ಭಾರತ್ ಬಂದ್‌ಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ!

ಬೆಂಗಳೂರು: ಪೆಟ್ರೋಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್‌ಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದಾದ್ಯಂತ ಸಾರಿಗೆ ವ್ಯವಸ್ಥೆ ಬಹುತೇಕ ಸ್ತಬ್ಧವಾಗಿದ್ದು, ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿವೆ.

ಕಳೆದ ನಾಲ್ಕು ವರ್ಷದಲ್ಲಿ ಪೆಟ್ರೋಲ್, ಡೀಸೆಲ್‌ ಬೆಲೆ 80 ರೂಪಾಯಿ ಗಡಿ ದಾಟಿದೆ. ತೈಲ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಭಾರತ್ ಬಂದ್‌ಗೆ ಕರೆ ನೀಡಿತ್ತು. ಬಂದ್‌ಗೆ ಹಲವು ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಿದ್ದು, ಕೆಲವು ಸಂಘಟನೆಗಳು ನೈತಿಕ ಬೆಂಬಲ ನೀಡಿವೆ.

ಏರ್‌ಪೋರ್ಟ್ ಗೆ ಹೊಗುತ್ತಿದ್ದವರಿಗೆ ಬಂದ್ ಬಿಸಿ: ಎಸ್ಟೀಮ್‌ ಮಾಲ್ ಬಳಿ ಚಾಲಕರ ಒಕ್ಕೂಟ ರಸ್ತೆಗೆ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸುವ ಮೂಲಕ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ನಾಲ್ಕೈದು ಕಿ.ಮೀ. ಟ್ರಾಫಿಕ್ ‌ಜಾಂ ಉಂಟಾಯಿತು‌. ಇದರಿಂದ ಏರ್ ಪೋರ್ಟ್ ಗೆ ಹೋಗುವವರಿಗೆ ಬಂದ್ ಬಿಸಿ ತಟ್ಟಿದೆ‌

ಬಿಕೋ ಎನ್ನುತ್ತಿರುವ ರಸ್ತೆಗಳು: ಬಂದ್ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆ ಬಹುತೇಕ ಸ್ತಬ್ಧವಾಗಿದ್ದು, ಅಂಗಡಿ ಮುಗ್ಗಟ್ಟುಗಳು ಸಹ ಬಂದ್ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಜನನಿಬಿಡ ರಸ್ತೆಗಳು ಇಂದು ಬಿಕೋ ಎನ್ನುತ್ತಿದ್ದವು.

ಮೋದಿ ಹಟಾವೋ ಪ್ರತಿಭಟನೆ: ಕೆ.ಆರ್ ಪುರಂ ನಲ್ಲಿ ರಸ್ತೆ ತಡೆ ನೆಡೆಸಿ ಬಂದ್ ಗೆ ಸಹಕರಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಮನವಿ ಮಾಡಿದರು. ಮೋದಿ ಪ್ರತಿಕೃತಿ ದಹಿಸಿ, ಬಾಯ್ಬಡಿದುಕೊಳ್ಳೋ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಮೋದಿ ಹಠಾವೋ, ಭಾರತ್ ಬಚಾವೋ ಎಂದು ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಕೈಗಾರಿಕೋದ್ಯಮಕ್ಕೂ ಬಂದ್ ಬಿಸಿ: ಭಾರತ್ ಬಂದ್ ಪರಿಣಾಮ ಕೈಗಾರಿಕೋದ್ಯಮದ‌ ಮೇಲೂ ಉಂಟಾಗಿದೆ. ಪೀಣ್ಯ ಇಂಡಸ್ಟ್ರೀಯಲ್ ಏರಿಯಾದಲ್ಲಿ ಸಿಬ್ಬಂದಿ ಮತ್ತು ಕಾರ್ಮಿಕರು ಕೆಲಸಕ್ಕೆ ರಜಾ ಹಾಕಿದ್ದಾರೆ. ಗಾರ್ಮೆಂಟ್ಸ್, ಪ್ಯಾಕ್ಟರಿಗಳ ಗೇಟ್ ಗೆ ಈ ದಿನ ರಜಾ ಎಂದು ನಾಮಫಲಕ ಹಾಕಲಾಗಿದೆ‌. ಪೀಣ್ಯದ ಬಹುತೇಕ ಕೈಗಾರಿಕಾ ಸಂಸ್ಥೆಗಳು ಕ್ಲೋಸ್ ಆಗಿವೆ.

ಊಟ ನೀಡಿ ಮಾನವೀಯತೆ ಮೆರೆದ ವ್ಯಾಪಾರಿಗಳು: ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ತಿಂಡಿ-ಊಟ ಇಲ್ಲದೆ ಪರಾಡುತ್ತಿದ್ದ ಜನರಿಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಊಟ ನೀಡಿ ಹಾರೈಕೆ ಬೀದಿ ಬದಿ ವ್ಯಾಪಾರಿಗಳು ಹೃದಯ ಶ್ರೀಮಂತಿಕೆ ಮೆರೆದರು.

ಶಾಲಾ-ಕಾಲೇಜುಗಳಿಗೆ ರಜೆ: ಕೊಡಗು ಜಿಲ್ಲೆ ಹೊರತು ಪಡಿಸಿ ರಾಜ್ಯಾದ ಬಹುತೇಕ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ಆಯಾ ಜಿಲ್ಲಾಧಿಕಾರಿಗಳು ನಿನ್ನೆಯೇ ರಜೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಇಂದು ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಎದುರಾಗಲಿಲ್ಲ.

ಮೆಜೆಸ್ಟಿಕ್ ಸ್ತಬ್ಧ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಂದ್‌ಗೆ ಬೆಂಬಲ ನೀಡಿರುವುದರಿಂದ ಮೆಜೆಸ್ಟಿಕ್‌ನಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಮೆಜೆಸ್ಟಿಕ್ ಇಂದು ಬಿಕೋ ಎನ್ನುತ್ತಿತ್ತು. ಕನ್ನಡ ಪರ ಸಂಘಟನೆ ಕಾರ್ಯಕರ್ತರು ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಕ್ರಿಕೆಟ್ ಆಡಿದರು‌.

Related Articles

Comments (0)

Leave a Comment