ಕಾವೇರಿಗಾಗಿ ಮತ್ತೆ ಕಾನೂನು ಸಮರ: ಸರ್ವಪಕ್ಷ ಸಭೆಯಲ್ಲಿ ಮಹತ್ವದ ನಿರ್ಧಾರ!

ಬೆಂಗಳೂರು: ರಾಜ್ಯದ ಕಾವೇರಿ ನೀರಿನ ಹಕ್ಕನ್ನು ನಿರ್ವಹಣಾ ಪ್ರಾಧಿಕಾರದ ಮೂಲಕ ಕಸಿದುಕೊಂಡಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುವ ಮಹತ್ವದ ನಿರ್ಧಾರವನ್ನು ಸರ್ವಪಕ್ಷ ಸಭೆಯಲ್ಲಿ ಕೈಗೊಳ್ಳಲಾಗಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ
ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರ ವಿವಾದ ಸಂಬಂಧ ಕರೆಯಲಾಗಿದ್ದ ಸರ್ವಪಕ್ಷ ಸಭೆ ನಡೆಯಿತು. ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ
ವಿಪಕ್ಷ ನಾಯಕ ಯಡಿಯೂರಪ್ಪ,ಡಿಸಿಎಂ ಪರಮೇಶ್ವರ್,ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ವೀರಪ್ಪ ಮೊಯ್ಲಿ ಸೇರಿದಂತೆ ನದಿ ವ್ಯಾಪ್ತಿ ಜನಪ್ರತಿನಿಧಿಗಳು ಕಾನೂನು ತಜ್ಞರು ಪಾಲ್ಗೊಂಡಿದ್ದರು.

ಕಾವೇರಿ ಜಲ ವಿವಾದದ ಇತ್ತೀಚಿನ ಬೆಳವಣಿಗೆಗಳು,ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆಯಿಂದ ರಾಜ್ಯಕ್ಕಾಗಿರುವ ಅನ್ಯಾಯದ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಸಭೆ ನಂತರ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಮಗಾಗಿರುವ ಅನ್ಯಾಯವನ್ನು ಕೇಂದ್ರದ ಮುಂದೆ ಪ್ರತಿಭಟಿಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ. ಅಂತಿಮ ಹಂತದ ನ್ಯಾಯಾಲಯ ಹೋರಾಟದಲ್ಲಿ ಹೇಗೆ ವಾದ ಮಂಡನೆ ಮಾಡಬೇಕು ಅಂತ ಚರ್ಚಿಸಲಾಗಿದೆ.ಜುಲೈ 2 ರಂದು ಕಾವೇರಿ ನದಿ ನೀರು ನಿರ್ವಹಣಾ ಸಭೆ ಇದೆ.ಆ ಸಭೆಯಲ್ಲಿ ನಮ್ಮ ಪ್ರತಿನಿಧಿ ಇರಲಿದ್ದಾರೆ ಎಂದರು.

ವಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಲೋಕಸಭೆ ಅಧಿವೇಶನದಲ್ಲಿ ಚರ್ಚಸಿಲು ತೀರ್ಮಾನ ಮಾಡಲಾಗಿದೆ.ಸಾಧ್ಯವಾದ್ರೆ ಸಂವಿಧಾನ ಪೀಠದಲ್ಲಿ ಚರ್ಚಿಸಲು ಸಿದ್ದ.ಸಭೆಯಲ್ಲಿ ಉತ್ತಮ ಚರ್ಚೆಯಾಗಿದೆ.ಜಲ, ನಾಡು, ನುಡಿ ವಿಚಾರದಲ್ಲಿ ನಾವು ಯಾವಾಗ್ಲೂ ಸರ್ಕಾರದ ಜೊತೆಗೆ ಇದ್ದೇವೆ.ಕಾವೇರಿ ವಿಚಾರದಲ್ಲಿ ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.

ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಮಾತನಾಡಿ, ಮಂತ್ರಿಗಳು,ಸಂಸದರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ‌ ನ್ಯಾಯ ಎಲ್ಲಿ ಸಿಕ್ಕಿದೆ,ಅನ್ಯಾಯ ಎಲ್ಲಿ ಆಗಿದೆ ಅನ್ನುವುದನ್ನ ತಿಳಿಸಿದ್ದಾರೆ‌.ಪ್ರಧಾನಿಯವರ ಭೇಟಿಗೆ ಅವಕಾಶ ಕೋರಿದ್ದೆವು ನಮ್ಮ ಸಮಸ್ಯೆ ಮನವರಿಕೆ ಮಾಡಿಕೊಡಲು ಬೇಡಿಕೆ ಇಟ್ಟಿದ್ದೆವು ಆದರೆ ಅವರು ತರಾತುರಿಯಲ್ಲಿ ಕಮಿಟಿ ರಚಿಸಿದ್ದಾರೆ ಕಮಿಟಿಗೆ ನಾವು ತೀರ್ವ ವಿರೋಧ ವ್ಯಕ್ತಪಡಿಸಿದ್ದೇವೆ.ನಿರ್ವಹಣಾ ಮಂಡಳಿಗೆ ರಾಜ್ಯದ ಪ್ರತಿನಿಧಿಗಳಾಗಿ ರಾಕೇಶ್ ಸಿಂಗ್,ಕಾವೇರಿ ನೀರಾವರಿ ನಿಗಮದ ಎಂಡಿ ಪ್ರಸನ್ನ ಅವರ ಹೆಸರನ್ನು ಕಳಿಸಿದ್ದೇವೆ.ರಾಜ್ಯದ ಪ್ರತಿನಿಧಿಗಳಾಗಿ ಅವರು ಭಾಗವಹಿಸಲಿದ್ದಾರೆ, ಇಬ್ಬರೂ ರಾಜ್ಯದ ಅಭಿಪ್ರಾಯ ಮಂಡಿಸಲಿದ್ದಾರೆ‌ ಎಂದರು.

30 ದಿನದ ಅಧಿವೇಶನದಲ್ಲಿ ಇದನ್ನ ಮಂಡಿಸಬೇಕು
ಸಂಸತ್ತಿನಲ್ಲಿ ನಮ್ಮ‌ ಕೂಗು ಮುಟ್ಟಬೇಕಿದೆ‌ ಹೀಗಾಗಿ ರಾಜ್ಯದ ಸಂಸದರೆಲ್ಲ ಸಜ್ಜಾಗಿದ್ದಾರೆ‌ ಅವರಿಗೆ ಯಾವ ದಾಖಲೆ ಬೇಕೋ ಅದನ್ನ ನಾವು ಒದಗಿಸುತ್ತೇವೆ.ಪ್ರಾಧಿಕಾರ ರಚನೆಯಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದು ನಮಗೆ ನ್ಯಾಯ ಸಿಗುವಂತಾಗಲು ಕಾನೂನು ಹೋರಾಟಕ್ಕೆ ಚಿಂತನೆ ನಡೆಸಿದ್ದೇವೆ, ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸುವ ತೀರ್ಮಾನ ಮಾಡಿದ್ದೇವೆ ಎಂದರು.

Related Articles

Comments (0)

Leave a Comment