ಸದನದಲ್ಲಿ ತಾಕತ್ತಿನ ಚರ್ಚೆ,ಬಿಎಸ್ವೈ ಪಟ್ಟಿಗೆ ಕಾಂಗ್ರೆಸ್ ಸುಸ್ತು:ಕಡೆಗೂ ಕೃಷ್ಣ ಸಂಧಾನ ಸಫಲ
- by Suddi Team
- July 11, 2018
- 520 Views
ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ತಾಕತ್ತಿನ ಪದ ಬಳಕೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ಕೋಲಾಹಲ ಸೃಷ್ಠಿಗೆ ಕಾರಣವಾಯ್ತು,ಆಡಳಿತ ಪಕ್ಷದ ನಡೆಗೆ ವಿರೋಧ ಪಕ್ಷ ಕಲಾಪ ಬಹಿಷ್ಕರಿಸಿ ನಂತರ ಸಂಧಾನ ನಡೆಸುವ ಮೂಲಕ ಸದನವನ್ನು ಆರಂಭಿಸಬೇಕಾಯ್ತು.ಇಲ್ಲಿ ಸ್ಪೀಕರ್ ರಮೇಶ್ ಕುಮಾರ್ ಕೊರತೆ ಎದ್ದು ಕಾಣ್ತು.
ಮಧ್ಯಾಹ್ನದ ಕಲಾಪದಲ್ಲಿ ನಾವು ಮಂಡ್ಯ ಮೈಸೂರು ಹಾಸನ ಜಿಲ್ಲೆಗಳಿಗೆ ಕೊಟ್ಟಂತೆ ನೂರಾರು ಕೋಟಿ ಕೊಡಿ ಎಂದು ಕೇಳುತ್ತಿಲ್ಲ.ನಮ್ಮ ತಹಸಿಲ್ದಾರ್ ಕಚೇರಿಗೆ ಹೋಗೋದು ಕಷ್ಟವಾಗುತ್ತಿದೆ.ಉತ್ತರ ಕರ್ನಾಟಕದ ಹೊಸ ತಾಲೂಕುಗಳಿಗೆ ತಲಾ ಹತ್ತುಕೋಟಿ ಕೊಡಿ ಎಂದರೆ ನಿಮಗೆ ಆಗಲ್ಲ ಎಂದು ಬಿಜೆಪಿಯ ಎ.ಎಸ್.ಪಾಟೀಲ್ ನಡಹಳ್ಳಿ ಆರೋಪಿಸಿದರು. ಇದಕ್ಕೆ ಜೆಡಿಎಸ್ ನ ಅನ್ನದಾನಿ ಆಕ್ಷೇಪ ವ್ಯಕ್ತಪಡಿಸಿ ಉತ್ತರ ಕರ್ನಾಟಕಕ್ಕೆ ಯಾವ ವಿಷಯದಲ್ಲಿ ಅನುದಾನ ಕಡಿಮೆ ಮಾಡಲಾಗಿದೆ ಎಂದು ವಿವರಿಸಿ ಎಂದು ಸವಾಲು ಹಾಕಿದರು.ಉತ್ತರ ಕರ್ನಾಟಕದಲ್ಲಿ ಒಂದೇ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೋರಿಸಿ ಎಂದು ನಡಹಳ್ಳಿ ಮರು ಸವಾಲು ಎಸೆದ್ರು.ಗುಲ್ಬರ್ಗದಲ್ಲಿ 25 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಕಾಮಗಾರಿ ನಡೆಯುತ್ತಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮಾಹಿತಿ ನೀಡಿದ್ರು.
