ರೆಡ್ಡಿ ವಿರುದ್ಧ ಸಮರ ಸಾರಿದ ಕೈ ನಾಯಕರು: ನಾಳೆ ಭೂ ಅಕ್ರಮದ ಕುರಿತು ಡಿಕೆಶಿಯಿಂದ ದಾಖಲೆ ಬಿಡುಗಡೆ!

ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲು ಸೇರಿದ್ದ ಗಾಲಿ ಜನಾರ್ದನ ರೆಡ್ಡಿ, ನಿನ್ನೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಗನ ಸಾವಿನ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಅದಕ್ಕೆ ತಕ್ಕ ಉತ್ತರ ನೀಡಲು ಮುಂದಾಗಿದ್ದಾರೆ.

ಕಳೆದ ಒಂದೂವರೆ ವರ್ಷದ ಹಿಂದೆ ಮಾಜಿ ಸಿಎಂ ಸಿದ್ಧರಾಮಯ್ಯ ಪುತ್ರ ಅನಾರೋಗ್ಯದಿಂದ ಸಾವನ್ನಿಪ್ಪಿದ್ದರು. ಈ ಕುರಿತು ನಿನ್ನೆ ಮಾತನಾಡಿದ್ದ ಜನಾರ್ದನ ರೆಡ್ಡಿ ನನ್ನ ಕುಟುಂಬದಿಂದ ನನ್ನನ್ನು ದೂರ ಮಾಡಿದ್ದಕ್ಕೆ ಸಿದ್ಧರಾಮಯ್ಯ ತಮ್ಮ ಪುತ್ರನನ್ನು ಕಳೆದುಕೊಂಡಿದ್ದಾರೆ ಎನ್ನುವ ಮೂಲಕ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಜನಾರ್ದನ ರೆಡ್ಡಿ ಯಾಕೆ ಜೈಲು ಸೇರಿದರು ಎಂಬುದನ್ನು ಜನರಿಗೆ ತಿಳಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

ಮಾಜಿ‌ ಸಚಿವ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ರೂಪಿಸಿದೆ. ಇದಕ್ಕಾಗಿ ಇಬ್ಬರ ವಿರುದ್ಧ ಬಳ್ಳಾರಿ ನೆಲದಲ್ಲೇ ಅಕ್ರಮಗಳ ದಾಖಲೆ ಬಿಡುಗಡೆಗೆ ಕೈ ಪಡೆ ಸನ್ನದ್ಧವಾಗಿದೆ. ಉಪ ಚುನಾವಣಾ ಪ್ರಚಾರದ ಭರಾಟೆಯ ನಡುವೆ ಸದ್ದಿಲ್ಲದೆ ಗಣಿಧಣಿಗಳ ವಿರುದ್ಧ ಭಾರೀ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ.

ಗಣಿ ದಣಿಗಳ ವಿರುದ್ಧದ ಭೂ ಅಕ್ರಮದ ದಾಖಲೆಗಳ ಬಿಡುಗಡೆಗೆ ಪ್ಲಾನ್ ಮಾಡಿದ್ದು, ನಾಳೆ ಬಳ್ಳಾರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಲು ಸಚಿವ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದಾರೆ. ಬಳ್ಳಾರಿ ಗಡಿ ಭಾಗದಲ್ಲಿ ನಿಯಮ ಬಾಹಿರವಾಗಿ ಭೂಕಬಳಿಕೆ ಮಾಡಿದ ದಾಖಲೆ. ಭೂಅಕ್ರಮದ ಸಂದರ್ಭದಲ್ಲಿ ಮಾತುಕತೆ ನಡೆದ ಕುರಿತಾದ ಆಡಿಯೋ ಸಿಡಿ ಬಿಡುಗಡೆ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದು ತಿಳಿದುಬಂದಿದೆ.

ಇಬ್ಬರೂ ನಾಯಕರ ಅಕ್ರಮದ ದಾಖಲೆಗಳನ್ನು ಬಿಡಿಗಡೆ ಮಾಡಿದರೂ ಕೂಡ ಕೇವಲ ಜನಾರ್ದನ ರೆಡ್ಡಿ ಕುರಿತು ಮಾತ್ರ ವಾಗ್ದಾಳಿ ನಡೆಸಲು ಕೈ ನಾಯಕರು ನಿರ್ಧರಿಸಿದ್ದಾರೆ. ಶ್ರೀರಾಮುಲು ಕುರಿತು ಯಾವುದೇ ಆಕ್ಷೇಪಾರ್ಹ ಪದ ಪ್ರಯೋಗ ಮಾಡದಿರಲು ಪ್ಲಾನ್ ಮಾಡಿದ್ದು. ಬಳ್ಳಾರಿಗೆ ಬಂದು ರಾಮುಲು ವಿರುದ್ಧ ವಾಗ್ದಾಳಿ ಮಾಡಿದರು ಎನ್ನುವ ಸಂದೇಶ ರವಾನೆಯಾಗುವ ಸಾದ್ಯತೆ ಇದೆ ಇದರಿಂದ ಕೈ ಅಭ್ಯರ್ಥಿಗೆ ಹಿನ್ನಡೆಯಾಗಿ ರಾಮುಲುಗೆ ಲಾಭವಾಗುವ ಸಾಧ್ಯತೆ ಇದೆ. ಆದ್ದರಿಂದ ಜನಾರ್ದನ ರೆಡ್ಡಿ ಆಕ್ಷೇಪಾರ್ಹ ಹೇಳಿಕೆಯಿಂದ ಕಾಂಗ್ರೆಸ್ ಪರವಾದ ಅಭಿಪ್ರಾಯ ವ್ಯಕ್ತವಾಗಿರೋ ಹಿನ್ನೆಲೆಯಲ್ಲಿ ಈ ನಿಲುವು ತಳೆಯಲಾಗಿದೆ.

ಒಟ್ಟಾರೆಯಾಗಿ ಜನರ ಭಾವನೆಯನ್ನು ಮತಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಲು ಮುಂದಾಗಿರುವ ಡಿ.ಕೆ.ಶಿವಕುಮಾರ್ ಇದೇ ಕಾರಣಕ್ಕೆ ಜನಾರ್ದನ ರೆಡ್ಡಿ ವಿರುದ್ಧದ ವಾಗ್ದಾಳಿಗೆ ಮಾತ್ರ ನಾಳಿನ ಪತ್ರಿಕಾಗೋಷ್ಠಿ ಸೀಮಿತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ನಾಳೆ ನಡೆಯುವ ಸಚಿವ ಡಿ.ಕೆ.ಶಿವಕುಮಾರ್ ಪತ್ರಿಕಾಗೋಷ್ಠಿಯತ್ತ ಇದೀಗ ಕುತೂಹಲ ಹೆಚ್ಚಾಗಿದ್ದು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.

Related Articles

Comments (0)

Leave a Comment