ಐಟಿ ರೈಡ್ ಪ್ರಕರಣ: ಡಿಕೆಶಿ ಸೇರಿ ಐವರಿಗೆ ಮಧ್ಯಂತರ ಜಾಮೀನು ಮಂಜೂರು

ಬೆಂಗಳೂರು: ಡಿ.ಕೆ.ಶಿವಕುಮಾರ್ ನಿವಾಸ ಹಾಗೂ ಕಛೇರಿಗಳ ಮೇಲೆ ಐಟಿ ರೈಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಎಲ್ಲಾ ಐದು ಆರೋಪಿಗಳಿಗೆ ಆರ್ಥಿಕ ಅಪರಾಧಗಳ ನ್ಯಾಯಾಲಯ ಷರತ್ತುಬದ್ದ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಡಿ.ಕೆ.ಶಿವಕುಮಾರ್ ವಿರುದ್ಧ ಐಟಿ ಖಾಸಗಿ ದೂರು ಸಲ್ಲಿಸಲಾಗಿತ್ತು. ಆದರೆ, ಐಟಿ ದೂರು ಕುರಿತು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿಲ್ಲ. ಐಟಿಗೆ ದೂರು ನೀಡಲು ಆಯುಕ್ತರ ಬದಲು ನಿರ್ದೇಶಕ ರಿಂದ ಪೂರ್ವಾನುಮತಿ ಪಡೆಯಲಾಗಿತ್ತು ಎಂಬ ತಾಂತ್ರಿ ಅಂಶವನ್ನು ಮುಂದಿಟ್ಟುಕೊಂಡು ಆರೋಪಿಗಳ ಪರ ಹಿರಿಯ ವಕೀಲರಾದ ಬಿ.ವಿ.ಆಚಾರ್ಯ, ನಂಜುಂಡ ರೆಡ್ಡಿ, ಶಶಿ ಕಿರಣ್ ಶೆಟ್ಟಿ  ಐಟಿ ಕಾಯ್ದೆಯ ಉಲ್ಲಂಘನೆಯಾಗಿದೆ ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.

ಅಲ್ಲದೆ ಈಗಾಗಲೇ ಸಚಿನ್ ನಾರಾಯಣ್ ನೀಡಿರುವ ದೂರಿಗೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರಣೆ ತಡೆಯಾಜ್ಞೆ ನೀಡಿದೆ ಎಂದು ವಾದ ಮಂಡಿಸಿದರು. ಆರೋಪಿಗಳ ಪರ ವಾದ ಪುರಸ್ಕರಿಸಿದ ಆರ್ಥಿಕ ಅಪರಾಧಗಳ ನ್ಯಾಯಾಲಯ ಡಿ.ಕೆ.ಶಿವಕುಮಾರ್,
ಸುನಿಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಹಾಗೂ ರಾಜೇಂದ್ರ ಅವರಿಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 50 ಸಾವಿರ ರೂಪಾಯಿ ಬಾಂಡ್
ನೀಡುವಂತೆ ಷರತ್ತು ವಿಧಿಸಿದೆ.

ಮುಂದಿನ ವಿಚಾರಣೆ ವೇಳೆ ಹೈಕೋರ್ಟ್ ಅರ್ಜಿಯ ಸ್ಟೇಟಸ್ ತಿಳಿಸಿ ಎಂದು ಸೂಚಿಸಿರುವ ನ್ಯಾಯಾಲಯ ಸೆ.20ಕ್ಕೆ ವಿಚಾರಣೆ ಮುಂದೂಡಿದೆ.

Related Articles

Comments (0)

Leave a Comment