ಅನ್ನದಾನಿ ಮಧ್ಯಪ್ರವೇಶಕ್ಕೆ ನಡಹಳ್ಳಿ ಆಕ್ಷೇಪ ವ್ಯಕ್ತಪಡಿಸಿದ್ರು.ನಡಹಳ್ಳಿ ಸಮರ್ಥನೆಗೆ ವಿರೋಧಪಕ್ಷ ನಾಯಕ ಯಡಿಯೂರಪ್ಪ ದಾವಿಸಿದ್ರು.ಆಗ ಅನ್ನದಾನಿ ಸಮರ್ಥನೆಗೆ ಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನಿಂತ್ರು.ಇದರಿಂದ ಸದನದಲ್ಲಿ ಗದ್ದಲ ಶುರುವಾಗಿ ಯಡಿಯೂರಪ್ಪ,ಡಿಕೆ ಶಿವಕುಮಾರ್ ನಡುವೆ ವಾಗ್ವಾದ ನಡೀತು.
ಬೇರೆ ಶಾಸಕರು ಮಾತನಾಡುವಾಗ ಪದೇ ಪದೇ ಎದ್ದು ನಿಲ್ತಿದ್ದಾಗ ನೀವ್ಯಾಕೆ ಸುಮ್ಮನಿರಿಸಲಿಲ್ಲ, ಮಾತನಾಡಬೇಡಿ ಎಂದಿರಬೇಕಿತ್ತು ಎಂದು ಡಿಕೆಶಿ ಬಿಎಸ್ವೈಗೆ ಟಾಂಗ್ ಕೊಟ್ರು.ಆಗ ಆಡಳಿತ ಪಕ್ಷದ ಸದಸ್ಯರ ಅರೋಪ ಪ್ರತ್ಯಾರೋಪ ತಡೆದುಕೊಳ್ಳುವ ತಾಕತ್ತಿದೆ ಎಂದು ಎ.ಎಸ್.ಪಾಟೀಲ್ ನಡಹಳ್ಳಿ ಹೇಳಿದ್ರು.ನಡಹಳ್ಳಿ ಹೇಳಿಕೆಗೆ ಡಿಕೆಶಿ ತರಾಟೆ ತೆಗೆದುಕೊಂಡ್ರು. ನಮ್ಗೂ ತಾಕತ್ತಿದೆ ತೋರಿಸ್ತೇವೆ ಎಂದ್ರು.ಇದಕ್ಕೆ ಕೈಜೋಡಿಸಿದ ಜಮೀರ್ ಅಹಮದ್ ಖಾನ್ ಬೆಂಬಲ ನೀಡಿದ್ರು.
ಆಗ ಚುಚ್ಚಿ ಮಾತನಾಡಬಾರದು ಎಂದು ಡೆಪ್ಯುಟಿ ಸ್ಪೀಕರ್ ವಿರೋಧ ಪಕ್ಷದ ಸದಸ್ಯರಿಗೆ ಸಲಹೆ ನೀಡಿದ್ರು.ಈ ಹೇಳಿಕೆಗೆ ಕೆರಳಿದ ವಿರೋಧ ಪಕ್ಷ ಬಿಎಸ್ ಯಡಿಯೂರಪ್ಪ ನಿಮ್ಮಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದು ಸದನದಲ್ಲಿ ಗದ್ದಲವೆಬ್ಬಿಸಿದ ಘೋಷಣೆ ಕೂಗಿ ಆಕ್ರೋಷ ವ್ಯಕ್ತಡಿಪಡಿಸಿದ್ರು ಸಭಾತ್ಯಾಗ ಮಾಡಿ ಸದನದಿಂದ ಹೊರನಡೆದ್ರು.
ಈ ವೇಳೆ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಎ.ಎಸ್.ಪಾಟೀಲ್ ನಡಹಳ್ಳಿಯವರು ಯಾವುದೇ ಸದಸ್ಯರು ಮಾತನಾಡುತ್ತಿದ್ದಾಗ ಪದೇ ಪದೇ ಮಧ್ಯಪ್ರವೇಶಿಸಿ ಅಡ್ಡಿ ಮಾಡುತ್ತಿದ್ದರು.ಅದನ್ನು ನಾವು ಪ್ರಶ್ನಿಸಿದೆವು.ಅದಕ್ಕೆ ತಾಕತ್ತಿನ ಮಾತನಾಡಿದ್ದಾರೆ.ಹಿಂದೆ ತಾಕತ್ತಿನ ಸವಾಲು ಹಾಕಿದ್ದಕ್ಕೆ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೇವೆ.ವಿರೋಧ ಪಕ್ಷದವರನ್ನು ಹೊರಗಿಟ್ಟು ಸದನ ನಡೆಸಬೇಕು ಎಂಬುದು ನಮಗೂ ಇಚ್ಛೆ ಇಲ್ಲ ಎಂದ್ರು.
