ಇನ್ಫೋಸಿಸ್ ಸಂಸ್ಥೆಯಿಂದ ರಾಜ್ಯಕ್ಕೆ ಮತ್ತೊಂದು ಕೊಡುಗೆ: ಸೈಬರ್ ಕ್ರೈಂ ಪತ್ತೆಗೆ ಹೊಸ ತಂತ್ರಜ್ಞಾನ!

ಬೆಂಗಳೂರು: ಕಾರ್ಪೋರೇಟ್ ಕಂಪನಿಗಳು ಸಾಮಾಜಿಕ ಕಾರ್ಯಗಳಲ್ಲಿ ಸರ್ಕಾರದೊಂದಿಗೆ ಯಾವ ರೀತಿ ಕೈಜೋಡಿಸಬಹುದು ಎಂಬುದಕ್ಕೆ ಇನ್ಫೋಸಿಸ್ ಸಂಸ್ಥೆ ಎಲ್ಲರಿಗೂ ಒಂದು ಮಾದರಿಯಾಗಿದೆ ಎಂದು ಡಿಸಿಎಂ ಪರಮೇಶ್ವರ್ ಅಭಿಪ್ರಾಯ ಪಟ್ಟರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೈಬರ್ ಲ್ಯಾಬ್ ನಿರ್ಮಾಣ ಸಂಬಂಧ ಒಪ್ಪಂದಕ್ಕೆ ಗೃಹಸಚಿವರೂ ಆಗಿರುವ ಡಿಸಿಎಂ ಪರಮೇಶ್ವರ್ ಸಮ್ಮುಖದಲ್ಲಿ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಸಹಿ ಹಾಕಿದರು.

ಈ ವೇಳೆ ಮಾತನಾಡಿದ ಪರಮೇಶ್ವರ್, ಸರಕಾರ ಎಲ್ಲವನ್ನೂ ಮಾಡಲು ಸಾಧ್ಯವಾಗುವುದಿಲ್ ಲ.‌ಅನೇಕ ಕಡೆಯಿಂದ ಸಹಾಯ ಹಸ್ತ ಬೇಕಿದೆ. ಪೊಲೀಸ್ ಇಲಾಖೆಗೆ ಹೆಚ್ಚು ಸಹಾಯ ಸಿಗುತ್ತಿಲ್ಲ.‌ ಆಯವ್ಯಯದಲ್ಲೂ‌ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಪೊಲೀಸರು ರಾಜ್ಯದಲ್ಲಿ ಕಾನೂನು‌ ಸುವ್ಯವಸ್ಥೆ ಕಾಪಾಡಲು ಇನ್ನೂ ಪ್ರೋತ್ಸಾಹ ಸಿಗಬೇಕು. ಹೀಗಾಗಿ ಪೊಲೀಸ್ ಗೃಹ ಯೋಜನೆಯಡಿ ಮನೆ ಕಟ್ಟುವ ಕೆಲಸ ಶುರು ಮಾಡಿ ಮೂರನೇ ಹಂತಕ್ಕೆ ತಲುಪಿದ್ದೇವೆ.
ಎಫ್ ಐಆರ್ ದಾಖಲಾತಿ ಸೇರಿದಂತೆ ಪೊಲೀಸ್ ಇಲಾಖೆ ಸಂಪೂರ್ಣ ಆನ್‌ಲೈನ್ ತರುವ ಕೆಲಸ ಮಾಡಲಾಗುತ್ತಿದೆ. ಕರ್ನಾಟಕ ಪೊಲೀಸ್ ಇಡೀ‌ದೇಶಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಮುಂದೆ ನುಗ್ಗುತ್ತಿದೆ ಎಂದರು.

ಇನ್‌ಫೋಸಿಸ್‌ನಿಂದ ಸೈಬರ್ ಲ್ಯಾಬ್ ತರಬೇತಿ ಕೇಂದ್ರ ನಿರ್ಮಿಸಿ ಕೊಡಲಾಗುತ್ತಿದೆ.‌ ಇದಕ್ಕೆ ತಾಂತ್ರಿಕ ಪರಿಣಿತರ ಅಗತ್ಯವಿದ್ದು, ಪರಿಣಿತರು ಮುಂದೆ ಬರಬೇಕು. ಸೈಬರ್ ಸಂಬಂಧ ಹೆಚ್ಚುವ ಕ್ರೈಂ ತಡೆಯಲು ತಾಂತ್ರಿಕ ತರಬೇತಿ ಅತೀ ಅವಶ್ಯಕ. ಹೀಗಾಗಿ ಬೇರೆ ದೇಶದಿಂದಲೂ ಪರಿಣಿತರನ್ನು ಕರೆಸಿ ತರಬೇತಿ ಕೊಡಿಸಲಾಗುವುದು ಎಂದು ಹೇಳಿದರು.

ಇನ್‌ಫೋಸಿಸ್ ನಿರ್ಮಿಸುವ ತರಬೇತಿ ಕೇಂದ್ರ 22 ಕೋಟಿ ರೂಪಾಯಿ ವೆಚ್ಚ ತಗುಲಲಿದ್ದು, ಕೆಲವೇ ತಿಂಗಳಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿದರು.

Related Articles

Comments (0)

Leave a Comment