ತಿದ್ದರು.

೧೯೮೩, ೧೯೮೫, ೧೯೯೪, ೨೦೦೪ರ ಚುನಾವಣೆಗಳಲ್ಲೂ ತಂದೆ ಪ್ರತಿನಿಧಿಸುತ್ತಿದ್ದ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ಕ್ಷೇತ್ರದಲ್ಲಿ ಸಕ್ರೀಯ ರಾಜಕಾರಣಿಯಾಗಿ ಜನರೊಟ್ಟಿಗೆ ಕೆಲಸ ಮಾಡಿದ್ದರು. ಹೊಸಪೇಟೆಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ ಸತತ ೪ ಬಾರಿ ಅಧ್ಯಕ್ಷರಾಗಿದ್ದರು. ಐದನೇ ಬಾರಿಯು ಅಧ್ಯಕ್ಷರಾಗಲಿದ್ದರು. ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದರು. ೨೦೧೩ರಲ್ಲಿ ಹರಪನಹಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.

ಅಭಿಮಾನಿಗಳ ಒತ್ತಾಸೆಯಿಂದ ಹಡಗಲಿ ತಾಲೂಕು ಉತ್ತಂಗಿ ಹಾಲು ಉತ್ಪಾದಕರ ಒಕ್ಕೂಟದಿಂದ ಚುನಾಯಿತರಾಗಿ, ಆ ಮೂಲಕ ೨೦೧೭ರಲ್ಲಿ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೂ ತೀವ್ರ ಪೈಪೋಟಿ ನಡೆಸಿದ್ದರು, ಆದರೆ ಅದೃಷ್ಟವಶಾತ್ ಅವರಿಗೆ ಅವಕಾಶ ಸಿಗಲಿಲ್ಲ.

೨೦೧೭, ನವಂಬರ್ ೨೬ರಂದು ದುಬಾರಿ ಚುನಾವಣೆಯಿಂದ ಬೇಸತ್ತು ಹರಪನಹಳ್ಳಿಯಲ್ಲಿ ರಾಜಕೀಯ ನಿವೃತ್ತಿ ಘೋಷಿಸಿ, ಕೆಲ ದಿನಗಳಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ನಂತರ ಸಿಂಗಾಪುರ್‌ಗೆ ತೆರಳಿ ಚಿಕಿತ್ಸೆ ಪಡೆದು, ಗುಣಮುಖರಾಗಿ ತವರಿಗೆ ಮರಳಿದ್ದರು.
ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಿವೃತ್ತಿ ನಿರ್ಧಾರ ಹಿಂಪಡೆದು ೨೦೧೮ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಸಾಯಿ ಡೆವಲಪ್ಪರ‍್ಸ್, ಹುಬ್ಬಳ್ಳಿ ಕೈಜಾರ್ ಎಜುಕೇಷನ್, ಆರ್.ಜಿ.ಮಿನರಲ್ಸ್ ಸೇರಿದಂತೆ ಅನೇಕ ಕಂಪನಿಗಳಲ್ಲಿ ಷೇರು ಹೂಡಿಕೆ ಮಾಡಿದ್ದಾರೆ. ರಂಗಭೂಮಿ, ಚಿತ್ರರಂಗದಂತಹ ಸಾಂಸ್ಕೃತಿಕ ಕ್ಷೇತ್ರದಲ್ಲೂ ನಂಟು ಬೆಳೆಸಿಕೊಂಡಿದ್ದರು. ನಟ ಅಂಬರೀಷ್, ಶ್ರೀನಗರ ಕಿಟ್ಟಿ ಅವರ ಒಡನಾಟದಲ್ಲಿದ್ದರು.
ಶಾಸಕರಾಗಿದ್ದಾಗ ಅವರ ಕನಸಿನ ಕೂಸಾಗಿದ್ದ ದಾವಣಗೆರೆ ಜಿಲ್ಲೆಯಲ್ಲಿದ್ದ ಹಿಂದುಳಿದ ಹರಪನಹಳ್ಳಿ ತಾಲೂಕು ಪುನಃ ಬಳ್ಳಾರಿಗೆ ಸೇರಿಸುವ ಹೋರಾಟದಲ್ಲಿ ಯಶಸ್ವಿಯಾಗಿದ್ದರು. ಕ್ಷೇತ್ರದಲ್ಲಿ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ೫೧.೪೮ ಕೋಟಿ ವೆಚ್ಚದ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೆಜ್ ಯೋಜನೆ, ರೂ.೨೨೭ ಕೋಟಿ ವೆಚ್ಚದ ೬೦ ಕೆರೆಗಳಿಗೆ ನೀರು ತುಂಗಭದ್ರ ನದಿನೀರು ತುಂಬಿಸುವ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸಫಲರಾಗಿದ್ದರು. ಐತಿಹಾಸಿಕ ಮಹತ್ವ ಪಡೆದಿದ್ದ ಮಹಾತ್ಮಗಾಂಧೀಜಿ ತಂಗಿದ್ದ ಕೊಠಡಿ ಸ್ಮಾರಕವಾಗಿಸಿ ಪ್ರವಾಸಿ ತಾಣವಾಗಿಸಿದ್ದಾರೆ.

ಚಿಗಟೇರಿ ಪೊಲೀಸ್ ಠಾಣೆ ಕಟ್ಟಡ, ಭೀಮವ್ವ ಸಸ್ಯೋಧ್ಯಾನವನ (ಟ್ರೀಪಾರ್ಕ್), ದೇವರಾಜು ಅರಸು ಭವನ, ಶಿಲ್ಪಕಲೆ ನಿರ್ಮಾಣ, ಪ್ರತಿ ಹಳ್ಳಿಯಲ್ಲೂ ಶುದ್ದ ಕುಡಿಯುವ ನೀರಿನ ಘಟಕಗಳು, ಸಿಮೆಂಟ್ ರಸ್ತೆಯಂತಹ ಜನಪ್ರಿಯ ಕೆಲಸಗಳನ್ನು ಮಾಡಿದ್ದಾತೆ. ತಂದೆಗೆ ತಕ್ಕ ಮಗನಾಗಿ ಕಲಾ ಪೋಷಕರಾಗಿ ಹಡಗಲಿ ರಂಗಭಾರತಿ, ಹರಪನಹಳ್ಳಿ ಕಲಾಭಾರತಿ ಸಾಂಸ್ಕೃತಿಕ ಸಂಸ್ಥೆಗಳನ್ನು ಮುನ್ನಡೆಸುವಲ್ಲಿ ಸದಾ ಕ್ರಿಯಾಶೀಲರಾಗಿದ್ದ ಮಾಜಿ ಶಾಸಕ ಎಂ.ಪಿ.ರವೀಂದ್ರ ಇಂದು ನಮ್ಮೊಂದಿಗಿಲ್ಲ.

Related Articles

Comments (0)

Leave a Comment