ವಿರೋಧ ಪಕ್ಷದವರಿಲ್ಲದೆ ಸದನ ನಡೆಸೋದು ಸರಿಯಲ್ಲ. ಸದನವನ್ನು ಸ್ವಲ್ಪಕಾಲ ಮುಂದೂಡಿ ಎಂದು ಜೆಡಿಎಸ್ ನ ಎ.ಟಿ.ರಾಮಸ್ವಾಮಿ ನೀಡಿದ ಸಲಹೆಯನ್ನು ಮಾನ್ಯ ಮಾಡಿದ ಉಪ ಸಭಾಧ್ಯಕ್ಷ ಕೃಷ್ಣಾರೆಡ್ಡಿ ಸದನವನ್ನು 15 ನಿಮಿಷ ಮುಂದೂಡಿದ್ರು.
ಮತ್ತೆ ಸದನ ಆರಂಭಗೊಂಡ್ರೂ ಸದನ ಕಲಾಪಕ್ಕೆ ಬಿಜೆಪಿ ಸದಸ್ಯರು ಆಗಮಿಸಲಿಲ್ಲ.ಸ್ಪೀಕರ್ ಪರವಾಗಿ ಯಡಿಯೂರಪ್ಪ ಅವರನ್ನು ಸಂಧಾನ ಸಭೆಗೆ ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಆಹ್ವಾನಿಸಿದ್ರು.ಆದ್ರೆ ಸ್ಪೀಕರ್ ಕೊಠಡಿಗೆ ಸಂಧಾನಕ್ಕೆ ತೆರಳಲು ವಿರೋಧ ಪಕ್ಷ ನಾಯಕ ಯಡಿಯೂರಪ್ಪ ನಿರಾಕರಿಸಿದ್ರು.ಕೋರಂ ಬೆಲ್ ಆಗುವ ಮೊದಲೇ ತಮ್ಮನ್ನ ಆಹ್ವಾನಿಸಬೇಕಿತ್ತು ಎಂದು ಪಟ್ಟು ಹಿಡಿದು ಮೊಗಸಾಲೆಯಲ್ಲೇ ಕುಳಿತ್ರು.ಇದರಿಂದ ಸದನ ಪುನರಾರಂಭಗೊಂಡ್ರೂ ವಿರೋಧಪಕ್ಷ ಶಾಸಕರು ಬಾರದ ಕಾರಣ ಸದನವನ್ನು ಮತ್ತೆ ಹತ್ತು ನಿಮಿಷ ಮುಂದೂಡಲಾಯ್ತು.
ನಂತರ ಕಾನೂನು ಸಚಿವ ಕೃಷ್ಣಬೈರೇಗೌಡ ಸಂಧಾನದ ಹೊಣೆ ನಿಭಾಯಿಸಿದ್ರು.ಕೃಷ್ಣಬೈರೇಗೌಡರ ಸಂಧಾನಕ್ಕೆ ಸಹಮತ ನೀಡಿದ ಯಡಿಯೂರಪ್ಪ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳಲು ಸಮ್ಮತಿಸಿದ್ರು. ಇದ್ರಿಂದ ವಿಧಾನಸಭೆ ಕಲಾಪ ಪುನರಾರಂಭಗೊಂಡಿತು.
ಸದನದಲ್ಲಿ ಮಾತನಾಡಿದ ಯಡಿಯೂರಪ್ಪ, ಎ.ಎಸ್.ಪಾಟೀಲ್ ನಡಹಳ್ಳಿ ಒಂದೇ ಒಂದು ಶಬ್ದ ಅಸಂಸದೀಯ ಪದ ಮಾತನಾಡಿದ್ರೆ ನೀವು ಅದನ್ನು ಕಡತದಿಂದ ತೆಗಿಸಿ.ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವುದನ್ನು ಅವರದ್ದೇ ಶಬ್ದಗಳಲ್ಲಿ ಹೇಳುತ್ತಿದ್ದರು.ಡಿ.ಕೆ.ಶಿವಕುಮಾರ್ ರಂತಹಾ ಹಿರಿಯ ಸಚಿವರೇ ಸದನ ಕಲಾಪ ವ್ಯತ್ಯಾಸವಾಗುವಂತೆ ಮಾಡಿದ್ದು ಬೇಸರ ತಂದಿತು.ಇನ್ನು ಮುಂದೆ ಡಿ.ಕೆ.ಶಿವಕುಮಾರ್ ಹೀಗೆ ನಡೆದುಕೊಳ್ಳಬಾರದು.ನಾವೂ ಕೂಡ ಬೇರೆಯವರು ಮಾತನಾಡುವಾಗ ಅಡ್ಡಿಪಡಿಸದಂತೆ ಗಮನ ಹರಿಸುತ್ತೇವೆ.ಆದರೆ ನಾಳೆ ಇಡೀ ದಿನ ನಮ್ಮ ಸದಸ್ಯರು ಚರ್ಚೆಯಲ್ಲಿ ಭಾಗಿಯಾಗುತ್ತಾರೆ.ನಾಡಿದ್ದು ಮುಖ್ಯಮಂತ್ರಿ ಯವರು ಉತ್ತರ ಕೊಡಲಿ ಎಂಬುದು ನಮ್ಮ ಅಪೇಕ್ಷೆ ಎಂದ್ರು.
ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಸಂಸದೀಯ ವ್ಯವಸ್ಥೆಯಲ್ಲಿ ಟೀಕೆ ಸಹಜ.ಆದರೆ ಅದು ಕಲಾಪದ ಶಿಸ್ತನ್ನು ಮೀರದಿರಲಿ.ಇಂದೂ ಕೂಡ ಎಷ್ಟು ಹೊತ್ತು ಆದರೂ ಸರಿ ಕಲಾಪ ನಡೆಸಲು ಸಿದ್ದರಿದ್ದೇವೆ ಎಂದ್ರು.
ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ವಿರೋಧ ಪಕ್ಷ ಎರಡೂ ಅಗತ್ಯ.ಅವರು ಪದೇ ಪದೇ ಮಧ್ಯಪ್ರವೇಶ ಮಾಡುತ್ತಿದ್ದ ಕಾರಣ ನಾವು ಸಂಯಮ ಕಳೆದುಕೊಳ್ಳಬೇಕಾಯ್ತು ಎಂದು ಸಮಜಾಯಿಷಿ ನೀಡಿ ವಿವಾದ ಗದ್ದಲ ಗೊಂದಲಕ್ಕೆ ತೆರೆ ಎಳೆದ್ರು.
ಸ್ಪೀಕರ್ ರಮೇಶ್ ಕುಮಾರ್ ಇದ್ದಿದ್ರೆ ಈ ಪರಿಸ್ಥಿತಿಯನ್ನು ಅಚ್ಚುಕಟ್ಟಾಗಿ ನಿಭಾಯಿಸ್ತಾ ಇದ್ರು,ಇಷ್ಟು ದೊಡ್ಡದಾಗಲು ಅವರು ಬಿಡುತ್ತಿರ್ಲಿಲ್ಲ ಎಂದು ಮೊಗಸಾಲೆಯಲ್ಲಿ ಸದಸ್ಯರು ಸ್ಪೀಕರ್ ಅನುಪಸ್ಥಿತಿ ಬಗ್ಗೆ ಮಾತಾಡಿಕೊಳ್ತಾ ಇದ್ರು.
Related Articles
Thank you for your comment. It is awaiting moderation.
Comments (0)